ವಿವಿಧ ಕೆರೆಗಳಿಗೆ ಡೀಸಿ ಶಿಲ್ಪಾನಾಗ್, ನ್ಯಾ.ಎಂ.ಶ್ರೀಧರ ಭೇಟಿ

| Published : Feb 01 2024, 02:03 AM IST

ವಿವಿಧ ಕೆರೆಗಳಿಗೆ ಡೀಸಿ ಶಿಲ್ಪಾನಾಗ್, ನ್ಯಾ.ಎಂ.ಶ್ರೀಧರ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ ಚಾಮರಾಜನಗರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಒತ್ತುವರಿ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾನಾಗ್ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಶ್ರೀಧರ ಚಾಮರಾಜನಗರ ತಾಲೂಕಿನ ವಿವಿಧ ಕೆರೆಗಳಿಗೆ ಭೇಟಿ ನೀಡಿ ಒತ್ತುವರಿ ಸಂಬಂಧ ಸ್ಥಳ ಪರಿಶೀಲನೆ ನಡೆಸಿದರು.

ಅಧಿಕಾರಿಗಳೊಂದಿಗೆ ತಾಲೂಕಿನ ಕೋಡಿಮೋಳೆ ಕೆರೆ, ನಾಗವಳ್ಳಿ ಕೆರೆ, ಜ್ಯೋತಿಗೌಡನಪುರ ಕೆರೆ, ಕಾಗಲವಾಡಿ ಕೆರೆ, ಹೊಂಗನೂರು ಕೆರೆ, ಹೊಂಡರಬಾಳು ಕೆರೆ ಸೇರಿದಂತೆ ಇನ್ನಿತರ ಕೆರೆಗಳನ್ನು ವೀಕ್ಷಿಸಿದರು. ಕಾವೇರಿ ನೀರಾವರಿ ನಿಗಮ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಕೆರೆಗಳ ವಿಸ್ತೀರ್ಣ, ಒತ್ತುವರಿಯಾಗಿರುವ ಭಾಗಗಳು, ಕೆರೆಗಳ ಅಭಿವೃದ್ದಿ ಕುರಿತ ಮಾಹಿತಿಯನ್ನು ಅಧಿಕಾರಿಗಳಿಂದ ಆಯಾ ಸ್ಥಳದಲ್ಲಿಯೇ ಪಡೆದು ಪರಿಶೀಲನೆ ನಡೆಸಿದರು. ಕೆರೆಗಳ ಹದ್ದುಬಸ್ತು ಮಾಡಿ ಒತ್ತುವರಿ ತೆರವಿಗೆ ಅಗತ್ಯ ಮುಂದಿನ ಕ್ರಮ ವಹಿಸಲು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಭೇಟಿಯ ವೇಳೆ ಆಯಾ ಭಾಗದ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ನ್ಯಾಯಾಧೀಶರಿಗೆ ಅಹವಾಲು ಸಲ್ಲಿಸಿ ಕೆರೆಗಳನ್ನು ಅಭಿವೃದ್ದಿಗೊಳಿಸಬೇಕು. ಕೆಲವೆಡೆ ಕೆರೆಗಳಿಗೆ ತ್ಯಾಜ್ಯ ನೀರು ಸೇರುತ್ತಿರುವುದನ್ನು ತಡೆಯಬೇಕೆಂದು ಮನವಿ ಮಾಡಿದರು. ಕೆಲವೆಡೆ ಕೆರೆಗಳಿಗೆ ಹರಿಯಬಿಟ್ಟಿರುವ ಕಲುಷಿತ ನೀರು ಸೇರದಂತೆ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು. ಕೆರೆ ಸುತ್ತಮುತ್ತಲ ಪ್ರದೇಶದಲ್ಲಿ ಸ್ವಚ್ಚತೆ ಕಾಪಾಡಿಕೊಂಡು ತ್ಯಾಜ್ಯ ವಸ್ತುಗಳನ್ನು ಕೆರೆಯ ಬಳಿ ಹಾಕುವುದನ್ನು ತಡೆಗಟ್ಟಬೇಕು. . ಸ್ವಚ್ಚ ಪರಿಸರ ಇರಬೇಕೆಂದು ಜಿಲ್ಲಾಧಿಕಾರಿ ಗ್ರಾಪಂ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕಾಮಗಾರಿ ನಿರ್ವಹಿಸಿರುವ ಸ್ಥಳದಲ್ಲಿ ಅಳವಡಿಸಿರುವ ಮಾಹಿತಿ ಫಲಕಗಳನ್ನು ಸರಿಪಡಿಸುವಂತೆ ಸೂಚಿಸಿದರು. ಅನುದಾನ ಲಭ್ಯತೆಗೆ ಅನುಗುಣವಾಗಿ ಕೆರೆಗಳ ಹೂಳೆತ್ತುವುದು, ಅಭಿವೃದ್ದಿ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ನರೇಗಾ ಅನುದಾನವನ್ನು ಗ್ರಾಮೀಣ ಭಾಗಗಳಲ್ಲಿ ಹೆಚ್ಚು ಸದ್ಬಳಕೆಯಾಗಬೇಕು. ಸ್ಥಳೀಯವಾಗಿ ಕೆಲಸ ನೀಡಬೇಕು. ಕೆರೆಗಳ ಅಭಿವೃದ್ದಿ ಕೆಲಸವನ್ನು ಕೈಗೆತ್ತಿಕೊಂಡು ಕೆರೆಗಳ ಸಂರಕ್ಷಣೆ ಆಗಬೇಕು ಎಂದು ಸೂಚಿಸಲಾಯಿತು.

ತಹಸೀಲ್ದಾರ್ ಬಸವರಾಜು, ಭೂ ದಾಖಲೆಗಳ ಉಪ ನಿರ್ದೇಶಕಿ ವಿದ್ಯಾಯಿನಿ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಎಂ.ಬಿ. ಪಾಟೀಲ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಟಿ. ಜಯರಾಮ್, ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ನಿರಂಜನ್, ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು. ಶಾಲೆಗೆ ದಿಢೀರ್ ಭೇಟಿ:

ಕೆರೆ ಪರಿಶೀಲನೆಗೆ ಸಾಗುವ ವೇಳೆ ತಾಲೂಕಿನ ಪುಟ್ಟನಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿಗಳು ಹಾಗೂ ನ್ಯಾಯಾಧೀಶರು ದಿಢೀರ್ ಭೇಟಿ ನೀಡಿದರು. ಪುಟ್ಟ ಶಾಲಾ ಮಕ್ಕಳೊಂದಿಗೆ ಮಾತನಾಡಿ ಕಲಿಕೆ ಪ್ರಗತಿಯನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗಣಿತ ಪಾಠ ಹೇಳಿಕೊಟ್ಟರು.