ಸಾರಾಂಶ
ಶಿರಸಿ: ವಿಶ್ವನಾಯಕ ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿಯನ್ನಾಗಿಸಲು ಬಿಜೆಪಿಗೆ ಮತ ನೀಡಿ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದರು.ತಾಲೂಕಿನ ಬದನಗೋಡಿನಲ್ಲಿ ನಡೆದ ಚುನಾವಣಾ ಪ್ರಚಾರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ವಿಶ್ವವೇ ಮೆಚ್ಚಿಕೊಂಡಿದೆ. ಅವರ ದೂರದೃಷ್ಟಿ ಯೋಜನೆಗಳು ದೇಶವನ್ನು ಬಲಗೊಳಿಸಿವೆ. ಕಾಂಗ್ರೆಸ್ ಸರ್ಕಾರದ ಯೋಜನೆಗಳಂತೆ ದಿವಾಳಿಯಾಗಿಸಿಲ್ಲ. ಕಳೆದ ಹತ್ತು ವರ್ಷದಲ್ಲಿ ಭಾರತಕ್ಕೆ ಪ್ರಪಂಚದ ಮಟ್ಟದಲ್ಲಿ ಒಂದು ವಿಶಿಷ್ಟ ಹೊಳಪು ತಂದುಕೊಟ್ಟವರು ಮೋದಿ ಅವರು. ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು. ಮೋದಿ ಅವರ ಕೈ ಬಲಪಡಿಸಲು ಎಲ್ಲರೂ ಒಂದಾಗಿ ಮತದಾನ ಮಾಡಬೇಕು ಎಂದರು.ನಮ್ಮ ಕೆಲಸಕ್ಕೆ ಅಡೆತಡೆಗಳು ನೂರು ಇರಬಹಯದು. ಪ್ರತಿಪಕ್ಷಗಳು ಇಲ್ಲಸಲ್ಲದ ಒಡಕಿನ ಮಾತಾಡಬಹುದು. ಆದರೆ ಬಿಜೆಪಿ ಇದೊಂದು ಗಟ್ಟಿಯಾದ ಕುಟುಂಬ. ಹೊರಗಿನ ಜೊಳ್ಳು ಮಾತುಗಳು ಕಿವಿಗೆ ಬಿದ್ದರೂ ತಲೆ ಕೆಡಿಸಿಕೊಳ್ಳದೇ ನಮ್ಮ ಕಾರ್ಯ ಮಾಡಬೇಕು ಎಂದರು.
ವಕ್ತಾರ ಹರಿಪ್ರಕಾಶ ಕೋಣೆಮನೆ ಮಾತನಾಡಿದರು. ಈ ವೇಳೆ ಎಸ್.ಎನ್. ಭಟ್ಟ, ವಿಎಂ. ಹೆಗಡೆ, ರಮೇಶ ನಾಯ್ಕ ಪ್ರದಾನ ಕಾರ್ಯದರ್ಶಿ,ಉಷಾ ಹೆಗಡೆ, ಶ್ರೀರಾಮ ನಾಯ್ಕ ಮತ್ತಿತರರು ಇದ್ದರು.