ಸಾರಾಂಶ
ಹಾಸನದ ಮಾನವ ಕಲಾ ತಂಡದವರು ಬೀದಿ ನಾಟಕ ಹಾಗೂ ಮತದಾನ ಜಾಗೃತಿ ಗಾಯನದ ಮೂಲಕ ಜನರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದರು ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಜಾಥ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನ ವ್ಯವಸ್ಥೆಯೂ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಮತ ಚಲಾಯಿಸುವುದು ಪ್ರತಿ ಮತದಾರನ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಮತದಾನದಿಂದ ದೂರ ಉಳಿಯದೇ ಕಡ್ಡಾಯವಾಗಿ ಮತದಾನದಲ್ಲಿ ಭಾಗವಹಿಸುವ ಜತೆಗೆ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ ಮುಕ್ತವಾಗಿ ನಾಗರಿಕರು ಮತದಾನ ಮಾಡುವಂತೆ ತಾಪಂ ಯೋಜನಾಧಿಕಾರಿ ಗೋಪಾಲ್ ಪಿ.ಆರ್. ಸಲಹೆ ನೀಡಿದರು.ಪಟ್ಟಣದ ಪುರಸಭೆ ಮುಂಭಾಗದಲ್ಲಿ ತಾಲೂಕು ಸ್ಪೀಪ್ ಕಮಿಟಿ ವತಿಯಿಂದ ಮತದಾನ ಜಾಗೃತಿ ಅರಿವು ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ತಾಲೂಕು ಸಹಾಯಕ ಚುನಾವಣಾಧಿಕಾರಿ ಸತೀಶ್ ಚಾಲನೆ ನೀಡಿ ಮಾತನಾಡಿದರು. ಮತದಾನ ದಿನದಂದು ರಜೆ ಇರುತ್ತದೆಯೆಂದು ಎಂದು ಪ್ರವಾಸಕ್ಕೆ ತೆರಳದೇ ಜವಾಬ್ದಾರಿಯುತ ನಾಗರಿಕರಾಗಿ ಮತದಾನ ಕಾರ್ಯದಲ್ಲಿ ಭಾಗವಹಿಸಬೇಕು. ಮತಗಟ್ಟೆಗಳಲ್ಲಿ ಮತದಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕುಡಿಯುವ ನೀರು, ಅಗತ್ಯವಿರುವವರಿಗೆ ವೀಲ್ ಚೇರ್, ರೇಲಿಂಗ್ಸ್ ಮುಂತಾಧ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದ್ದು, ನಾಗರಿಕರು ತಪ್ಪದೇ ಮತ ಚಲಾಯಿಸಬೇಕೆಂದು ವಿನಂತಿಸಿದರು.
ಹಾಸನದ ಮಾನವ ಕಲಾ ತಂಡದವರು ಬೀದಿ ನಾಟಕ ಹಾಗೂ ಮತದಾನ ಜಾಗೃತಿ ಗಾಯನದ ಮೂಲಕ ಜನರಲ್ಲಿ ಅರಿವನ್ನು ಮೂಡಿಸುವ ಪ್ರಯತ್ನ ಮಾಡಿದರು ಮತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮತದಾನ ಜಾಗೃತಿ ಜಾಥ ನಡೆಸಲಾಯಿತು.ತಾಲೂಕು ಸಹಾಯಕ ಚುನಾವಣಾಧಿಕಾರಿ ಸತೀಶ್, ತಾಪಂ ಇಒ ಕುಸುಮಾಧರ್, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ, ರಾಜಸ್ವ ನಿರೀಕ್ಷಕ ಸತೀಶ್, ಪುರಸಭೆ ಅಧಿಕಾರಿಗಳಾದ ನಾಗೇಂದ್ರ ಕುಮಾರ್, ರಮೇಶ್, ಪಂಕಜಾ, ಮೋಹನಕುಮಾರಿ, ಶೇಖರ್, ಅಬ್ಬಾಸ್, ಇತರರು ಇದ್ದರು.