ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ 19ನೇ ವಾರ್ಡನ ಸದಸ್ಯ ವಿಜಯ ಕರಡಿ ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣದ ಪುರಸಭೆಯ ಸಭಾ ಭವನದಲ್ಲಿ ಶನಿವಾರ ಸ್ಥಾಯಿ ಸಮಿತಿ ಚೇರ್ಮನ್ ಸ್ಥಾನಕ್ಕೆ ವಿಜಯ ಕರಡಿ ಆಯ್ಕೆಯಾಗಿದ್ದಾರೆ ಎಂದು ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ತಿಳಿಸಿದರು. ಮಾ.೨೮ರಂದು ಪುರಸಭೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ೧೧ ಜನ ಸದಸ್ಯರನ್ನು ಸ್ಥಾಯಿ ಸಮಿತಿ ಸದಸ್ಯರೆಂದು ಆಯ್ಕೆ ಮಾಡಲಾಗಿತ್ತು, ಶನಿವಾರ ಸ್ಥಾಯಿ ಸಮಿತಿ ಸದಸ್ಯರ ಸಭೆಯನ್ನು ಕರೆಯಲಾಗಿತ್ತು, ಹಾಜರಿದ್ದ ಸದಸ್ಯರ ಸಮ್ಮುಖದಲ್ಲಿ ವಿಜಯ ಕರಡಿಯವರ ಹೆಸರನ್ನು ಅಧ್ಯಕ್ಷ ಸ್ಥಾನಕ್ಕೆ ಹಿರಿಯ ಸದಸ್ಯ ರಾಜಣ್ಣ ಕುಂಬಿ ಸೂಚಿಸಿದರು. ಉಳಿದ ಸದಸ್ಯರು ಕೈ ಎತ್ತುವ ಮೂಲಕ ಅನುಮೋದಿಸಿದರು. ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಅವರು ವಿಜಯ ಕರಡಿಯವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.ಮೂವರು ಸದಸ್ಯರು ಗೈರುಸ್ಥಾಯಿ ಸಮಿತಿಯ ೧೧ ಸದಸ್ಯರಲ್ಲಿ ಮೂವರು ಸದಸ್ಯರು ಗೈರು ಹಾಜರಾಗಿದ್ದರು. ಉಳಿದ ೮ ಜನರು ಹಾಜರ ಇದ್ದುದ್ದರಿಂದ ಕೋರಂ ಭರ್ತಿಯ ಹಿನ್ನೆಲೆಯಲ್ಲಿ ಈ ಆಯ್ಕೆ ಪ್ರಕ್ರೀಯೆ ನಡೆಸಲಾಯಿತು. ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ವಿಜಯ ಕರಡಿ ಅವರನ್ನು ಸದಸ್ಯರು ಮತ್ತು ಸಿಬ್ಬಂದಿಗಳು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಅವರು ಪುರಸಭೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು, ಊರಿನ ಹಿರಿಯರು, ಮುಖಂಡರು ಸೇರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿರುವದು ನನಗೆ ದೊರೆತ ಭಾಗ್ಯವಾಗಿದೆ. ದೊರೆತ ಅವಧಿಯಲ್ಲಿ ಎಲ್ಲರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸ ಹೊಂದಿದ್ದು, ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ವಿಶೇಷ ಆದ್ಯತೆ ನೀಡುವುದಾಗಿ ಹೇಳಿದರು.ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಸ್ಥಾಯಿ ಸಮಿತಿ ಸದಸ್ಯ ರಾಜೀವ ಕುಂಬಿ, ಜಯಕ್ಕ ಕಳ್ಳಿ, ಬಸವರಾಜ ಓದುನವರ, ಪ್ರವೀಣ ಬಾಳಿಕಾಯಿ, ರಾಮಪ್ಪ ಗಡದವರ, ಸಿಕಂದರಭಾಷಾ ಕಣಕೆ, ಮಂಜವ್ವ ದುರಗಣ್ಣವರ, ನಾಮನಿರ್ದೇಶಿತ ಸದಸ್ಯ ಪ್ರಕಾಶ ಕೊಂಚಿಗೇರಿಮಠ, ಮುಖ್ಯಾಧಿಕಾರಿ ಮಹೇಶ ಹಡಪದ ಹಾಗೂ ಸಿಬ್ಬಂದಿಗಳು ಹಾಜರಿದ್ದರು.