ದಾವಣಗೆರೆಯಲ್ಲಿ ಗೆಲುವು ನಮ್ದೇ: ಸಚಿವ ಮಲ್ಲಿಕಾರ್ಜುನ

| Published : May 08 2024, 01:00 AM IST

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎರಡು ಸಲ ಮೋಸವಾಗಿದ್ದು, ಈ ಸಲ ಯಾವುದೇ ಮೋದಿ, ವಾಜಪೇಯಿ ಅಲೆಗಳು ಕ್ಷೇತ್ರದಲ್ಲಿ ನಡೆಯಲ್ಲ. ಈ ಸಲ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- 2 ಸಲ ಮೋಸವಾಗಿದೆ, ಈಗ ಮೋದಿ, ವಾಜಪೇಯಿ ಯಾವುದೇ ಅಲೆ ನಡೆಯೋದಿಲ್ಲ ಎಂದ ಶಾಸಕ

- ಎಂಸಿಸಿ ಬಿ ಬ್ಲಾಕ್‌ ಐಎಂಎ ಭವನ ಮತಗಟ್ಟೆಯಲ್ಲಿ ತಂದೆ, ಪತ್ನಿ, ಮಕ್ಕಳೊಂದಿಗೆ ಆಗಮಿಸಿ ಮತದಾನ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಎರಡು ಸಲ ಮೋಸವಾಗಿದ್ದು, ಈ ಸಲ ಯಾವುದೇ ಮೋದಿ, ವಾಜಪೇಯಿ ಅಲೆಗಳು ಕ್ಷೇತ್ರದಲ್ಲಿ ನಡೆಯಲ್ಲ. ಈ ಸಲ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನ ಐಎಂಎ ಭವನದಲ್ಲಿ ಮಂಗಳವಾರ ತಮ್ಮ ತಂದೆ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ತಮ್ಮ ಪತ್ನಿ, ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ ಎಂ.ಶಾಮನೂರು, ಶ್ರೇಷ್ಠ ಎಂ.ಶಾಮನೂರು ಜೊತೆಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ದಾವಣಗೆರೆಯಲ್ಲಿ, ಸಿಎಂ ಸಿದ್ದರಾಮಯ್ಯ ಹೊನ್ನಾಳಿ, ಹರಿಹರದಲ್ಲಿ ಡಾ.ಪ್ರಭಾ ಪರ ಪ್ರಚಾರ ಮಾಡಿದ್ದಾರೆ. ರಾಜ್ಯದಲ್ಲಿ ಯಾವುದೇ ಮೋದಿ ಅಲೆಯಾಗಲೀ, ಬಿಜೆಪಿ ಅಲೆಯಾಗಲಿ ಇಲ್ಲ. ಇರುವೊಂದೇ ಭರವಸೆ ಅದು ಕಾಂಗ್ರೆಸ್ ಭರವಸೆ. ನಾವು ಈಡೇರಿಸಿರುವ ಗ್ಯಾರಂಟಿ ಹಾಗೂ ಅಭಿವೃದ್ಧಿ ಅಲೆ ಮಾತ್ರ ಇದೆ ಎಂದು ತಿಳಿಸಿದರು.

ಪ್ರತಿ ಕಾರ್ಯಕರ್ತರು ಶ್ರಮವಹಿಸಿ, ಕೆಲಸ ಮಾಡುತ್ತಿದ್ದಾರೆ. ಈ ಸಲ ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಮುನ್ನಡೆ ಸಾಧಿಸಲಿದೆ. ಅತಿ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದರು.

ಸಿದ್ಧೇಶ್ವರ ವಿರುದ್ಧ ವಾಗ್ದಾಳಿ:

ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಇವಿಎಂ ಮತ ಮತ ಚಲಾಯಿಸುವಾಗ ಈ ಚಿಹ್ನೆಗೆ ಒತ್ತು ಎಂಬುದಾಗಿ ಸಂಸದ ಸಿದ್ಧೇಶ್ವರ ಹೇಳುತ್ತಿರುವ ವೀಡಿಯೋ ವೈರಲ್ ಆಗಿದೆ. ತಮ್ಮ ಚಿಹ್ನೆಯೇ ಗೊತ್ತಿಲ್ಲದವರನ್ನು ಜನರು ಹೇಗೆ ಆಯ್ಕೆ ಮಾಡುತ್ತಾ ಬಂದಿದ್ದಾರೋ ಗೊತ್ತಿಲ್ಲ. ಅಲ್ಲದೇ, ಒಬ್ಬರು ಮತದಾನ ಮಾಡುವಾಗ ಮತ್ತೊಬ್ಬರು ಹೋಗಿ ಚಿಹ್ನೆ ತೋರಿಸುವುದು ಸಹ ಕಾನೂಬಾಹಿರ ಎಂದು ಸಂಸದ ಸಿದ್ದೇಶ್ವರ ಮತಗಟ್ಟೆಯಲ್ಲಿ ತೋರಿದ ವರ್ತನೆ ಬಗ್ಗೆ ಎಸ್‌.ಎಸ್‌. ಮಲ್ಲಿಕಾರ್ಜುನ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಮತದಾನವು ಪ್ರತಿಯೊಬ್ಬರ ಸಂವಿಧಾನಬದ್ಧ ಹಕ್ಕು. ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರ ಪರಿಶ್ರಮಕ್ಕೆ ಮತದಾರರು ಸ್ಪಂದಿಸಿ, ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಮರ್ಥ ಎಂ.ಶಾಮನೂರು, ಶ್ರೇಷ್ಠ ಎಂ.ಶಾಮನೂರು ಇತರರು ಇದ್ದರು.

- - - ಬಾಕ್ಸ್ 2 ಲಕ್ಷ ಮತ ಅಂತರದಿಂದ ಗೆಲ್ತೇವೆ: ಶಾಮನೂರು

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ 2 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವುದು ನಾವೇ. ಬೇಕಿದ್ದರೆ ನಾನು ₹1ಕ್ಕೆ ₹100 ಕೊಡ್ತೀನಿ ಎಂದು ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಭವಿಷ್ಯ ನುಡಿದಿದ್ದಾರೆ.

ನಗರದ ಎಂಸಿಸಿ ಬಿ ಬ್ಲಾಕ್‌ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮಂಗಳವಾರ ಪುತ್ರ, ಸೊಸೆ, ಮೊಮ್ಮಕ್ಕಳ ಜೊತೆ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಎಂಬುದಾಗಿ ಸಂಸದ ಸಿದ್ದೇಶ ಆರೋಪಿಸಿದ್ದಾನೆ. ಅವನೇನು ಕತ್ತೆ ಕಾಯುತ್ತಿದ್ದನಾ? ಅವನಿಗೆ ಹೋಗಿ ಹೇಳಿ, ನಿಮ್ಮ ಮಾವ ನಿಮಗೆ ಕತ್ತೆ ಕಾಯೋಕೆ ಹೋಗು ಅಂದಾ ಅಂತಾ ಎಂಬುದಾಗಿ ಏಕವಚನದಲ್ಲೇ ಸಂಸದ ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದರು.

- - - -7ಕೆಡಿವಿಜಿ4, 5:

ದಾವಣಗೆರೆ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ, ಪತಿ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಮಕ್ಕಳಾದ ಸಮರ್ಥ, ಶ್ರೇಷ್ಠ ಹಾಗೂ ಕುಟುಂಬ ಸದಸ್ಯರು, ಬೆಂಬಲಿಗರು.

- - -

-7ಕೆಡಿವಿಜಿ6:

ದಾವಣಗೆರೆ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪತ್ನಿ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಸುದ್ದಿಗಾರರೊಂದಿಗೆ ಮಾತನಾಡಿದರು.