ಯದುವೀರ್‌ ಒಡೆಯರ್ಗೆ ಎಚ್‌. ವಿಶ್ವನಾಥ್ ಬೆಂಬಲ

| Published : Apr 04 2024, 01:08 AM IST / Updated: Apr 04 2024, 09:53 AM IST

ಯದುವೀರ್‌ ಒಡೆಯರ್ಗೆ ಎಚ್‌. ವಿಶ್ವನಾಥ್ ಬೆಂಬಲ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡು ನಂತರ ಕಾಂಗ್ರೆಸ್ ಪರ ವಾಲಿದ್ದ ಎಚ್. ವಿಶ್ವನಾಥ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಿದ ಸಂಧಾನ ಯಶಸ್ವಿಯಾಗಿದೆ.  

 ಮೈಸೂರು :  ಬಿಜೆಪಿ ಸರ್ಕಾರ ಇದ್ದಾಗ ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡು ನಂತರ ಕಾಂಗ್ರೆಸ್ ಪರ ವಾಲಿದ್ದ ಎಚ್. ವಿಶ್ವನಾಥ್ ಅವರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಡೆಸಿದ ಸಂಧಾನ ಯಶಸ್ವಿಯಾಗಿದೆ. ಇದರ ಬೆನ್ನಲ್ಲೇ ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಬಿಜೆಪಿಯಿಂದ ಸಾಹಿತ್ಯ ಕೋಟಾದಲ್ಲಿ ಮೇಲ್ಮನೆಗೆ ನಾಮನಿರ್ದೇಶನಗೊಂಡಿದ್ದ ವಿಶ್ವನಾಥ್, ನಂತರದ ದಿನಗಳಲ್ಲಿ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ, ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದರು. ಆ ಪಕ್ಷದ ಟಿಕೆಟ್ ಕೂಡ ಕೇಳಿದ್ದರು. ಆದರೆ, ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರಲಿಲ್ಲ.

ಪಕ್ಷದಲ್ಲಿಯೇ ಇರದಿದ್ದ ಎಸ್.ಪಿ.ಮುದ್ದಹನುಮೇಗೌಡ, ಜಯಪ್ರಕಾಶ್ ಹೆಗ್ಡೆ ಅವರನ್ನು ಕರೆ ತಂದು ಟಿಕೆಟ್ ನೀಡಲಾಗಿದೆ. ನಾನು ಟಿಕೆಟ್ ಕೇಳಿದರೂ ಸಿದ್ದರಾಮಯ್ಯ ಅವರು ಪರಿಗಣಿಸಲಿಲ್ಲ ಎಂಬುದು ವಿಶ್ವನಾಥ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ವಿಜಯೇಂದ್ರ ಅವರು ಯದುವೀರ್ ಜೊತೆ ವಿಶ್ವನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ಸಂಧಾನ ನಡೆಸಿದರು. ಈ ವೇಳೆ, ಜಿಪಂ ಮಾಜಿ ಸದಸ್ಯ, ವಿಶ್ವನಾಥ್ ಪುತ್ರ ಅಮಿತ್ ವಿ.ದೇವರಹಟ್ಟಿ, ನಗರಾಧ್ಯಕ್ಷ ಎಲ್. ನಾಗೇಂದ್ರ, ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಶಾಸಕ ಡಿ. ಮಾದೇಗೌಡ, ಮುಖಂಡ ವಿ.ಕವೀಶ್ ಗೌಡ, ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ, ಒಬಿಸಿ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಕೂಡ ಹಾಜರಿದ್ದರು.

ಈ ಸಂದರ್ಭದಲ್ಲಿ ವಿಶ್ವನಾಥ್ ಮಾತನಾಡಿ, ಮೈಸೂರು ರಾಜ್ಯಕ್ಕೆ ಯದುವಂಶಸ್ಥರು ನೀಡಿರುವ ಕೊಡುಗೆಯನ್ನು ಸ್ಮರಿಸಿ, ಯದುವೀರ್ ಅವರನ್ನು ಪಕ್ಷಾತೀತವಾಗಿ ಬೆಂಬಲಿಸಿ, ಅವಿರೋಧವಾಗಿ ಆಯ್ಕೆ ಮಾಡಬೇಕು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಈ ಬಗ್ಗೆ ಗಮನ ಹರಿಸಬೇಕು ಎಂದರು.

ನಂತರ ಯದುವೀರ್ ಅವರಿಗೆ ಕಂಬಳಿ, ಶಾಲು, ಹಾರ, ಫಲಪುಷ್ಪ ನೀಡಿ ಅಭಿನಂದಿಸಿದರು. ವಿಜಯೇಂದ್ರ ಅವರನ್ನು ಕೂಡ ಸನ್ಮಾನಿಸಿದರು. ಇಬ್ಬರಿಗೂ ಸಿಹಿಯನ್ನು ತಿನ್ನಿಸಿದರು.