ವಿಜಯ ಪ್ರಕಾಶ್ ಗಾಯನಕ್ಕೆ ಮಿಂದೆದ್ದ ನಾದ ಪ್ರಿಯರು

| Published : May 25 2024, 12:52 AM IST

ಸಾರಾಂಶ

ಬೆಳಗಾವಿಯ ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಜಿ‌.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ಕಾರ್ಯಕ್ರಮ ಬ್ಲಿಸ್ 2024ರ ಅಂಗವಾಗಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ಗಾನಸುಧೆ ಜರುಗಿತು. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಬೆಳಗಾವಿಯ ಜನತೆ ಸಂಗೀತದಲ್ಲಿ ಮಿಂದೆದ್ದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಇಲ್ಲಿನ ಶಿವಬಸವ ನಗರದ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಎಸ್.ಜಿ‌.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರಮಟ್ಟದ ತಾಂತ್ರಿಕ ಉತ್ಸವ ಕಾರ್ಯಕ್ರಮ ಬ್ಲಿಸ್ 2024ರ ಅಂಗವಾಗಿ ಕಾಲೇಜಿನ ಮೈದಾನದಲ್ಲಿ ಆಯೋಜಿಸಿದ್ದ ಖ್ಯಾತ ಹಿನ್ನೆಲೆ ಗಾಯಕ ವಿಜಯ ಪ್ರಕಾಶ್ ಅವರ ಗಾನಸುಧೆ ಜರುಗಿತು. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಬೆಳಗಾವಿಯ ಜನತೆ ಸಂಗೀತದಲ್ಲಿ ಮಿಂದೆದ್ದರು.

ಕನ್ನಡದ ಇತಿಹಾಸ, ಪರಂಪರೆ, ಸಂಸ್ಕೃತಿಯ ಕುರಿತಾದ ಹಾಡುಗಳನ್ನು ಸ್ತೋತ್ರಗಳು ಕೇಳುತ್ತಾ ಸಂಗೀತವನ್ನು ಆಸ್ವಾದಿಸಿದರು. ಸುಪ್ರಸಿದ್ಧ ಗೀತೆಗಳಾದ ಬೆಳಗಾಗಿ ನಾನೆದ್ದು ಯಾರ ಮುಖವ ನೋಡಿದೆ, ಸಿಂಗಾರ ಸಿರಿಯೇ, ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಮುಂತಾದ ಹಾಡುಗಳಿಗೆ ಜನ ಚಪ್ಪಾಳೆ, ಶಿಳ್ಳೆ ಹೊಡೆಯುತ್ತಾ ಸಂಗೀತದ ಲೋಕದಲ್ಲಿ ತೇಲಾಡಿದರು. ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡು ಎಲ್ಲರ ಮನವನ್ನು ಸೆಳೆದು ಹೆಜ್ಜೆ ಹಾಕುವಂತೆ ಮಾಡಿತು. ಈ ಹಾಡಿಗೆ ಇಡೀ ಯುವಸಮುದಾಯ ಕುಣಿದು ಕುಪ್ಪಳಿಸಿ ಕನ್ನಡ ಪ್ರೇಮ ಮೆರೆದರು. ನಾಗನೂರು ರುದ್ರಾಕ್ಷಿ ಮಠದ ಡಾ.ಶಿವಬಸವ ಮಹಾಸ್ವಾಮಿಜಿಯವರ ಕುರಿತಾಗಿ ಬಸವರಾಜ ಕಟ್ಟೀಮನಿಯವರು ಬರೆದ ಪಲ್ಲಕ್ಕಿಯನ್ನು ಏರಲಿಲ್ಲ ನೀವು ಎಂಬ ಹಾಡು ವಿಜಯ ಪ್ರಕಾಶ್ ಅವರ ಧ್ವನಿಯಲ್ಲಿ ಕೇಳಿದ ನೆರೆದ ಜನರು ಭಕ್ತಿಯಲ್ಲಿ ಪರವಷರಾದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಸಂಗೀತ ಪ್ರೇಮಿಗಳನ್ನು ಉದ್ದೇಶಿಸಿ ಮಾತನಾಡಿದ ವಿಜಯ ಪ್ರಕಾಶ್ ಸುರಿಯುತ್ತಿರುವ ಮಳೆಯಲ್ಲಿಯೂ ವಿಚಲಿತರಾಗದೇ ಅಪಾರ ಸಂಖ್ಯೆಯಲ್ಲಿ ಬೆಳಗಾವಿಯರು ಸೇರಿರುವುದು ಕನ್ನಡ ಭಾಷೆಗೆ ಹಾಗೂ ಸಂಗೀತಕ್ಕೆ ಇರುವ ಅವರ ಅಭಿಮಾನವನ್ನು ತೋರಿಸುತ್ತದೆ. ಬೆಳಗಾವಿಯ ಜನತೆ ಹೃದಯ ವೈಶಾಲ್ಯತೆಯನ್ನು ಕಂಡು ವಿಜಯಪ್ರಕಾಶ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಳಗಾವಿಗರು ಅಪ್ಪಟ ಕನ್ನಡ ಪ್ರೇಮಿಗಳು, ಅವರ ಕನ್ನಡ ಪ್ರೇಮ ಇಡೀ ರಾಜ್ಯದ ಜನತೆ ಅಳವಡಿಸಿಕೊಳ್ಳಬೇಕು ಎಂದರು.ನಾಗನೂರು ರುದ್ರಾಕ್ಷಿ ಮಠದ ಡಾ.ಅಲ್ಲಮಪ್ರಭು ಸ್ವಾಮೀಜಿಯವರು ಗಾಯಕ ವಿಜಯಪ್ರಕಾಶ್ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಸೇರಿದಂತೆ ಅನೇಕ ಮಠಾಧೀಶರು, ತಾಂತ್ರಿಕ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್ ಎಫ್.ವಿ.ಮಾನ್ವಿ, ಸ್ಥಳೀಯ ಶಾಸಕ ರಾಜು ಸೇಠ, ಕಾಲೇಜಿನ ಪ್ರಾಚಾರ್ಯ ಡಾ.ಬಿ.ಆರ್.ಪಟಗುಂದಿ, ಉಪನ್ಯಾಸಕ ಮಂಜುನಾಥ ಶರಣಪ್ಪನವರ ಸೇರಿದಂತೆ ವಿವಿಧ ಗಣ್ಯರು, ಸಾವಿರಾರು ವಿದ್ಯಾರ್ಥಿಗಳು, ಸಂಗೀತದ ಅಭಿಮಾನಿಗಳು ಸಂಗೀತದ ರಸಗ್ರಹಣ ಮಾಡಿಕೊಂಡರು.ಸಂಗೀತ ಗಡಿ ಮತ್ತು ಸಂಸ್ಕೃತಿಯನ್ನು ಮೀರಿದ ಸಾರ್ವತ್ರಿಕ ಭಾಷೆ. ಸಂಗೀತಕ್ಕೆ ಬುದ್ಧಿ ಶಕ್ತಿ ಉತ್ತೇಜಿಸುವ ಹಾಗೂ ಸೃಜನಶೀಲತೆಯನ್ನು ಬೆಳೆಸುವ, ಎಲ್ಲರನ್ನೂ ಒಗ್ಗೂಡಿಸುವ ವಿಶಿಷ್ಟ ಗುಣವಿದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸದಲ್ಲೂ ಸಂಗೀತ ಅಪಾರ ಪ್ರಭಾವ ಬೀರುತ್ತದೆ. ಇಂತಹ ಸಂಗೀತವನ್ನು ವಿಜಯ ಪ್ರಕಾಶ ಅವರ ಧ್ವನಿಯಲ್ಲಿ ಕೇಳುವುದೇ ಕರ್ಣಾನಂದ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿ ಮಠ.