ಮತ ಹಾಕಿ ನೋಟಾ ಬಿಡಿ ನೋಟಾ ಬೇಡ ಓಟು ಹಾಕಿ: ಮತ ಹಾಕಿ ನೋಟಾ ಬಿಡಿ:ಚಿಂತಕ ಸೇತುರಾಂ

| Published : Apr 09 2024, 12:46 AM IST

ಮತ ಹಾಕಿ ನೋಟಾ ಬಿಡಿ ನೋಟಾ ಬೇಡ ಓಟು ಹಾಕಿ: ಮತ ಹಾಕಿ ನೋಟಾ ಬಿಡಿ:ಚಿಂತಕ ಸೇತುರಾಂ
Share this Article
  • FB
  • TW
  • Linkdin
  • Email

ಸಾರಾಂಶ

’ನೋಟಾ’ ಬೇಡ ’ಓಟು’ಹಾಕಿ. ನಂಬಿಕೆ ಮತ್ತು ನೈತಿಕತೆ ಬದುಕು ನಮ್ಮದು. ದೇಶದ ಜನ, ಆಸ್ತಿ, ಪರಂಪರೆ ನನ್ನದ್ದೆಂದುಕೊಳ್ಳುವ ಭಾವ ರಾಷ್ಟ್ರೀಯತೆ ಎಂದು ವಾಗ್ಮಿ, ನಿರ್ದೇಶಕ ಎಸ್.ಎನ್.ಸೇತುರಾಂ ಹೇಳಿದರು.

ಪ್ರಜಾಪ್ರಭುತ್ವದ ಹಬ್ಬ- 2024 ಅಂಗವಾಗಿ ಜಾಗೃತ ಮತದಾರರ ಸಮಾವೇಶ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

’ನೋಟಾ’ ಬೇಡ ’ಓಟು’ಹಾಕಿ. ನಂಬಿಕೆ ಮತ್ತು ನೈತಿಕತೆ ಬದುಕು ನಮ್ಮದು. ದೇಶದ ಜನ, ಆಸ್ತಿ, ಪರಂಪರೆ ನನ್ನದ್ದೆಂದುಕೊಳ್ಳುವ ಭಾವ ರಾಷ್ಟ್ರೀಯತೆ ಎಂದು ವಾಗ್ಮಿ, ನಿರ್ದೇಶಕ ಎಸ್.ಎನ್.ಸೇತುರಾಂ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಪ್ರಜಾಪ್ರಭುತ್ವದ ಹಬ್ಬ- 2024 ಅಂಗವಾಗಿ ಸುಗಮ ಸಂಗೀತಗಂಗಾ, ಸಂಸ್ಕಾರ ಭಾರತಿ, ಯುವ ಬ್ರಿಗೇಡ್, ವಂದೇ ಮಾತರಂ ಟ್ರಸ್ಟ್, ವಿವೇಕ ಜಾಗೃತ ಬಳಗ, ನಾದಚೈತನ್ಯ, ಅಖಿಲಭಾರತೀಯ ಸಾಹಿತ್ಯ ಪರಿಷದ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಸಂಯುಕ್ತವಾಗಿ ಆಯೋಜಿಸಿದ್ದ ’ಜಾಗೃತ ಮತದಾರರ ಸಮಾವೇಶ’ ದಲ್ಲಿ ’ರಾಷ್ಟ್ರೀಯತೆ ಹತ್ತು ಹಲವು ಮುಖಗಳು’ ಕುರಿತಂತೆ ಉಪನ್ಯಾಸ ನೀಡಿದ ಅವರು, ಮತದಾರರೊಂದಿಗೆ ಸಂವಾದ ನಡೆಸಿದರು.

ದೇಶದ ಆಗು-ಹೋಗು, ಸರಿ-ತಪ್ಪು ತುಲನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ, ವಿವೇಚನೆಗೆ ಬೇಕಾದ ಜ್ಞಾನ ಮತ್ತು ಯೋಗ್ಯತೆ ನಮ್ಮಲ್ಲಿರಬೇಕು. ದೇಶದ ಸಾಧನೆ ಕೀಳಾಗಿ ನೋಡುವುದು ಬೇಡ, ಅನೇಕ ಸಂಗತಿಗಳು ಸುಳ್ಳಿರಬಹುದು. ಆದರೆ ಆಗುತ್ತಿರುವ ಸಕಾರಾತ್ಮಕ ಅಂಶಗಳನ್ನು ಗುರುತಿಸೋಣ. ನಮ್ಮವರ ಗೆಲುವಿಗೆ ಸಂತಸ ಪಡೋಣ, ಆಳುವವರ ಬಗ್ಗೆ ಸ್ಪಷ್ಟತೆ ಬೇಕು. ದೇಶ, ಜನ, ಸುತ್ತಲಿನ ವಸ್ತುಗಳೆಲ್ಲ ನನ್ನದೇ ಎಂಬ ಭಾವವೇ ರಾಷ್ಟ್ರೀಯತೆಯ ಲಕ್ಷಣ ಎಂದರು.

ಅಪಸವ್ಯಗಳ ಮೂಲಕ ಕಾನೂನನ್ನು ಅಳೆಯಬೇಡಿ. ಬದಲಾವಣೆಯನ್ನು ತೆರೆದ ಕಣ್ಣಿನಿಂದ ಗಮನಿಸಬೇಕು. ನಮ್ಮ ಎಚ್ಚರ ನಮಗಿರಬೇಕು. ನೋಟಾ ಚಲಾಯಿಸುವುದರಿಂದ ಏನೂ ಪ್ರಯೋಜನವಿಲ್ಲ. ಬದುಕು, ಆಲೋಚನಾ ಲಹರಿಯನ್ನು ಆಳುವುದು ನೈತಿಕತೆ. ಇದು ಸಾವಿರಾರು ವರ್ಷಗಳಿಂದ ತಲೆ ತಲೆಮಾರಿನಿಂದ ಹರಿದು ಬಂದಿದೆ. ಪ್ರೀತಿಸಲು ಕಾರಣ ಬೇಕಿಲ್ಲ. ಆದರೆ ದ್ವೇಷಿಸಲು ಕಾರಣವಿರಬೇಕು. ಬದುಕಿಗೆ ಒಂದು ಮಾಪನ ನೈತಿಕತೆ ಎಂದು ಹೇಳಿದರು.

ದಾಸ್ಯದಿಂದ ಆಚೆ ಬರೋಣ. ಸಾವಿರ ವರ್ಷಗಳ ದಾಸ್ಯದ ಪರಿಣಾಮ ನಮ್ಮ ಆಲೋಚನೆಗಳಲ್ಲೂ ಪ್ರಭಾವಿಸಿದೆ. ದೇವಸ್ಥಾನ, ಪೂಜೆ, ಪದ್ಧತಿ ತಲೆ ತಲಾಂತರದಿಂದ ಬಂದಿರುವುದನ್ನು ಕೆಲವರು ಟೀಕಿಸುತ್ತಾರೆ. ಪದ್ಧತಿ ಪಾಲನೆಯಾಗದಿದ್ದರೆ ದೇವಸ್ಥಾನಕ್ಕೆ ಹೋಗಬೇಕಾದವರು ಹೋಗುವುದಿಲ್ಲ. ಆಸಕ್ತರು ಹೋಗದಿದ್ದರೆ ಪಾಳುಬಿದ್ದು ಲೂಟಿಕೋರರ ಪಾಲಾಗುತ್ತವೆ ಎಂಬುದನ್ನು ನೆನಪಿಡಬೇಕೆಂದರು.

ನಮಗೆ ಸ್ವಾತಂತ್ರ್ಯಬಂದು 70 ವರ್ಷ ದೇಶಕ್ಕೆ ಅಗಾಧವಲ್ಲ. ಸಾಕಷ್ಟು ಬೆಳೆದಿದ್ದೇವೆ. ಕೆಟ್ಟದಿನಗಳನ್ನೂ ಕಂಡಿರಬಹುದು. ಬೇಜವಾಬ್ದಾರಿಯಿಂದ ಹಿಂದೆ ಉಳಿದಿರಬಹುದು. 140 ಕೋಟಿ ಜನರಿಗೆ ಊಟ ಹಾಕುತ್ತಿರುವ ದೇಶ ನಮ್ಮದು. 500 ವರ್ಷಗಳ ಹಿಂದೆಯೆ ಸುಂದರ ದೇವಾಲಯ ಕಟ್ಟಿದವರು ನಾವು, ಆದರೆ ಬ್ರಿಟಿಷರು ದೇವಾಲಯವಿರಲಿ ತಮ್ಮ ಮನೆಕಟ್ಟಿಕೊಳ್ಳಲು ಇಲ್ಲಿಗೆ ಬಂದವರು. ಇಲ್ಲಿದ್ದಾಗ ಲೂಟಿ ಮಾಡಿ ಬದುಕಿದರೆ, ಇಲ್ಲಿಂದ ಹೋದಮೇಲೆ ನಮ್ಮಲ್ಲಿ ಆರ್ಥಿಕ ಅಪರಾಧವೆಸಗಿದ ಮಲ್ಯರಂತಹ ಅಪರಾಧಿಗಳ ಕಾಸಿನಿಂದ ಬದುಕುತ್ತಿದ್ದಾರೆಂದು ಅಪಹಾಸ್ಯ ಮಾಡಿದರು.

ಸುಗಮ ಸಂಗೀತ ಗಂಗಾ ಉಪಾಧ್ಯಕ್ಷ ಸ.ಗಿರಿಜಾಶಂಕರ್ ಮಾತನಾಡಿ, ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾರ ಜಾಗೃತನಾಗಬೇಕು. ಎಷ್ಟೇ ಸಿರಿವಂತನಿದ್ದರೂ ಜನಸಾಮಾನ್ಯರನ್ನು ಮತ ನೀಡುವಂತೆ ಕೋರಬೇಕಾದ ಸ್ಥಿತಿಯೆ ಪ್ರಜಾಪ್ರಭುತ್ವದ ಹಿರಿಮೆ. ಚುನಾವಣೆಗಳು ನಡೆದಂತೆಲ್ಲ ಮತದಾರ ಪಕ್ವಗೊಳ್ಳುತ್ತಿಲ್ಲ ಎಂದು ವಿಷಾಧಿಸಿದ ಅವರು, ಮತದಾನ ಮಾಡದಿರುವುದು ಅಪರಾಧ ಎಂದರು.

ಸುಗಮ ಸಂಗೀತ ಗಂಗಾ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ, ವಂದೇಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೀಶ್, ಸಂಸ್ಕಾರ ಭಾರತಿ ಜಿಲ್ಲಾಧ್ಯಕ್ಷ ನಾಯಕ್ ಸಚ್ಚಿದಾನಂದ, ವಿವೇಕ ಜಾಗೃತ ಬಳಗದ ಅಧ್ಯಕ್ಷ ಸಿದ್ದಯ್ಯ, ನಾದ ಚೈತನ್ಯ ಅಧ್ಯಕ್ಷ ಪ್ರೇಂ ಕುಮಾರ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಜಿಲ್ಲಾಧ್ಯಕ್ಷ ಅರವಿಂದ ದೀಕ್ಷಿತ್, ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ, ಮಂಜುನಾಥ್ ಕಾಮತ್ ವೇದಿಕೆಯಲ್ಲಿದ್ದರು. ಸುಮಾ ಪ್ರಸಾದ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು. ಸೇತುರಾಂ ಅವರನ್ನು ಗೌರವಿಸಲಾಯಿತು. 8 ಕೆಸಿಕೆಎಂ 1

ಚಿಕ್ಕಮಗಳೂರಿನ ಕುವೆಂಪು ಕಲಾ ಮಂದಿರದಲ್ಲಿ ನಡೆದ ’ಜಾಗೃತ ಮತದಾರರ ಸಮಾವೇಶ’ವನ್ನು ಚಿಂತಕ ಸೇತುರಾಂ ಉದ್ಘಾಟಿಸಿದರು. ಅರವಿಂದ್‌ ದೀಕ್ಷಿತ್‌, ಗಿರಿಜಾಶಂಕರ್‌, ಡಾ. ಜೆ.ಪಿ. ಕೃಷ್ಣೇಗೌಡ, ಪ್ರಭುಲಿಂಗಶಾಸ್ತ್ರಿ, ಪ್ರೇಮ್‌ಕುಮಾರ್‌ ಇದ್ದರು.