ರಿಕ್ಕಿ ರೈ ಕೊಲೆಗೆ ಪೂರ್ವ ನಿಯೋಜಿತ ಸಂಚು ನಡೆದಿತ್ತಾ?

| Published : Apr 20 2025, 01:50 AM IST

ಸಾರಾಂಶ

ರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೊಲೆಗೆ ಪೂರ್ವ ನಿಯೋಜಿತ ಸಂಚು ನಡೆದಿತ್ತಾ ಎಂಬ ಅನುಮಾನಗಳು ಹುಟ್ಟುಕೊಂಡಿವೆ.

ರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಕೊಲೆಗೆ ಪೂರ್ವ ನಿಯೋಜಿತ ಸಂಚು ನಡೆದಿತ್ತಾ ಎಂಬ ಅನುಮಾನಗಳು ಹುಟ್ಟುಕೊಂಡಿವೆ.

ಎರಡು ದಿನಗಳ ಹಿಂದೆ ರಷ್ಯಾದಿಂದ ಬಂದಿರುವ ರಿಕ್ಕಿ ರೈ ಬೆಂಗಳೂರಿನಿಂದ ರಾತ್ರಿ ಕರಿಯಪ್ಪನದೊಡ್ಡಿಯಲ್ಲಿರುವ ಮನೆಗೆ ಬಂದಿದ್ದರು. ತಡರಾತ್ರಿ ಮನೆಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. ದುಷ್ಕರ್ಮಿಗಳು ರಿಕ್ಕಿಯ ಚಲನವಲನಗಳ ಮೇಲೆ ನಿಗಾ ಇಟ್ಟು ಕಾದು ಕೃತ್ಯ ಎಸಗಿದ್ದಾರೆ.

ರಿಕ್ಕಿ ಬರುವುದನ್ನೇ ಕಾದು ಜಾಗ ಗುರುತಿಸಿಕೊಳ್ಳಲಾಗಿದೆ. ಕಾಂಪೌಂಡ್​ ಒಂದರ ಮಧ್ಯೆ ಅವಿತುಕೊಂಡು ದುಷ್ಕರ್ಮಿ ಶೂಟ್​ ಮಾಡಿದ್ದಾನೆ. ಮಿಡ್ ನೈಟ್​ನಲ್ಲಿ ರಿಕ್ಕಿ ರೈ ಹೋಗೋ ಬಗ್ಗೆ ಮಾಹಿತಿ ಕೊಟ್ಟವರು ಯಾರು? ಸಂಚಿನ ಹಿಂದಿರೋರು ಯಾರು? ಯಾವ ಕಾರಣಕ್ಕೆ ಈ ದುಷ್ಕೃತ್ಯ ಎಸಗಿದರು ಅನ್ನೋದು ಪತ್ತೆ ಹಚ್ಚಲಾಗುತ್ತಿದೆ. ಮೇಲ್ನೋಟಕ್ಕೆ ಪ್ರೊಫೆಷನಲ್ ಶಾರ್ಪ್ ಶೂಟರ್​ನಿಂದಲೇ ಅಟ್ಯಾಕ್ ನಡೆದಿದ್ದು, ಅದೃಷ್ಟವಶಾತ್ ರಿಕ್ಕಿ ರೈ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾಂಪೌಂಡ್‌ನಲ್ಲಿ ಅವಿತು ದುಷ್ಕರ್ಮಿಯಿಂದ ದಾಳಿ:

ಖಾಸಗಿಯವರಿಗೆ ಸೇರಿದ ರಸ್ತೆ ಪಕ್ಕದ ಕಾಂಪೌಡ್ ಗ್ಯಾಪ್​ ಮಧ್ಯೆ ಬಚ್ಚಿಟ್ಟುಕೊಂಡು ದುಷ್ಕರ್ಮಿ ದಾಳಿ ಮಾಡಿದ್ದಾನೆ. ಅಂದರೆ ಕಾರು ಬೆಂಗಳೂರಿಗೆ ಹೊರಡುತ್ತಿರಬೇಕಾದರೆ ಬಲಗಡೆ ಭಾಗದಲ್ಲಿ ಒಂದು ಕಾಂಪೌಂಡ್​ ಗ್ಯಾಪ್​ ಮಧ್ಯೆ ಅವಿತುಕೊಂಡು, ಅಲ್ಲಿಂದ ಫೈರಿಂಗ್​ ಆಗಿದೆ. 70 ಎಂಎಂ ಬುಲೆಟ್​ನ ಶಾಟ್​ಗನ್​ ಬಳಸಿ ಫೈರಿಂಗ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಎರಡನೇ ಬಾರಿ ಹಾರಿಸಿದ ಗುಂಡು ಕಾರಿನ ಡೋರ್​ ಸೀಳಿ ಬಂದು ಡ್ರೈವರ್ ಸೀಟ್ ಕುಶನ್ ಒಳಗೆ ನುಗ್ಗಿದೆ. ನಂತರ ಕಾರಿನ ಹಿಂಬದಿ ಸೀಟ್​ನ ಎಡಭಾಗದ ಡೋರ್​ಗೆ ತಾಗಿದೆ. ಈ ವೇಳೆ ಡ್ರೈವರ್ ಬೆನ್ನಿಗೆ ಹಾಗೂ ರಿಕ್ಕಿ ರೈ ಮೂಗು ಹಾಗೂ ಕೈಗೆ ಗಾಯವಾಗಿದೆ.

ಬಾಕ್ಸ್‌----------

ರಿಕ್ಕಿ ರೈ ಮೇಲೆ ದಾಳಿಗೆ ಆಸ್ತಿ ವಿವಾದ ಕಾರಣವೇ?

ರಾಮನಗರ: ರಿಕ್ಕಿ ರೈ ಅವರ ಮೇಲೆ ಮಾರಣಾಂತಿಕ ದಾಳಿ ನಡೆಯಲು ಆಸ್ತಿ ವಿವಾದವೇ ಕಾರಣ ಎಂಬ ಮಾತುಗಳು ಇದೀಗ ಕೇಳಿಬರುತ್ತಿವೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರಿಕ್ಕಿ ರೈ ವಿರುದ್ಧ ಕೆಲವರು ದ್ವೇಷ ಸಾಧಿಸುತ್ತಿದ್ದರು ಎಂಬುದು ಅವರ ಪರ ವಕೀಲ ನಾರಾಯಣಸ್ವಾಮಿ ಹೇಳಿಕೆಯಿಂದ ದೃಢಪಟ್ಟಿದೆ.

ರಿಕ್ಕಿ ರೈ ಮೇಲಿನ ಮಾರಣಾಂತಿಕ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವಕೀಲ ನಾರಾಯಣಸ್ವಾಮಿ, ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೆಲವು ಪ್ರಕರಣಗಳು ಇದ್ದವು. ಅದೇ ರೀತಿ ಅನ್ಯ ಪ್ರಕರಣಗಳ ವಿಚಾರಣೆಯೂ ನಡೆಯುತ್ತಿದ್ದು, ಇಂತದ್ದೇ ಕಾರಣಕ್ಕೆ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬುದುನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ರಿಕ್ಕಿ ರೈ ಮೇಲಿನ ಪ್ರಕರಣಗಳನ್ನು ನಾನು ನೋಡಿಕೊಳ್ಳುತ್ತಿದ್ದೇನೆ. ಆದರೆ, ಇಂತದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಹೇಳುವುದು ಕಷ್ಟ ಎಂದು ವಕೀಲ ನಾರಾಯಣಸ್ವಾಮಿ ತಿಳಿಸಿದರು.