ಸಾರಾಂಶ
ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿಗೆ ಫೆ.6 ರಿಂದ 18ರ ವರೆಗೆ ಮಂಗಳೂರು ತಾಲೂಕಿನಲ್ಲಿ ಗ್ರಾಮ ಮಟ್ಟದಲ್ಲಿ ಶಿಬಿರ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ವತಿಯಿಂದ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ನೋಂದಾವಣೆಗೆ ಬಾಕಿ ಇರುವ ಹಾಗೂ ತಿರಸ್ಕೃತ ಅರ್ಜಿಗಳ ವಿಲೇವಾರಿಗೆ ಫೆ.6 ರಿಂದ 18ರ ವರೆಗೆ ಮಂಗಳೂರು ತಾಲೂಕಿನಲ್ಲಿ ಗ್ರಾಮ ಮಟ್ಟದಲ್ಲಿ ಶಿಬಿರ ನಡೆಯಲಿದೆ.ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಸುರೇಂದ್ರ ಕಂಬಳಿ ಇಲ್ಲಿನ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.
ಫೆ. 6ರಂದು ನೀರುಮಾರ್ಗದ ಸೇವಾ ಸಹಕಾರಿ ಬ್ಯಾಂಕಿನ ಅಮೃತ ಸೌಧದಲ್ಲಿ ಬೆಳಗ್ಗೆ 10.30 ಗಂಟೆಗೆ ಉದ್ಘಾಟನೆ ನಡೆದು ಅರ್ಜಿಗಳ ಕುಂದುಕೊರತೆ ಸ್ವೀಕರಿಸಲಾಗುವುದು. ಅಂದೇ ಉಳಾಯಿಬೆಟ್ಟು, ಮಲ್ಲೂರು ಗ್ರಾಮ ಪಂಚಾಯ್ತಿಗಳ ಶಿಬಿರವೂ ಇಲ್ಲೇ ನಡೆಯಲಿದೆ ಎಂದರು.ಫೆ.10ರಂದು ಗಂಜಿಮಠ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ ಗಂಜಿಮಠ, ಬಡಗ ಎಡಪದವು, ಮುಚ್ಚೂರು ಗ್ರಾ.ಪಂ. ವ್ಯಾಪ್ತಿಗೆ, ಫೆ.11ರಂದು ಅಡ್ಯಾರು ಗ್ರಾ.ಪಂ. ಸಭಾಭವನದಲ್ಲಿ ಅಡ್ಯಾರು ಗ್ರಾ.ಪಂ., ಫೆ.12ರಂದು ಪಡುಪೆರಾರ, ಕಂದಾವರ ಗ್ರಾ.ಪಂ.ಗೆ ಕಂದಾವರ ಗ್ರಾ.ಪಂ. ಸಭಾಭವನ, ಫೆ.13ರಂದು ಗುರುಪುರ, ಮೂಡುಶೆಡ್ಡೆ ಗ್ರಾ.ಪಂ.ಗೆ ಗುರುಪುರ ಗ್ರಾ.ಪಂ. ಸಭಾಭವನದಲ್ಲಿ, ಫೆ.17ರಂದು ಜೋಕಟ್ಟೆ, ಚೆಳ್ಯಾರು, ಬಾಳ ಗ್ರಾ.ಪಂ.ಗೆ ಜೋಕಟ್ಟೆ ಗ್ರಾ.ಪಂ.ನಲ್ಲಿ, ಫೆ.18ರಂದು ಸೂರಿಂಜೆ, ಎಕ್ಕಾರು, ಪೆರ್ಮುದೆ ಗ್ರಾ.ಪಂ.ಗೆ ಸೂರಿಂಜೆ ಗ್ರಾ.ಪಂ.ನಲ್ಲಿ, ಫೆ.19ರಂದು ಎಡಪದವು, ಕುಪ್ಪೆಪದವು, ಮುತ್ತೂರು ಗ್ರಾ.ಪಂ.ಗೆ ಕುಪ್ಪೆಪದವು ಗ್ರಾ.ಪಂ. ಸಭಾಭವನದಲ್ಲಿ ಶಿಬಿರ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ 10.30ರಿಂದ ಶಿಬಿರ ಆರಂಭವಾಗಲಿದೆ ಎಂದರು.
ಸಮಿತಿ ಸದಸ್ಯರಾದ ಆಲಸ್ಟನ್ ಡಿಕುನ್ನಾ, ಶ್ರೀಧರ ಪಂಜ, ನವಾಜ್, ವಿದ್ಯಾ, ಮುಸ್ತಫಾ, ಶಾಂತಲಾ ಗಟ್ಟಿ, ಆಶಾ, ಕಾರ್ಯದರ್ಶಿ ಮಹೇಶ್ ಹೊಳ್ಳ ಮತ್ತಿತರರು ಇದ್ದರು.