ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಶಿವನ ಪುತ್ರ, ವೀರಶೈವರ ಮೂಲ ಪುರುಷ ವೀರಭದ್ರೇಶ್ವರ ಜಯಂತಿಯನ್ನು ಜಿಲ್ಲೆಯ ವಿವಿಧೆಡೆ ಸಂಭ್ರಮದಿಂದ ಆಚರಿಸಲಾಯಿತು.ನಗರದ ಲಕ್ಷ್ಮೀ ಟೆಕಡಿಯಲ್ಲಿರುವ ಬೆಳಗಾವಿ ಹುಕ್ಕೇರಿ ಹಿರೇಮಠದ ಶಾಖೆಯ ಗುರುಶಾಂತೇಶ್ವರ ಸಂಸ್ಥಾನ ಹಿರೇಮಠದಲ್ಲಿ ವೀರಭದ್ರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಾದ್ರಪದ ಮೊದಲ ಮಂಗಳವಾರ ಅವತರಿಸಿ ವೀರಶೈವರ ಮೂಲ ಪುರುಷನಾಗಿ ವೀರಶೈವ ತತ್ವಗಳನ್ನು ಬಿತ್ತರಿಸಿದ ಮಹಾಪುರುಷ ವೀರಭದ್ರ ದೇವರು ಎಂದರು.ವೀರಶೈವರ ಶೇ.90ರಷ್ಟು ಮನೆ ದೇವರಾಗಿದ್ದಾನೆ. ವೀರಭದ್ರೇಶ್ವರ ದೇವರು. ವೀರಭದ್ರೇಶ್ವರ ಕ್ಷೇತ್ರಗಳು ಬಹಳಷ್ಟು ಪ್ರಖ್ಯಾತಿಯಾಗಿವೆ. ನಮ್ಮ ಜಿಲ್ಲೆಯಲ್ಲಿ ಯಡೂರು, ಗೊಡಚಿ ಕ್ಷೇತ್ರ ಲಕ್ಷಾಂತರ ಜನರಿಗೆ ಈ ಕ್ಷೇತ್ರ ಆಶೀರ್ವದಿಸುತ್ತ ಬಂದಿವೆ ಎಂದರು.
ನಗರದ ಪೊಲೀಸ್ ಕ್ವಾಟ್ರರ್ಸ್ ನಲ್ಲಿರುವ ವೀರಭದ್ರೇಶ್ವರ ದೇವರಿಗೆ ರಾಮತೀರ್ಥ ನಗರದಲ್ಲಿರುವ ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹುಕ್ಕೇರಿ ಹಿರೇಮಠದಲ್ಲಿ ಹುಕ್ಕೇರಿಯ ರಾಹಚೂಟಿಯ ವೀರಭದ್ರೇಶ್ವರ ದೇವಸ್ಥಾನ, ಬಿ.ಕೆ. ಶಿರಹಟ್ಟಿಯ ವೀರಭದ್ರೇಶ್ವರ ದೇವಸ್ಥಾನ, ಯಡೂರ, ಗೊಡಚಿ , ಎಂ.ಚಂದರಗಿ ಹಿರೇಮಠದ ಮೂರ್ತಿ, ಹಟ್ಟಿಹೊಳಿ ವೀರಭದ್ರೇಶ್ವರ ಸೇರಿ ವಿವಿಧೆಡೆ ಪೂಜೆ, ಪಾರಾಯಣದೊಂದಿಗೆ ವಿಶೇಷವಾಗಿ ಜರುಗಿತು.ಈ ಸಂದರ್ಭದಲ್ಲಿ ಮಾತನಾಡಿದ ವೀರಭದ್ರೇಶ್ವರ ಜಯಂತಿ ಉತ್ಸವದ ರಾಷ್ಟ್ರೀಯ ಅಧ್ಯಕ್ಷ ಬಾಗೋಜಿಕೊಪ್ಪದ ಶ್ರೀ ಡಾ. ಶಿವಲಿಂಗ ಮುರುಘರಾಜೇಂದ್ರ ಸ್ವಾಮೀಜಿ ಅವರು, ವೀರಭದ್ರೇಶ್ವರ ಜಯಂತಿ ಉತ್ಸವ ಇಡೀ ದೇಶ ಅಲ್ಲ ಹೊರ ದೇಶದಲ್ಲಿಯೂ ನಡೆಯುತ್ತಿರುವುದು ಅಭಿಮಾನದ ಸಂಗತಿ ಎಂದರು.
ಹುಕ್ಕೇರಿ ಶ್ರೀಗಳಿಗೆ ದೂರವಾಣಿಯ ಮೂಲಕ ಸಂಪರ್ಕಿಸಿದ ಆಸ್ಟ್ರೇಲಿಯಾ ಸಿಡ್ನಿ ವಾಸಿಗಳಾದ ವೀರಶೈವ ಸಮಾಜದ ವಿಜಯಕುಮಾರ್ ಹಲಗಲಿ ಮಾತನಾಡಿ, ನಾವು ಆಸ್ಟ್ರೇಲಿಯಾದ ಸಿಡ್ನಿಯಲ್ಲಿಯೂ ಕೂಡ ಶ್ರೀಗಳ ಆದೇಶದಂತೆ ಶಿವಗಂಗಾ ಕ್ಷೇತ್ರದ ಡಾ.ಮಲಯಶಾಂತ ಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿದ್ಯದಲ್ಲಿ ವೀರಭದ್ರೇಶ್ವರ ಜಯಂತಿ ಆಚರಿಸಿ ಸಂತೃಪ್ತಿ ಪಟ್ಟಿದ್ದೇವೆ ಎಂದರು.ಯಡಿಯೂರ ಕ್ಷೇತ್ರದ ಪಾಠ ಶಾಲೆಯ ಮಖ್ಯಸ್ಥರಾದ ಶ್ರೀಶೈಲ ಗುರೂಜಿ ಮಾತನಾಡಿ, ವೀರಭದ್ರೇಶ್ವರ ಜಯಂತಿ ಉತ್ಸವವನ್ನು ಅದ್ದೂರಿಯಾಗಿ ಮಾಡುವಂತೆ ಹುಕ್ಕೇರಿ, ಬಾಗೋಜಿಕೊಪ್ಪದ ಶ್ರೀಗಳು ಶ್ರೀಕ್ಷೇತ್ರದವರೆಗೂ ಬಂದು ಪ್ರಚಾರ ಮಾಡಿದ್ದನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಪ್ರದೀಪ್ ಕಂಕಣವಾಡಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ವಿಶೇಷವಾಗಿ ವೀರಭದ್ರೇಶ್ವರ ಜಯಂತಿ ಉತ್ಸವ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು.ಹುಕ್ಕೇರಿ ಹಿರೇಮಠದ ಗುರುಕುಲದ ಮುಖ್ಯಸ್ಥ ಸಂಪತಕುಮಾರ ಶಾಸ್ತ್ರೀಗಳು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ಪುರವಂತರಾದ ಮಲ್ಲಯ್ಯ ಮಠಪತಿ, ದಾನಯ್ಯ ಸ್ವಾಮೀಜಿ, ಸಿಂದನೂರಿನ ಪಂಪಯ್ಯನವರು ರಚಿಸಿದ ವಚನಗಳಲ್ಲಿ ಒಡಪುಗಳು ಮೆರಗು ತಂದವು.