ಸಾರಾಂಶ
ನಿತಿಶ್ ಕುಮಾರ್, ಚಂದ್ರಬಾಬು ನಾಯ್ಡು ತಿರಸ್ಕರಿಸಲಿದ್ದಾರೆ: ಸಚಿವ ರಹೀಂ ಖಾನ್
ಕನ್ನಡಪ್ರಭ ವಾರ್ತೆ ಶಿವಮೊಗ್ಗಮುಸ್ಲಿಂ ಸಮುದಾಯದವರೇ ದಾನ ಮಾಡಿರುವ ಜಾಗವನ್ನು ವಕ್ಫ್ ಅನ್ನುತ್ತಾರೆ. ಬಿಜೆಪಿಯವರು ಇದನ್ನು ಬೇರೆ ರೀತಿಯಲ್ಲಿ ತಿರುಚಿ ರೈತರಿಗೆ, ಸಾರ್ವಜನಿಕರಲ್ಲಿ ಆತಂಕ ಮೂಡುವಂತೆ ಮಾಡಿದ್ದಾರೆ ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.ಸೋಮವಾರ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಮಹಾರಾಷ್ಟ ಚುನಾವಣೆ ಇತ್ತು. ಈಗ ದೆಹಲಿ ಚುನಾವಣೆ ಇದೆ. ಬಿಜೆಪಿಗೆ ಯಾವತ್ತು ಒಂದು ವಿಷಯ ಬೇಕಾಗುತ್ತೆ. ಹೀಗಾಗಿ ರಾಮಮಂದಿರ ವಿಷಯ, ಹಿಜಾಬ್ ವಿಷಯ ಇತ್ತು ಆಮೇಲೆ ನೀವು ಯಾವ ಊಟ ಮಾಡುತ್ತೀರಾ ಅಂತ ವಿಷಯ ತಂದ್ರು. ಈಗ ವಕ್ಫ್ ವಿಷಯ ತಂದಿದ್ದಾರೆ ಎಂದು ಕಿಡಿಕಾರಿದರು.
ನೂರಕ್ಕೆ ನೂರು ವಕ್ಫ್ ತಿದ್ದುಪಡಿ ಮಸೂದೆ ಪಾಸಾಗುವುದಿಲ್ಲ. ಮಂಗಳವಾರ ವಕ್ಫ್ ತಿದ್ದುಪಡಿ ಬಿಲ್ ಮಂಡನೆ ಇದೆ. ಆದರೆ ಇದನ್ನು ನಿತಿಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರೆ ತಿರಸ್ಕರಿಸಲಿದ್ದಾರೆ. ಬೀದರ್ನಲ್ಲಿ 70 ವರ್ಷದ ಹಿಂದೆ 400 ಎಕರೆ ವಕ್ಫ್ ಆಸ್ತಿ ಇತ್ತು. ಈಗ 10 ಎಕರೆ ಕೂಡ ಇಲ್ಲ ಎಂದರು.ಇಂದಿರಾ ಕ್ಯಾಂಟಿನ್ನಲ್ಲಿ ನೀರಿನ ಸಮಸ್ಯೆ ಆಗಬಾರದು. ಇಂದಿರಾ ಕ್ಯಾಂಟೀನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆಲವು ಸಮಸ್ಯೆ ಕಂಡು ಬಂದಿದ್ದು, ಆ ಬಗ್ಗೆ ಗಮನ ಹರಿಸಲು ಹೇಳಿದ್ದೇನೆ. ಬಡವರಿಗಾಗಿ ಮಾಡಿದ ಯೋಜನೆ ಇದು. ಮುಂದೆ 180 ಹೊಸ ಇಂದಿರಾ ಕ್ಯಾಂಟಿನ್ ನಿರ್ಮಾಣ ಆಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಇಂದಿರಾ ಕ್ಯಾಂಟೀನ್ ಪರಿಶೀಲನೆಶಿವಮೊಗ್ಗಕ್ಕೆ ಸೋಮವಾರ ಭೇಟಿ ನೀಡಿದ್ದ ಸಚಿವ ರಹೀಂಖಾನ್ ಬಿ.ಎಚ್.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಇಂದಿರಾ ಕ್ಯಾಂಟೀನ್ನಲ್ಲಿ ಊಟ ಸವಿದರು. ಬಳಿಕ ಕ್ಯಾಂಟೀನ್ ಸಿಬ್ಬಂದಿ ಜೊತೆ ಊಟ ನೀಡುತ್ತಿರುವ ಬಗ್ಗೆ ಚರ್ಚೆ ನಡೆಸಿದರು. ವಿಐಪಿಗಳು ಬಂದಾಗ ಮಾತ್ರ ಉತ್ತಮ ಊಟ ಕೊಡುತ್ತಾರೆ ಎಂದು ದೂರಿದೆ. ಈ ರೀತಿ ಮಾಡಿದರೆ ಅದು ಸರಿಯಲ್ಲ. ಸಾರ್ವಜನರಿಗೂ ಸುಚಿ, ರುಚಿ ಊಟ ಸಿಗಬೇಕು. ಊಟದ ಜೊತೆಗೆ ಚಪಾತಿಯು ಕೊಡಲಾಗುತ್ತಿದೆ ಎಂದ ಅವರು, ಕ್ಯಾಂಟೀನ್ ನಿರ್ವಹಣೆಯನ್ನು ಸರಿಯಾಗಿ ಮಾಡುವಂತೆ ಸೂಚನೆ ನೀಡಿದರು. ಸಚಿವರಿಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದರು.