ಸಾರಾಂಶ
ಹಾಸನ: ಹಾಸನಾಂಬೆ ದೇವಾಲಯದಲ್ಲಿ ಆಡಳಿತ ವರ್ಗದ ನಡವಳಿಕೆ ಖಂಡಿಸಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಬಾಗಿಲು ತೆಗೆದು ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ವಿಶ್ವ ಹಿಂದೂ ಪರಿಷದ್ ಕಾರ್ಯಕರ್ತರು ಗುರುವಾರ ದೇವಸ್ಥಾನದ ಬ್ಯಾರಿಕೇಡ್ ಮುಂದೆ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ವಿಶ್ವ ಹಿಂದೂ ಪರಿಷದ್ ವಿಭಾಗೀಯ ಕಾರ್ಯದರ್ಶಿ ಮಹಿಪಾಲ್ ಮತ್ತು ಶಶಿಧರ್ ಮಾತನಾಡಿ, ಪ್ರತಿವರ್ಷ ಹಾಸನಾಂಬೆ ದರ್ಶನೋತ್ಸವ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಆಗುತ್ತದೆ. ಈ ದೇವಾಲಯಕ್ಕೆ ತನ್ನದೇ ಆದ ಮಹತ್ವ ಇದ್ದೇ ಇದೆ. ನಮಗೆ ಹಾಸನಾಂಬೆ ಎಂದರೇ ದೇವರು, ಭೇದ-ಭಾವ ಇಲ್ಲ. ೫ ಕಿ.ಮೀ. ಬ್ಯಾರಿಕೇಡ್ ಹಾಕಿ ಜನಸಂಖ್ಯೆ ನಿಯಂತ್ರಿಸುವವರಿಗೆ, ಸಿದ್ದೇಶ್ವರ ದೇವಸ್ಥಾನದ ಬಾಗಿಲು ತೆಗೆದರೇ ಇವರಿಗೆ ಜನಜಂಗುಳಿ ಆಗುತ್ತದೆಯಂತೆ! ಇದಕ್ಕೆ ಕಾರಣ ಕೇಳಿದರೇ ಪುರೋಹಿತರ ಮೇಲೆ, ದೇವಸ್ಥಾನದ ಒಳಗಿನವರ ಮೇಲೆ ದಬ್ಬಾಳಿಕೆ ಎಸಗುತ್ತಾರೆ. ಈ ದೇವಸ್ಥಾನಕ್ಕಾಗಿ ಜೀವ ಮುಡುಪಾಗಿಟ್ಟುರುವವರು ಅನೇಕರು ಇದ್ದಾರೆ. ಇದನ್ನು ಪ್ರಶ್ನೆ ಮಾಡಲು ಹೋದರೇ ಬಾಯಿಗೆ ಬಂದಂತೆ ಕೆಟ್ಟ ಮಾತನಾಡುತ್ತಾರೆ. ಹಾಸನಾಂಬೆ ತಾಯಿ ದರ್ಶನ ನಂತರ ಶ್ರೀ ಸಿದ್ದೇಶ್ವರ ತಾಯಿ ದರ್ಶನ ಮಾಡಿದರೇ ಜಾಮ್ ಆಗುತ್ತದೆಯಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದೇವಸ್ಥಾನಕ್ಕಾಗಿ ಸೇವೆ ಸಲ್ಲಿಸುವವರು ಯಾರು ಇದ್ದಾರೆ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು, ಸ್ಪಂದಿಸಬೇಕು. ಸಿಂಹಾಸನಪುರಿ ಹಾಸನದವರಿಗೆ ಇನ್ನು ಹಾಸನಾಂಬೆ ತಾಯಿ ದರ್ಶನ ಆಗಿರುವುದಿಲ್ಲ. ಈ ಬಾರಿ ಆಡಳಿತ ವರ್ಗ ತಾಯಿ ದರ್ಶನಕ್ಕೆ ತುಂಬ ಚೆನ್ನಾಗಿ ಮಾಡಿದೆ ನಿಜ, ಅದನ್ನು ಹೇಳಿಕೊಂಡರೆ ಆಗುವುದಿಲ್ಲ. ಸ್ಥಳೀಯ ಜನರಿಗೆ ಇನ್ನೂ ದರ್ಶನ ಆಗಿರುವುದಿಲ್ಲ. ಪುರೋಹಿತರ ವರ್ಗಕ್ಕೆ ಗೌರವ ಕೊಡಬೇಕು. ಎಸಿ ನಡವಳಿಕೆಯನ್ನು ಖಂಡಿಸುತ್ತೇವೆ. ಕೂಡಲೇ ಸಿದ್ದೇಶ್ವರ ದೇವಾಲಯದ ಬಾಗಿಲು ತೆಗೆಯಬೇಕು ಎಂದು ಆಗ್ರಹಿಸಿದರು. ತಾಯಿ ಉತ್ಸವ ಎನ್ನುವುದಕ್ಕೆ ಚಿಕ್ಕ ಪ್ರತಿಭಟನೆ ಮಾಡಿ ನಿಲ್ಲಿಸಿದ್ದೇವೆ. ಅರ್ಚಕರಿಗೆ ಹೋಗೋ ಬಾರೋ ಎನ್ನುವ ಪದ ಬಳಕೆ ಮಾಡುತ್ತಿದ್ದಾರೆ. ಎಸಿ ಮಾರುತಿ ಮತ್ತು ಎಎಸ್ಪಿ ತಮ್ಮಯ್ಯ ಅವರೇ ನೀವು ಇವತ್ತು ಇರುತ್ತೀರಾ ನಾಳೆ ಹೋಗುತ್ತೀರಾ, ಮೊದಲು ಗೌರವ ಕೊಡುವುದನ್ನು ಕಲಿಯಿರಿ. ಉತ್ಸವ ಮುಗಿದ ಮೇಲೆ ಎಸಿ ವಿರುದ್ಧ ಅವರ ಕಚೇರಿಗೆ ಮುತ್ತಿಗೆ ಹಾಕುತ್ತೇವೆ. ಇನ್ನು "ಬೂಟಿನಲ್ಲಿ ಹೊಡೆಯುತ್ತೇವೆ ಎಂದು ಪದ ಬಳಕೆ ಮಾಡಿರುವ ಎಎಸ್ಪಿ ತಮ್ಮಯ್ಯ " ಅವರು ದಯಮಾಡಿ ಬೂಟು ಹಾಕಿಕೊಂಡು ದೇವಾಲಯಕ್ಕೆ ಹೋಗಬೇಡಿ ಎಂದು ಮನವಿ ಮಾಡಿದರು.
ಮುಂದಿನ ವರ್ಷ ಹಾಸನಂಬೆ ಉತ್ಸವ ದೇವರು ಮತ್ತು ಭಕ್ತರ ನಡುವೆ ಸಂಬಂಧ ಇರಬೇಕು. ಯಾವುದೋ ಎಸಿ ನಡುವೆ ಸಂಬಂಧವಲ್ಲ. ಹಾಸನಾಂಬೆಯನ್ನು "ಹಸನಬಿ " ಎಂದು ಕರೆಯುವ ಕೆಲಸವನ್ನು ದೊಡ್ಡ ದೊಡ್ಡ ಸಾಹಿತಿಗಳು ಮಾಡುತ್ತಿದ್ದು, ಇದು ಹಾಸನಾಂಬೆ ಆಗಿದ್ದು, ನಿಮಗೆ ಬೇಕಾದರೇ ಹಸನಬಿ ಬೇರೆ ಕಡೆ ಹುಡುಕಿಕೊಂಡು ಹೋಗಿ ಎಂದರು. "ಹಸನಬಿ " ಎಂದು ಕರೆಯುವ ಮುಸಲ್ಮಾನರ ಕೆಟ್ಟ ಪ್ರವೃತ್ತಿಯನ್ನು ನಿಲ್ಲಿಸಿ. ಇಂತಹ ಸಾಹಿತಿಗಳನ್ನು ಸಮಾಜದಿಂದ ದೂರವಿಡಬೇಕು ಎಂದು ಸರ್ಕಾರಕ್ಕೆ ದಿಕ್ಕಾರ ಕೂಗಿದರು.