ಸಾರಾಂಶ
ಹಂಪಿಯ ವಿಜಯ ವಿಠಲ ದೇವಸ್ಥಾನದಲ್ಲಿ ವಿಠಲನ ಪೀಠ ಇದೆ. ವಿಜಯ ವಿಠಲ ದೇವಸ್ಥಾನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು
ಹೊಸಪೇಟೆ: ಹಂಪಿ ವಿಜಯ ವಿಠಲ ದೇವಸ್ಥಾನ ಹಾಗೂ ಬಾಲಕೃಷ್ಣ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಕ್ತರಿಗೆ ಪೂಜೆ ಸಲ್ಲಿಸಲು ಅನುವು ಮಾಡಿಕೊಡಬೇಕು ಎಂದು ಹಂಪಿ ಪ್ರಾಧಿಕಾರ ವ್ಯಾಪ್ತಿಯ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ನಿಹಿಲ್ ದಾಸ್ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಹಂಪಿಯ ವಿಜಯ ವಿಠಲ ದೇವಸ್ಥಾನದಲ್ಲಿ ವಿಠಲನ ಪೀಠ ಇದೆ. ವಿಜಯ ವಿಠಲ ದೇವಸ್ಥಾನದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬೇಕು. ಇದರಿಂದ ಭಕ್ತರಿಗೆ ಪೂಜೆ ಸಲ್ಲಿಸಲು, ದರ್ಶನ ಪಡೆಯಲು ಅನುಕೂಲವಾಗಲಿದೆ. ಈಗಾಗಲೇ ಭಕ್ತರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಹಾಗಾಗಿ ಮೊದಲು ಈ ದೇವಾಲಯದಲ್ಲಿ ಮೂರ್ತಿ ಈಗ ಇಲ್ಲದಾಗಿದೆ. ಕೂಡಲೇ ಮೂರ್ತಿ ಪ್ರತಿಷ್ಠಾಪನೆ ಮಾಡಿ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಬ್ರಿಟಿಷ್ ಆಳ್ವಿಕೆ ಸಮಯದಲ್ಲಿ ಹಂಪಿಯು ಮದ್ರಾಸ್ ಸರ್ಕಾರದ ಆಡಳಿತಕ್ಕೆ ಒಳಪಟ್ಟಿತ್ತು. ಆ ಸಂದರ್ಭದಲ್ಲಿ ಅಂದಿನ ಬ್ರಿಟಿಷ್ ಅಧಿಕಾರಿಗಳು ಹಂಪಿಯ ಬಾಲಕೃಷ್ಣ ದೇವಸ್ಥಾನದ ಬಾಲಕೃಷ್ಣ ವಿಗ್ರಹ ತೆಗೆದುಕೊಂಡು ಹೋಗಿದ್ದರು. ಆ ವಿಗ್ರಹ ಚೆನ್ನೈನ ಸೆಂಟ್ರಲ್ ಮ್ಯೂಸಿಯಂನಲ್ಲಿದೆ. ಬಾಲಕೃಷ್ಣ ವಿಗ್ರಹವನ್ನು ಚೆನ್ನೈನಿಂದ ಮರಳಿ ಹಂಪಿಗೆ ತಂದು ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿದರು.
ಈ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಪುರಾತತ್ವ ಇಲಾಖೆಯ ಅಧಿಕಾರಿ ನಿಹಿಲ್ ದಾಸ್ ಭರವಸೆ ನೀಡಿದರು.ಹಂಪಿ ಪ್ರಾಧಿಕಾರ ವ್ಯಾಪ್ತಿಯ ಕ್ಷೇಮಾಭಿವೃದ್ಧಿ ಸಂಘದ ವಿರೂಪಾಕ್ಷಿ ವಿ., ಬಂಡಿಹಟ್ಟಿ ಮಹೇಶ್, ಎಸ್. ನಾಗರಾಜ್, ಎಸ್. ಹನುಮಂತಪ್ಪ, ಮಿಠಾಯಿ ವಿರೂಪಾಕ್ಷಿ ಮತ್ತಿತರರಿದ್ದರು.