ದೇಶದ ಉತ್ತಮ ಭವಿಷ್ಯಕ್ಕೆ ಮತದಾನ ಮಾಡಿ: ಅಭಿಷೇಕ್‌

| Published : Apr 19 2024, 01:11 AM IST

ಸಾರಾಂಶ

ಹೊನ್ನಾಳಿಯ ದೇವನಾಯ್ಕನಹಳ್ಳಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ಸ್ವೀಪ್ ಸಮಿತಿ, ತಾಪಂ, ಕಂದಾಯ ಇಲಾಖೆ, ಪುರಸಭೆ, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಗುರುವಾರ ಪಟ್ಟಣದ ದೇವನಾಯ್ಕನ ಹಳ್ಳಿಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಹಾಗೂ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮತದಾನ ಜಾಗೃತಿ ಸ್ವೀಪ್ ಕಾರ್ಯಕ್ರಮ ನಡೆಸಲಾಯಿತು.

ಉಪ ವಿಬಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ವಿ.ಅಭಿಷೇಕ್ ಮಾತನಾಡಿ, ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ದೇಶದ ನಾಳಿನ ಉತ್ತಮ ಭವಿಷ್ಯ ನಿರ್ಮಾಣಕ್ಕಾಗಿ ತಪ್ಪದೇ ಎಲ್ಲಾ ಅರ್ಹ ಮತದಾರರು ಮತದಾನ ಮಾಡಬೇಕು. ಪ್ರಜೆಗಳಿಗೆ ದತ್ತವಾದ ಸಂವಿಧಾನಾತ್ಮಕ ಹಕ್ಕು ಮತದಾನವಾಗಿದ್ದು, ಇದನ್ನು ಎಲ್ಲರೂ ಕೂಡ ದೇಶದ ಹಿತಕ್ಕಾಗಿ ಚಲಾಯಿಸಬೇಕು ಎಂದು ಹೇಳಿದರು.

ಮತದಾನದ ಮಹತ್ವದ ಬಗ್ಗೆ ಈಗಾಗಲೇ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಜಾಥಾ, ಬೈಕ್ ರ್‍ಯಾಲಿ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕೆಲವರು ನಾನೋಬ್ಬ ಮತ ಚಲಾಯಿಸದಿದ್ದರೆ ಏನಾಗುತ್ತದೆ ಎಂಬ ತಾತ್ಸಾರ ಮನೋಭಾವನೆ ಹೊಂದಿರುತ್ತಾರೆ. ಇಂತಹ ಮನೋಭಾವನೆ ಪ್ರಜಾಪ್ರಭುತ್ವದ ಯಶಸ್ವಿಗೆ ಮಾರಕವಾಗುತ್ತದೆ. ಎಲ್ಲರೂ ಕೂಡ ಮತದಾನ ಮಾಡುವ ಮೂಲಕ ಶೇ.100ಕ್ಕೆ ನೂರರಷ್ಟು ಮಾತದಾನದ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.

ಹೊನ್ನಾಳಿ ತಹಸೀಲ್ದಾರ್ ಪುರಂದರ ಹೆಗಡೆ ಕಾಲೇಜಿನ ವಿದ್ಯಾರ್ಥಿಗಳನ್ನೂ ಒಳಗೊಂಡಂತೆ ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿ, ಮತದಾನ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಮತದಾರರು ಪಾಲ್ಗೊಳ್ಳುವುದರಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಿದಂತಾಗುವುದು ಹಾಗೂ ಉತ್ತಮ ನಾಯಕರನ್ನು ಆಯ್ಕೆ ಮಾಡುವ ಮೂಲಕ ದೇಶದ ಭವಿಷ್ಯ ಮತ್ತು ಘನತೆ ಉತ್ತಮಗೊಳಿಸಬಹುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ನಿರಂಜನಿ ಸ್ವಾಗತಿಸಿದರು. ನ್ಯಾಮತಿ ತಹಸೀಲ್ದಾರ್ ಫಿರೋಜ್ ಷಾ, ಗ್ರೇಡ್ -2 ತಹಸೀಲ್ದಾರ್ ಗೋವಿಂದಪ್ಪ, ತಾಪಂ ಇಒ ಸುಮಾ, ಬಿಇಓ ನಂಜರಾಜ್, ಬಿಆರ್ಸಿ ತಿಪ್ಪೇಶಪ್ಪ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಧನಂಜಯ, ದೈಹಿಕ ಶಿಕ್ಷಣ ನಿರ್ದೇಶಕ ಹರೀಶ್, ಪುರಸಭ ಇಂಜಿನಿಯರ್ ದೇವರಾಜ್, ಕಂದಾಯ ಮತ್ತು ಪರುಸಭೆ ಅಧಿಕಾರಿಗಳು ಕಾಲೇಜಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.