ಸಾರಾಂಶ
ಹೂವಿನಹಡಗಲಿ: ಈ ಜಗತ್ತು ಸುಂದರವಾಗಿ ಕಾಣಲು ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ. ವಿಶ್ವಕರ್ಮರು ದೈವ ಶಕ್ತಿಯಾಗಿದ್ದು, ಅವರು ಇಲ್ಲದಿದ್ದರೇ ಈ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.ಈ ದೇಶದಲ್ಲಿರುವ ಸುಂದರವಾಗಿರುವ ವಾಸ್ತು ಶಿಲ್ಪಗಳು, ಗುಡಿ ಗೋಪುರಗಳು, ಸೂಕ್ಷ್ಮ ಕೆತ್ತನೆಗಳು, ಐತಿಹಾಸಿಕ ದೇವಸ್ಥಾನಗಳಲ್ಲಿರುವ ಅವರ ಶಿಲ್ಪಕಲೆಗಳು ಎಲ್ಲರ ಗಮನ ಸೆಳೆಯುತ್ತವೆ. ಆದ್ದರಿಂದ ಈ ವಿಶ್ವಕರ್ಮರು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಆದರ್ಶಪ್ರಾಯವಾಗಿದ್ದಾರೆ. ಮುಂಬರುವ ದಿನಗಳಲ್ಲಿ ವಿಶ್ವಕರ್ಮರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸೋಣ ಎಂದರು.
ವಿಶ್ವಕರ್ಮ ಸಮಾಜಕ್ಕೆ ಅಗತ್ಯವಿರುವ ಎಲ್ಲ ರೀತಿಯ ಅಭಿವೃದ್ಧಿ ಮಾಡಲು ನಾನು ಬದ್ಧವಾಗಿದ್ದು, ಅಗತ್ಯ ನಿವೇಶನ ಗುರುತಿಸಿ ಸಮುದಾಯ ಭವನ ನಿರ್ಮಾಣಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ವಿಶ್ವಕರ್ಮ ಸಮಾಜದ ಅಧ್ಯಕ್ಷ ಮೌನೇಶ, ತಾಪಂ ಇಒ ಉಮೇಶ ಮಾತನಾಡಿದರು. ಸಮಾಜದ ಹಿರಿಯರಾದ ಜಿ.ಬಿ. ಹಂಸನಂದಾಚಾರ್ಯ, ಎಂ. ಪರಮೇಶ್ವರಪ್ಪ, ತೋಟಾನಾಯ್ಕ, ಸಂತೋಷ ಬಡಿಗೇರ ಸೇರಿದಂತೆ ಇತರರಿದ್ದರು. ಇದಕ್ಕೂ ಮುನ್ನ ಸುಂದರ ವಾಸ್ತು ಶಿಲ್ಪವನ್ನು ತಯಾರಿಸಿ, ಮಕ್ಕಳಿಗೆ ವಿವಿಧ ಛದ್ನ ವೇಷಗಳನ್ನು ಹಾಕಿಸಿ, ವಿಶ್ವಕರ್ಮರ ಭಾವಚಿತ್ರ ಮೆರವಣಿಗೆ ಮಾಡಲಾಯಿತು.