ಸಾರಾಂಶ
ಚಾಮರಾಜನಗರ: ತಾಲೂಕಿನ ನಂಜೇದೇವನಪುರ ಗ್ರಾಮದ ಗ್ರಾಮ ದೇವತೆ ಉಯ್ಯಂಬಳ್ಳಿ ಮಾರಮ್ಮನ ಜಾತ್ರೆಯ ಅಂಗವಾಗಿ ಭಾನುವಾರ ರಾತ್ರಿ ಮಾರಮ್ಮನ ಉತ್ಸವ ಮೂರ್ತಿಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಭಾನುವಾರ ನಡುರಾತ್ರಿ, ಮಾರಮ್ಮನ ಬೆಳ್ಳಿ ವಿಗ್ರಹಕ್ಕೆ ಚಿನ್ನಾಭರಣ ತೊಡಿಸಿ, ವಿಶೇಷ ಪೂಜೆ ಸಲ್ಲಿಸಿ, ಮಹಾಮಂಗಳಾರತಿ ಮಾಡಿ, ಅಲಂಕೃತ ಮಂಟಪದಲ್ಲಿಟ್ಟು ಸತ್ತಿಗೆ ಸೂರಪಾನಿ, ವಾದ್ಯ ಮೇಳಗಳೊಂದಿಗೆ ಹೊರಟು ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಊರ ಹೊರಗಿರುವ ಮಾರಮ್ಮನ ದೇವಸ್ಥಾನಕ್ಕೆ ಕೊಂಡೊಯ್ದು ಅಲ್ಲಿ ವಿಶೇಷ ಅಲಂಕಾರ ಮಾಡಿ ಇಡಲಾಯಿತು. ಸೋಮವಾರ ರಾತ್ರಿ ನಡೆಯುವ ಜಾತ್ರಾ ಮಹೋತ್ಸವಕ್ಕೆ ಬೆಳಗ್ಗೆಯಿಂದಲೇ ಮಾರಮ್ಮನಿಗೆ ವಿಶೇಷ ಪೂಜೆಗಳು ನಡೆದವು. ರಾತ್ರಿ, ಪಕ್ಕದ ವೀರನಪುರ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ವಿವಿಧ ಗ್ರಾಮಗಳ ಹರಕೆ ಹೊತ್ತ ಭಕ್ತರು ಬಂದು ಜಾತ್ರೆಯ ಅಂಗಳದಲ್ಲಿ ಸೌದೆ ಒಲೆ ಒಡ್ಡಿ ಅಕ್ಕಿ ಬೆಲ್ಲದ ಮಡೆ ಅನ್ನ ಮಾಡಲಿದ್ದಾರೆ. ದೇವಸ್ಥಾನದ ಆವರಣದಲ್ಲಿ ಹರಕೆ ಹೊತ್ತವರು ಭಕ್ತರಿಗೆ ಪಾನಕ, ಮಜ್ಜಿಗೆ ವಿತರಿಸಲಿದ್ದಾರೆ. ಮಂಗಳವಾರ ಬೆಳಗಿನ ಜಾವ ಮುಖ್ಯ ದೇವಸ್ಥಾನದಿಂದ ಕೇಲು ಮನೆಯವರೆಗೆ ಕೇಲು ಹೊತ್ತು, ಸತ್ತಿಗೆ ಸೂರಪಾನಿ, ವಾದ್ಯ ಮೇಳಗಳೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ. ಜಾತ್ರಾ ಅಂಗಳದಲ್ಲಿರುವ ಶಂಕರೇಶ್ವರ, ಬಸವೇಶ್ವರ, ಕೇಲು ಮನೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಮಂಗಳವಾರ, ಬುಧವಾರ ಮತ್ತು ಗುರುವಾರದವರೆಗೂ ಚಿನ್ನಾಭರಣ ತೊಟ್ಟ ಬೆಳ್ಳಿ ಮಾರಮ್ಮನ ವಿಗ್ರಹವು ದೇವಸ್ಥಾನದಲ್ಲಿ ಇರಲಿದ್ದು, ಮೂರು ದಿನವು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ, ಶುಕ್ರವಾರ ಬೆಳಗ್ಗೆ ಭವ್ಯ ಮೆರವಣಿಗೆಯೊಂದಿಗೆ ಬೆಳ್ಳಿ ಮಾರಮ್ಮನ ವಿಗ್ರಹವು ನಾಯಕರ ಬೀದಿಯಲ್ಲಿರುವ ದೇವಸ್ಥಾನಕ್ಕೆ ತರುವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.