ಸಾರಾಂಶ
ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ತಕ್ಷಣವೇ ಒಳ ಮೀಸಲು ಜಾರಿ ಮಾಡದಿದ್ದರೆ ಮುಂಬರುವ ಉಪ ಚುನಾವಣೆಯಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲಿದೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಎಚ್ಚರಿಕೆ ನೀಡಿದೆ. ಇಲ್ಲಿನ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಮಾಜಿ ಸದಸ್ಯ ಲಕ್ಷ್ಮಣ್, ಒಳ ಮೀಸಲಾತಿಯನ್ನು ಜಾರಿಗೊಳಿಸುವುದು ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಮೂರು ತಿಂಗಳಾಗುತ್ತಿದ್ದರೂ, ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಹಿಂದೇಟು ಹಾಕುತ್ತಿದೆ. ಇದರ ಹಿಂದೆ ಬೇರೆಯದೇ ಹುನ್ನಾರವಿದೆ ಎಂದರು. ಪುರಸಭೆ ಮಾಜಿ ಸದಸ್ಯ ಎಂ.ಶಿವಮೂರ್ತಿ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮತ್ತೊಂದು ಆಯೋಗ ರಚಿಸುವ ನಾಟಕವಾಡುತ್ತಿರುವುದು ಅತ್ಯಂತ ಖಂಡನೀಯ. ಒಂದೊಂದು ಕಡೆ ಒಂದೊಂದು ರೀತಿಯ ವಿಭಿನ್ನ ಹೇಳಿಕೆಗಳನ್ನು ನೀಡುತ್ತ ಮಾದಿಗರನ್ನು ನಿರ್ಲಕ್ಷ್ಯಿಸುವ ಬದಲು ಮೊದಲು ಒಳ ಮೀಸಲಾತಿ ಜಾರಿಗೆ ತರಲಿ ಎಂದು ಹೇಳಿದರು. ಮಾದಿಗ ಸಮುದಾಯಕ್ಕೆ ವಾಸ್ತವಾಂಶಗಳ ಅರಿವು ಇದೆ. ದತ್ತಾಂಶ, ಡಾಟ ಗೊತ್ತಿಲ್ಲದವರಂತೆ ನಾಟಕವಾಡುತ್ತಿರುವುದನ್ನು ನಾವುಗಳು ಸಹಿಸುವುದಿಲ್ಲ. ಆಯೋಗದ ಮೇಲೊಂದು ಆಯೋಗ ರಚಿಸುವುದಾಗಿ ಹೇಳಿ ನಮ್ಮ ಕಿವಿಗೆ ಹೂವು ಮುಡಿಸುವುದು ಬೇಡ. ವಿಧಾನಸಭೆ ಉಪ ಚುನಾವಣೆ ನೆಪ ಹೇಳುತ್ತ ಒಳ ಮೀಸಲಾತಿ ಜಾರಿಗೆ ತರುವುದನ್ನು ವಿಳಂಬ ಮಾಡುವುದು ಯಾವ ನ್ಯಾಯ ?
ಎಂದು ಪ್ರಶ್ನಿಸಿದ ಅವರು, ಒಳ ಮೀಸಲುಜಾರಿ ಮಾಡದಿದ್ದರೆ ಮಾದಿಗ ಸಮುದಾಯದವರೆಲ್ಲ ಹೋರಾಟಕ್ಕಿಳಿದು ರಾಜ್ಯದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಉರುಳಿಸುವುದಾಗಿ ಕಿಡಿ ಕಾರಿದರು.ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಗೂಳಿಹಟ್ಟಿ ಮಾತನಾಡಿ, ಒಳ ಮೀಸಲಾತಿಗಾಗಿ ಮೂವತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದರೂ, ರಾಜ್ಯ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಸದಾಶಿವ ಆಯೋಗ ದತ್ತಾಂಶ ಕ್ರೂಢಿಕರಿಸಿಯೇ ಸರ್ಕಾರಕ್ಕೆ ವರದಿ ನೀಡಿದ ಮೇಲೆ ದತ್ತಾಂಶ ಡಾಟ ಎನ್ನುವ ಪದ ಮತ್ತೇಕೆ ? ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು. ಹರಿಯಾಣ, ತೆಲಂಗಾಣ ಸರ್ಕಾರಗಳು ಕೈಗೊಂಡ ದಿಟ್ಟ ನಿರ್ಧಾರದಂತೆ ರಾಜ್ಯ ಸರ್ಕಾರವು ತೀರ್ಮಾನ ತೆಗೆದುಕೊಂಡು ಮಾಧುಸ್ವಾಮಿ ನೀಡಿರುವ ದತ್ತಾಂಶವನ್ನು ಯಥಾವತ್ತಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿದರು.ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಮಾತನಾಡಿ, ಒಳ ಮೀಸಲಾತಿ ಜಾರಿಗೆ ತರುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದರೂ, ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿಯಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಹೊಸ ಆಯೋಗ ರಚಿಸುವ ಪ್ರಸ್ತಾಪವೆತ್ತಿರುವುದನ್ನು ನೋಡಿದರೆ ಅಹಿಂದಾ ನಾಯಕ ಎಂದೇಳಿಕೊಳ್ಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾದಿಗ ವಿರೋಧಿ ಎನ್ನುವುದು ಗೊತ್ತಾಗುತ್ತದೆ. ಕಣ್ಣೊರೆಸುವ ತಂತ್ರಗಾರಿಕೆ ಬೇಡ ಎಂದರು. ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮರಿಪಾಲಯ್ಯ, ಡಿ.ಓ.ಮುರಾರ್ಜಿ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರಸ್ವಾಮಿ, ಡಿ.ತಿಪ್ಪೇಸ್ವಾಮಿ, ಸಿದ್ದಾರ್ಥ.ವಿ, ನವೀನ್ ನಾಯಕ, ಚನ್ನಗಾನಹಳ್ಳಿ ಮಲ್ಲೇಶ್, ಕರಿಕೆರೆ ತಿಪ್ಪೇಸ್ವಾಮಿ, ರವಿಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.