ಸರ್ವೋತ್ತಮರ ಆಯ್ಕೆ ಮತದಾರರ ಜವಾಬ್ದಾರಿ

| Published : Apr 27 2024, 01:22 AM IST

ಸಾರಾಂಶ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಇಡೀ ಜಗತ್ತಿಗೇ ಮಾದರಿಯಾಗಿದೆ. ಕೇವಲ ಉತ್ತಮರನಲ್ಲ, ಸರ್ವೋತ್ತಮರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಆದ್ದರಿಂದ ಮೇ 7ರಂದು 100ಕ್ಕೆ 100ರಷ್ಟು ಮತದಾನ ಆಗುವಂತೆ ಎಲ್ಲರೂ ಓಟ್‌ ಹಾಕಬೇಕಿದೆ ಎಂದು ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಗೋಡೆ ಮೇಲೆ ಚಿತ್ರ- ಬರಹ ಕಾರ್ಯಕ್ರಮದಲ್ಲಿ ಮುಖ್ಯಾಧಿಕಾರಿ ನಿರಂಜನಿ- - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನ ಇಡೀ ಜಗತ್ತಿಗೇ ಮಾದರಿಯಾಗಿದೆ. ಕೇವಲ ಉತ್ತಮರನಲ್ಲ, ಸರ್ವೋತ್ತಮರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಆದ್ದರಿಂದ ಮೇ 7ರಂದು 100ಕ್ಕೆ 100ರಷ್ಟು ಮತದಾನ ಆಗುವಂತೆ ಎಲ್ಲರೂ ಓಟ್‌ ಹಾಕಬೇಕಿದೆ ಎಂದು ಹೊನ್ನಾಳಿ ಪುರಸಭೆ ಮುಖ್ಯಾಧಿಕಾರಿ ನಿರಂಜನಿ ಹೇಳಿದರು.

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಭವನ ಆವರಣದಲ್ಲಿ ಗುರುವಾರ ಪುರಸಭೆ, ತಾಲೂಕು ಆಡಳಿತ ಹಾಗೂ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಗೋಡೆ ಮೇಲೆ ಚಿತ್ರ ಬಿಡಿಸುವುದು ಹಾಗೂ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಹಾಯಕ ಪ್ರಾಧ್ಯಾಪಕಿ ಪುಪ್ಪಲತಾ ಮಾತನಾಡಿ, ದೇಶದ ಶಕ್ತಿಯು ಆಯಾ ರಾಷ್ಟ್ರಗಳ ಪ್ರಜೆಗಳು ಎಂತಹ ನಾಯಕರನ್ನು ಚುನಾವಣೆಯಲ್ಲಿ ಆಯ್ಕೆ ಮಾಡುತ್ತಾರೆ ಎನ್ನುವುದರ ಮೇಲೆ ಅವಲಂಬಿತ ಆಗಿರುತ್ತದೆ. ಪ್ರಜೆಗಳಾದ ನಾವು ಉತ್ತಮ ನಾಯಕರಿಗೆ ಮತ ಹಾಕಿ, ಗೆಲ್ಲಿಸಿದರೆ ದೇಶದ ಅಭಿವೃದ್ಧಿಗೆ ಸಹಕಾರಿ ಆಗುತ್ತದೆ ಎಂದರು.

ಗೋಡೆ ಚಿತ್ರ ಬಿಡಿಸಿದ ಕಾಲೇಜಿನ ವಿದ್ಯಾರ್ಥಿನಿ ಗಾಯತ್ರಿ ಮುದ್ದಣನವರ್ ಮಾತನಾಡಿ, ತಾನು ಇದೇ ಪ್ರಥಮ ಬಾರಿಗೆ ಮತ ಚಲಾಯಿಸುವ ಹಕ್ಕನ್ನು ಪಡೆದಿದ್ದೇನೆ. ಸ್ವತಂತ್ರವಾಗಿ ಆಲೋಚಿಸಿ, ಸೂಕ್ತ ಅಭ್ಯರ್ಥಿಗೆ ಮತ ಹಾಕುತ್ತೇನೆ. ಯುವಜನರೂ ಸಹ ಆಮಿಷಗಳಿಗೆ ಬಲಿಯಾಗದೇ ಮತದಾನ ಹಕ್ಕು ಚಲಾಯಿಸಬೆಕಿದೆ ಎಂದು ತಿಳಿಸಿದರು.

ದಲಿತ ಮುಖಂಡ ಎ.ಡಿ.ಈಶ್ವರಪ್ಪ, ಪುರಸಭೆ ಆರೋಗ್ಯಾಧಿಕಾರಿ ಪರಮೇಶ್ವರ ನಾಯ್ಕ, ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷೆ ರೇಣುಕಮ್ಮ, ಸ್ಥಳೀಯ ಮುಖಂಡರು, ಪುರಸಭೆ ಸಿಬ್ಬಂದಿ ಸಾರ್ವಜನಿಕರು ಇದ್ದರು.

ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸಹಾಯಕ ಪ್ರಾಧ್ಯಾಪಕಿ ಪುಪ್ಪಲತಾ ನೇತೃತ್ವದಲ್ಲಿ ಅಂಬೇಡ್ಕರ್ ಭವನಕ್ಕೆ ಅಗಮಿಸಿ ಚುನಾವಣೆ, ಮತದಾನದ ಮಹತ್ವವನ್ನು ಪ್ರತಿಬಿಂಬಿಸುವ ಸುಂದರ ಚಿತ್ರಗಳನ್ನು ಗೋಡೆಗಳ ಮೇಲೆ ಚಿತ್ರಿಸಿ, ಎಲ್ಲರ ಗಮನ ಸೆಳೆದರು.

- - - -25ಎಚ್.ಎಲ್ಐ3:

ಹೊನ್ನಾಳಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಗೋಡೆ ಮೇಲೆ ಚಿತ್ರ ಬಿಡಿಸುವ ಮತ್ತು ಬರಹಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು.