ವಿಜುಗೌಡರಿಂದ ನನಗೆ ಜೀವ ಬೆದರಿಕೆ

| Published : May 04 2024, 12:32 AM IST

ಸಾರಾಂಶ

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಸೂಕ್ತ ಪೊಲೀಸ್ ರಕ್ಷಣೆ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಅವರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಸೂಕ್ತ ಪೊಲೀಸ್ ರಕ್ಷಣೆ ಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಹೇಳಿದರು.ನಗರದ ಬಿಎಲ್‌ಡಿಇ ಸಂಸ್ಥೆಯ ಎನ್‌ಆರ್‌ಐ ಗೆಸ್ಟ್‌ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಏಪ್ರಿಲ್ 28ರಂದು ನಗರದ ಮಹೇಶ್ವರಿ ಭವನದಲ್ಲಿ ಮದುವೆಗೆಂದು ಹೋಗಿದ್ದಾಗ, ನಮ್ಮ ಕಾರಿನ ಬಳಿ ಒಬ್ಬರು ಅಪರಿಚಿತ ಸರ್ದಾರಜಿ ಬಂದು ಹಿಂದಿಯಲ್ಲಿ ನಮಗೆಲ್ಲ ಬೈಯುತ್ತಿದ್ದ. ಅದನ್ನು ನಾನು ಪ್ರಶ್ನಿಸಿದಾಗ, ಒಮ್ಮೆಲೆ ನಮ್ಮ ಮೈಮೇಲೆ ಬರಲು ಶುರು ಮಾಡಿದ. ಅಷ್ಟರೊಳಗೆ ನಿಗಮ ಮಂಡಳಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡರಾಗಿರುವ ವಿಜುಗೌಡ ಪಾಟೀಲ್ ಅವರು ಗಾಡಿಯಿಂದ ಇಳಿದು ಬಂದು ನಮಗೆ ಬೈಯಲು ಶುರು ಮಾಡಿದರು ಎಂದು ದೂರಿದರು.

ಇದ್ದಕ್ಕಿದ್ದಂತೆ ಆಕ್ರೋಶಗೊಂಡ ಅವರು ನಿಮ್ಮದು ಬಹಳ ಆಗಿದೆ. ಒಂದು ಕೈ ನೋಡ್ತಿನಿ, ನಿನ್ನ ಮುಗಿಸ್ತಿನಿ, ನಮ್ಮನ್ನ ಖಲಾಸ್ ಮಾಡುತ್ತೇನೆಂದು ಜೀವ ಬೆದರಿಕೆ ಹಾಕಿದರು. ನಾನು ಬಬಲೇಶ್ವರದಲ್ಲಿ ಮಾಡುವಂತಿ ಬಾ ಎಂದೆ, ಅಷ್ಟರಲ್ಲಿ ಕೆಲ ಮುಖಂಡರು ಅವರನ್ನು ಸಮಾಧಾನಪಡಿಸಿ ಕಳುಹಿಸಿದರು. ಈ ಕುರಿತು ನಾನು ಆದರ್ಶನಗರ ಠಾಣೆಯಲ್ಲಿ ಅಪರಿಚಿತ ಸರ್ದಾರಜಿ ವಿರುದ್ಧ ಎಫ್‌ಐಆರ್ ಮಾಡಿದ್ದೇನೆ ಎಂದರು.

ನನಗೆ ಜೀವ ಬೆದರಿಕೆ ಇರುವುದರಿಂದ ತನಿಖೆ ನಡೆಸಬೇಕು ಹಾಗೂ ನನಗೆ ರಕ್ಷಣೆ ಕೊಡಬೇಕು ಎಂದು ನಾನು ಈಗಾಗಲೇ ಡಿಐಜಿ, ಗೃಹ ಸಚಿವರಿಗೆ, ಸಿಎಂ ಅವರಿಗೆ ಪತ್ರ ಕೊಟ್ಟಿದ್ದೇನೆ. ಜೈಲಿನಲ್ಲಿ‌ ಇದ್ದಂತಹ ಕುಖ್ಯಾತ ಖೈದಿಗಳಿಗೆ ಸಾರಾಯಿ, ಊಟ, ಗಾಂಜಾ, ಸಿಮ್‌ಕಾರ್ಡ್ ಕೊಡುವ ವಿಜುಗೌಡರು, ಅಂತಹ ಆರೋಪಿಗಳ ಸಹಾಯದಿಂದ ಪಂಜಾಬ್‌ನಿಂದ ಕೆಲವು ಧಡೂತಿ ಸರ್ದಾರಜಿಗಳನ್ನು ಕರೆಯಿಸಿ, ತಮ್ಮ ಜೊತೆ ಇರಿಸಿಕೊಂಡಿದ್ದಾರೆ. ಅವರ ಮೂಲಕ ಪದೇಪದೇ ಅಟ್ಯಾಕ್ ಮಾಡ್ತಾರೆ. ನಮಗೆ ಜೀವ ಬೆದರಿಕೆ ಹಾಕುತ್ತಾರೆ ಎಂದು ವಿಜುಗೌಡರ ಜೊತೆ ಸರ್ದಾರಜಿ ಇರುವ ಫೋಟೊ ಪ್ರದರ್ಶಿಸಿದರು. ಇದನ್ನೆಲ್ಲ ಬಿಟ್ಟು ನೀವು ನಿಮ್ಮ ಮಕ್ಕಳಿಗೆ ಒಳ್ಳೆ ಸಂಸ್ಕ್ರತಿ ಕೊಡಿ ಎಂದು ಸಲಹೆ ನೀಡಿದರು.