ಸಾರಾಂಶ
ಚನ್ನಪಟ್ಟಣ: ತಾಲೂಕಿನ ರಾಂಪುರ ಗ್ರಾಮದ ಶ್ರೀ ತ್ರಿಪುರ ಸುಂದರಿ(ಮೂಗೂರಮ್ಮ) ಅಮ್ಮನವರ ೪೦ನೇ ವರ್ಷದ ಕರಗ ಉತ್ಸವ ವಿಜೃಂಭಣೆಯಿಂದ ಜರುಗಿತು. ಕರಗ ಉತ್ಸವದಲ್ಲಿ ಕವಣಾಪುರ ಗ್ರಾಮದ ಬಸವಣ್ಣ ದೇವರು ಪ್ರಮುಖ ಆಕರ್ಷಣೆಯಾಗಿದ್ದು, ಪ್ರತಿ ವರ್ಷವೂ ಮೂಗೂರಮ್ಮನ ಕರಗ ಉತ್ಸವದಲ್ಲಿ ಹಬ್ಬದ ಹಿಂದೆಯೇ ನಿಷ್ಕರ್ಷೆಯಾದ ಒಂದು ಕುಟುಂಬದ ಹೆಣ್ಣು ಮಗಳು ಕರಗದ ಕಳಸ ಹಿಡಿಯುವುದು ವಾಡಿಕೆ. ಈ ಬಾರಿ ಸಾಹಿತಿ ಡಾ. ವಿಜಯ್ ರಾಂಪುರ ಮತ್ತು ಅನಿತಾ ದಂಪತಿ ಪುತ್ರಿ ಅಚಲ ಆರ್.ವಿ. ಕಳಸ ಹೊತ್ತಿದ್ದರು. ಉತ್ಸವದಲ್ಲಿ ಹುಲಿ ವೇಷ, ಗಾರುಡಿ ಗೊಂಬೆ, ಸೋಮನ ಕುಣಿತ, ಕೀಲು ಕುದುರೆ, ಕಹಳೆ ಹಾಗೂ ಮಂಗಳ ವಾದ್ಯಗಳೊಂದಿಗೆ ಕರಗ ಉತ್ಸವ ಗ್ರಾಮದ ಬೀದಿಗಳಲ್ಲಿ ನಡೆಮುಡಿಯಲ್ಲಿ ಮಧ್ಯ ರಾತ್ರಿ ದೇವಸ್ಥಾನಕ್ಕೆ ಬರುತ್ತದೆ. ಒಕ್ಕಲಿನವರು ಬಾಳೆಹಣ್ಣು, ಕಾಯಿ, ಬೆಲ್ಲ, ಅಕ್ಕಿ, ಬಳೆ, ಸೀರೆ, ಅರಿಶಿನ-ಕುಂಕುಮ ತುಂಬಿದ ಬುಟ್ಟಿಯನ್ನು ಕರಗ ಉತ್ಸವದ ಹಿಂದೆ ಮಹಿಳೆಯರು ತಲೆಯ ಮೇಲೆ ಹೊತ್ತು ಬರುವುದು ಮತ್ತೊಂದು ವಿಶೇಷ. ಪ್ರಧಾನ ಅರ್ಚಕ ರವಿ ದೀಕ್ಷಿತ್, ಧರ್ಮದರ್ಶಿ ಆರ್.ವಿ. ವೆಂಕಟೇಶಯ್ಯ, ರಾಂಪುರ ರಾಜಣ್ಣ, ನಿವೃತ್ತ ಅಧೀನ ಕಾರ್ಯದರ್ಶಿ ಶಿವಮಲವಯ್ಯ, ನಿವೃತ್ತ ರೆವಿನ್ಯೂ ಇನ್ಸ್ಪೆಕ್ಟರ್ ಆರ್.ಎಸ್. ಕೃಷ್ಣಪ್ಪ, ಸಮಾಜ ಸೇವಕ ಆರ್.ವಿ. ವೇಣು, ಡಾ. ದಿನೇಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.