ವಿದ್ಯಾಸಾಗರ ಮಹಾರಾಜರು ದೇಶ ಕಂಡ ಅಪರೂಪದ ಸಂತರು-ಆನಂದ ಬಸ್ತಿ

| Published : Feb 28 2024, 02:33 AM IST

ಸಾರಾಂಶ

ರಾಷ್ಟ್ರ ಸಂತರೂ, ಅಹಿಂಸಾ ಧರ್ಮ ಪ್ರಭಾವಕರೂ ಆಗಿದ್ದ ಸಂತ ಶಿರೋಮಣಿ ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ ಮಹಾರಾಜರು ಭಾರತ ಕಂಡ ಅಪರೂಪದ ಸಂತರಲ್ಲಿ ಒಬ್ಬರಾಗಿದ್ದರು ಎಂದು ಜಿಲ್ಲಾ ದಿಗಂಬರ ಜೈನ ಸಮಾಜದ ಹಿರಿಯರಾದ ಆನಂದ ಎನ್. ಬಸ್ತಿ ಹೇಳಿದರು.

ಗದಗ: ರಾಷ್ಟ್ರ ಸಂತರೂ, ಅಹಿಂಸಾ ಧರ್ಮ ಪ್ರಭಾವಕರೂ ಆಗಿದ್ದ ಸಂತ ಶಿರೋಮಣಿ ಆಚಾರ್ಯ ಶ್ರೀ ೧೦೮ ವಿದ್ಯಾಸಾಗರ ಮಹಾರಾಜರು ಭಾರತ ಕಂಡ ಅಪರೂಪದ ಸಂತರಲ್ಲಿ ಒಬ್ಬರಾಗಿದ್ದರು ಎಂದು ಜಿಲ್ಲಾ ದಿಗಂಬರ ಜೈನ ಸಮಾಜದ ಹಿರಿಯರಾದ ಆನಂದ ಎನ್. ಬಸ್ತಿ ಹೇಳಿದರು.ಅವರು ನಗರದ ಪ್ರಕಾಶ ಮುತ್ತಿನ ಅವರ ಕಟ್ಟಡದಲ್ಲಿರುವ ಗದಗ ಜಿಲ್ಲಾ ದಿಗಂಬರ ಜೈನ ಸಂಘದ ಕಾರ್ಯಾಲಯದಲ್ಲಿ ನಡೆದ ಆಚಾರ್ಯ ವಿದ್ಯಾಸಾಗರ ಮಹಾರಾಜರಿಗೆ ಭಕ್ತಿಯ ವಿನಯಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಚಿಕ್ಕೋಡಿ-ಸದಲಗಾ ವಿದ್ಯಾಸಾಗರ ಮಹಾರಾಜರ ಜನ್ಮಭೂಮಿಯಾಗಿದ್ದರೂ ಅವರು ಕೋಶ ಓದಿ ದೇಶ ಸುತ್ತಿದ ಸಾಧಕರು. ಛತ್ತೀಸ್‌ಗಡ ರಾಜ್ಯದ ಡೋಂಗರಗಡ ಚಂದ್ರಗಿರಿ ಜೈನ ತೀರ್ಥ ಪುಣ್ಯ ಕ್ಷೇತ್ರದಲ್ಲಿ ಸಲ್ಲೇಖನ ಪೂರ್ವಕ ಸಮಾಧಿ ಮರಣ ಸಾಧಿಸಿ ಇತ್ತೀಚೆಗೆ ಜಿನೈಕ್ಯರಾದರು.

ವಿದ್ಯಾಸಾಗರ ಮಹಾರಾಜರು ಧರ್ಮ, ಶಿಕ್ಷಣ, ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡಿದ್ದಾರೆ. ಮಹಾರಾಜರು ಬರೆದ ಮೂಕಮಾಟಿ ಕಾವ್ಯದ ಮೇಲೆ ೬೦ಕ್ಕೂ ಹೆಚ್ಚು ಜನರು ಪಿ.ಎಚ್.ಡಿ. ಪದವಿ ಪಡೆದಿರುವುದು ಒಂದು ಇತಿಹಾಸವೇ ಎನ್ನಬಹುದು ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ದಿಗಂಬರ ಜೈನ ಸಂಘದ ಅಧ್ಯಕ್ಷ ಪಿ.ಎ. ಕುಲಕರ್ಣಿ ಮಾತನಾಡಿ, ವಿದ್ಯಾಸಾಗರ ಮಹಾರಾಜರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರಲ್ಲದೆ, ಅವರು ಹಾಕಿಕೊಟ್ಟ ಧರ್ಮ ಪರಂಪರೆ, ನೀತಿ, ತತ್ವ, ಸಂದೇಶಗಳನ್ನು ನಾವಿಂದು ಪಾಲಿಸುವ ಮೂಲಕ ಅವರನ್ನು ಸದಾಕಾಲ ಸ್ಮರಿಸಬೇಕಿದೆ ಎಂದರು.

ಸಂಘದ ಕಾರ್ಯದರ್ಶಿ ಪ್ರಕಾಶ ಮುತ್ತಿನ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಿ.ಜಿ. ನಾವಳ್ಳಿ, ವಿ.ಎನ್. ದಾಕಪ್ಪನವರ, ಸಂತೋಷ ಕುಲಕರ್ಣಿ, ಎಂ.ಟಿ. ಕಬ್ಬಿಣ, ಅನಂತರಾಜ ಬಸ್ತಿ, ಆಕಾಶ ಮುತ್ತಿನ, ವಸಂತಮಾಲಾ ದೇಸಾಯಿ, ಸುಮನ್ ಮುತ್ತಿನ, ಪ್ರಾಚ್ಯವಸ್ತು ಸಂಶೋಧಕ ಅ.ದ. ಕಟ್ಟಿಮನಿ ಸೇರಿದಂತೆ ದಿಗಂಬರ ಜೈನ್ ಸಮಾಜ ಬಾಂಧವರು ಇದ್ದರು. ಸಂಕಪ್ಪ ನಾವಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.