ವಿಶ್ವಕರ್ಮರು ಕೇವಲ ಒಂದು ವ್ಯಕ್ತಿಯಲ್ಲ, ಇಡೀ ಬ್ರಹ್ಮಾಂಡದ ಸೃಷ್ಟಿಗೆ ರೂಪ ನೀಡಿದ ಶಕ್ತಿ. ಆದ್ದರಿಂದ ವಿಶ್ವಕರ್ಮ ಜಯಂತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ವಿಶ್ವಕರ್ಮರ ಆರಾಧನೆಯನ್ನು ಸಾರ್ವತ್ರಿಕವಾಗಿ ಪೂಜಾ ಮಹೋತ್ಸವದ ರೂಪದಲ್ಲಿ ಆಚರಿಸಬೇಕು ಎಂದು ಕುಶಾಲನಗರದ ನಿವೃತ್ತ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಡಿಕೇರಿ: ವಿಶ್ವಕರ್ಮರು ಕೇವಲ ಒಂದು ವ್ಯಕ್ತಿಯಲ್ಲ, ಇಡೀ ಬ್ರಹ್ಮಾಂಡದ ಸೃಷ್ಟಿಗೆ ರೂಪ ನೀಡಿದ ಶಕ್ತಿ. ಆದ್ದರಿಂದ ವಿಶ್ವಕರ್ಮ ಜಯಂತಿಯನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ, ವಿಶ್ವಕರ್ಮರ ಆರಾಧನೆಯನ್ನು ಸಾರ್ವತ್ರಿಕವಾಗಿ ಪೂಜಾ ಮಹೋತ್ಸವದ ರೂಪದಲ್ಲಿ ಆಚರಿಸಬೇಕು ಎಂದು ಕುಶಾಲನಗರದ ನಿವೃತ್ತ ಪ್ರಾಂಶುಪಾಲ ಎಚ್.ಬಿ.ಲಿಂಗಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಗುರುವಾರ ನಡೆದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು ವಿಶ್ವಕರ್ಮರು ಇಡೀ ಜಗತ್ತಿನ ಹಾಗೂ ಬ್ರಹ್ಮಾಂಡದ ಸೃಷ್ಟಿಕರ್ತರೆಂದು ಭಾರತೀಯ ಪರಂಪರೆಯಲ್ಲಿ ನಂಬಲಾಗಿದೆ. ಜಗತ್ತಿನಲ್ಲಿ ಏನೂ ಇಲ್ಲದ ಶೂನ್ಯ ಸ್ಥಿತಿಯಿಂದ ಸೃಷ್ಟಿ ಕಾರ್ಯವನ್ನು ಆರಂಭಿಸಿ, ರಸತತ್ವದಿಂದ ಜಲತತ್ವವನ್ನು ರೂಪಿಸಿ, ಅದನ್ನು ಪೃಥ್ವಿ ತತ್ವಕ್ಕೆ ತಂದವರು ವಿಶ್ವಕರ್ಮ ಎಂಬ ನಂಬಿಕೆಯಿದೆ ಎಂದು ಹೇಳಿದರು.ವಿಶ್ವಕರ್ಮ ಸಮಾಜದ ಕೊಡಗು ಜಿಲ್ಲಾ ನಿರ್ದೇಶಕರಾದ ಕೆ.ಎಸ್.ಚಂದ್ರಶೇಖರ್ ಮಾತನಾಡಿ, ವಿಶ್ವಕರ್ಮ ಸಮುದಾಯವು ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜೊತೆಗೆ ರಾಜಕೀಯವಾಗಿಯೂ ಪ್ರಬಲವಾಗಬೇಕು ಎಂದು ಕರೆ ನೀಡಿದರು.ಸಂಘಟನೆ ಬಲಪಡಿಸಿ: ಕೊಡಗು ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಬಿ.ನಾಗರಾಜು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಂದು ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಎಸ್.ಜೆ.ದೇವದಾಸ್ ಅವರು ವಿಶ್ವಕರ್ಮರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗುವಂತೆ ಸಲಹೆ ನೀಡಿದರು.
ಸಮಾಜದ ಪ್ರಮುಖರಾದ ಬಿ.ಸಿ.ಅಶೋಕ್, ಪ್ರಕಾಶ್ ಆಚಾರ್ಯ, ವಿದ್ಯಾಲತ, ದಿವಾಕರ್, ಬ್ಲಾಸಂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬ್ಲಾಸಂ ಶಾಲೆಯ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕುಮಾರ್ ಸ್ವಾಗತಿಸಿದರು, ಸಾಹಿತಿ ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.