ಸಾರಾಂಶ
ಹೊಳಲ್ಕೆರೆ ಆಲಂಕೃತಗೊಂಡ ಹಿಂದೂ ಮಹಾಗಣಪತಿ ಉತ್ಸವಕ್ಕೆ ಶಾಸಕ ಡಾ.ಎಂ.ಚಂದ್ರಪ್ಪ, ಪುರುಷೋತ್ವಮಾ ನಂದಪುರಿ ಸ್ವಾಮೀಜಿ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ವಿಶ್ವ ಹಿಂದೂ ಪರಿಷತ್ ಹಾಗೂ ಬಂಜರಂಗದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿ 12ನೇ ವರ್ಷದ ಹಿಂದೂ ಮಹಾಗಣಪತಿಯ ಶೋಭಾಯಾತ್ರೆ ಭಾನುವಾರ ವಿಜೃಂಭಣೆಯಿಂದ ನಡೆಯಿತು.ಸಮಿತಿಯ ಯುವಕರು, ಮಹಿಳೆಯರು ಮತ್ತು ಪ್ರಮುಖ ಮುಖಂಡರುಗಳು ಕೇಸರಿ ಬಣದ ಟೀಶರ್ಟ್ ಮತ್ತು ತಲೆಗೆ ಕೇಸರಿ ಬಣ್ಣದ ಪೇಟಾ ಸುತ್ತಿಕೊಂಡು ಬ್ಯಾಡ್ಜು ಹಾಕಿಕೊಂಡು, ಓಂ ಇರುವ ಮೇಲಂಗಿ ಧರಿಸಿ ಓಂಕಾರ ಚಿಹ್ನೆಯ ಬಾವುಟಗಳನ್ನು ಹಿಡಿದು ಗಣಪತಿಗೆ ಜೈಕಾರ ಹಾಕುತ್ತಾ ಕುಣಿಯುತ್ತ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಈ ಬಾರಿ ಡಿಜೆ ಇಲ್ಲದ ಪ್ರಯುಕ್ತ ಜನರು ನೀರಾಸೆಗೊಂಡಿದ್ದರು, ನಂತರ ಸಮೀತಿಯವರು ಪೋಲಿಸ್ ಅಧಿಕಾರಿಗಳನ್ನು ಭೇಟಿ ಮಾಡಿ 2 ಸೌಂಡ್ ಸಿಸ್ಟಂ ಬಳಿಸಿಕೊಳ್ಳಿಲು ಒಪ್ಪಿಗೆ ನೀಡಿದರು. ಶಿವಮೊಗ್ಗ -ಚಿತ್ರದುರ್ಗ ಮುಖ್ಯ ರಸ್ತೆಯಲ್ಲಿ ಸಾಗಿದ ಭವ್ಯ ಮೆರವಣಿಗೆಯನ್ನು ಜನ ರಸ್ತೆಯ ಎರಡು ಬದಿಯಲ್ಲಿ ನಿಂತು ವೀಕ್ಷಿಸಿದರು. ಗಣಪತಿ ಮೂರ್ತಿಯನ್ನು ಅಲಂಕೃತವಾದ ಟ್ರಾಕ್ಟರ್ನಲ್ಲಿ ಕೂಡಿಸಿ ಮೆರವಣಿಗೆಯೊಂದಿಗೆ ತರಲಾಯಿತು. ಜತೆಗೆ ಡೊಳ್ಳು ಕುಣಿತ ವಾದ್ಯಮೇಳಗಳಿಂದ ಜನಪದ ಕಲಾ ತಂಡಗಳು ಭಾಗವಹಿಸಿದ್ದು ವಿಶೇಷವಾಗಿತ್ತು. ಪಟ್ಟಣ ಸೇರಿದಂತೆ ತಾಲೂಕಿನ ವಿವಿದ ಹಳ್ಳಿಗಳಿಂದ ಶೋಭಾಯಾತ್ರೆಗೆ ಬರುವ ಭಕ್ತರಿಗೆ ವಾಸವಿ ಮಹಲ್ ಮುಂಭಾಂಗದಲ್ಲಿ ಮತ್ತು ಪಟ್ಟಣದ ವಿವಿಧ ಕಡೆಯಲ್ಲಿ ತಿಂಡಿ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿತ್ತು.ಪಟ್ಟಣದ ಕೆಲವು ಹೋಟೆಲ್ ಅಂಗಡಿ ಮುಂಗಟ್ಟುಗಳು ಬಂದ್ ಮಾಡಿ ಶೋಭಾಯಾತ್ರೆಗೆ ಬೆಂಬಲಿಸಿದವು. ಶೋಭಾಯಾತ್ರೆಗೆ ಗಣಪತಿ ವಿಸರ್ಜನೆಯಲ್ಲಿ ಆಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಶಿವಕುಮಾರ್ ಮತ್ತು ಡಿವೈಎಸ್ಪಿ, ಆರು ಜನ ಸಿಪಿಐ, 8 ಪಿಎಸ್ಐ, 104 ಪೋಲೀಸ್, 115 ಹೋಂಗಾರ್ಡ್, 15 ಜನ ಎಎಸ್ಐ, 54 ಜನ ಹೆಡ್ ಕಾನ್ಸ್ಟೇಬಲ್, ಡಿಆರ್ಎ ತುಕಡಿ, ಕೆಎಸ್ಆರ್ಪಿಗಳೂಂದಿಗೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ ವ್ಯವಸ್ಥೆ ಮಾಡಿತ್ತು. ಮೆರವಣೆಗೆಯೂದ್ದಕ್ಕೂ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು.
ಮೆರವಣಿಗೆ ಪ್ರಯುಕ್ತ ಪಟ್ಟಣಕ್ಕೆ ಬರುವ ವಾಹನ ಸಂಚಾರ ನಿಷೇದಿಸಲಾಗಿತ್ತು. ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ ಹೊಸದುರ್ಗ ಕಡೇ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಲಾಯಿತು. ಶಿವಮೊಗ್ಗ ರಸ್ತೆಯ ತಾಲೂಕು ಪಂಚಾಯಿತಿ ಕಚೇರಿ ಹಿಂಭಾಗದಲ್ಲಿ ನಿರ್ಮಿಸಿರುವ ತೊಟ್ಟಿಯಲ್ಲಿ ಗಣಪತಿ ವಿಸರ್ಜನೆ ಮಾಡಲಾಯಿಯಿತು. ಈ ವೇಳೆ ಸಮಿತಿ ಅಧ್ಯಕ್ಷ ಎಸ್.ಆರ್.ಆಜ್ಜಯ್ಯ, ಗೋಪಾಲಸ್ವಾಮಿ ನಾಯಕ್, ಪವನ್, ಮನು, ವಿಜಯಕುಮಾರ್, ಚಂದ್ರಶೇಖರ್, ಡಾ.ಶಾಂತವೀರ ಸ್ವಾಮೀಜಿ, ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ, ಶ್ರೀ ಸೇವಾಲಾಲ್ ಸ್ವಾಮಿಜಿ, ಕೃಷ್ಣ ಯಾದವಾನಂದ ಸ್ವಾಮಿಜಿ, ಜಿ.ಸುರೇಶ್ .ಚಂದ್ರಶೇಖರ್, ಮತ್ತರರು ಇದ್ದರು.