ಆಧುನಿಕ ಕೃಷಿ ಜೊತೆಗೆ ನೀರಿನ ನಿರ್ವಹಣೆ ಬಹಳ ಮುಖ್ಯ

| Published : Dec 04 2024, 12:33 AM IST

ಸಾರಾಂಶ

ರೈತರು ಸಾವಯವ ಕೃಷಿ ಜೊತೆಗೆ ಆಧುನೀಕರಣದ ನೀರಾವರಿ ಮತ್ತು ಸಮರ್ಥ ನೀರಿನ ನಿರ್ವಹಣೆಯಲ್ಲಿ ಪ್ರಗತಿ ಸಾಧಿಸುವುದು ಬಹಳ ಮುಖ್ಯ ಎಂದು ನೈಸರ್ಗಿಕ ಕೃಷಿಕ ಸೋಬ್ಯಾನಾಯ್ಕ್ ಹೇಳಿದರು.

ಕನ್ನಡಪ್ರಭ ವಾರ್ತೆ ತರೀಕೆರೆ

ರೈತರು ಸಾವಯವ ಕೃಷಿ ಜೊತೆಗೆ ಆಧುನೀಕರಣದ ನೀರಾವರಿ ಮತ್ತು ಸಮರ್ಥ ನೀರಿನ ನಿರ್ವಹಣೆಯಲ್ಲಿ ಪ್ರಗತಿ ಸಾಧಿಸುವುದು ಬಹಳ ಮುಖ್ಯ ಎಂದು ನೈಸರ್ಗಿಕ ಕೃಷಿಕ ಸೋಬ್ಯಾನಾಯ್ಕ್ ಹೇಳಿದರು.

ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಎಂಸಿ ಹಳ್ಳಿ ವಲಯದ ತಮ್ಮ ಗೋಪಾಲ ಗ್ರಾಮದ ಸಿದ್ಲಿಪುರದಲ್ಲಿ ನಡೆದ ಕೃಷಿ ನೀರಾವರಿ ಮತ್ತು ಸಾವಯವ ಕೃಷಿಯ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ನೀರಿನ ಮಿತಿ ಮೀರಿದ ಬಳಕೆ ಕೃಷಿಯಲ್ಲಿ ಹೆಚ್ಚಿದೆ. ಹನಿ ನೀರಾವರಿ, ತುಂತುರು ನೀರಾವರಿ ಬಗ್ಗೆ ನಾವು ಹೆಚ್ಚು ಗಮನ ಕೊಡುವುದರ ಜೊತೆಗೆ ಸಾವಯವ ಕೃಷಿ ಕೈ ಬಿಟ್ಟು, ಇಂದು ನಾವು ರಾಸಾಯನಿಕ ಕೃಷಿ ಕಡೆಗೆ ಸಾಗುತಿದ್ದು, ತಿನ್ನುವ ಪ್ರತಿಯೊಂದು ಆಹಾರ, ನೀರು ಕಲುಷಿತಗೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ಬದಲಾದ ಕೃಷಿಯಲ್ಲಿ ಸಾವಯವ ಕೃಷಿಯು ಗಮನಾರ್ಹ ಏರಿಕೆಯನ್ನು ಕಂಡಿದೆ. ಇದು ದೇಶದಲ್ಲಿ ಸುಸ್ಥಿರ ಕೃಷಿ ಪದ್ಧತಿಗೆ ಉದಾಹರಣೆಯಾಗಿದೆ ಎಂದು ಹೇಳಿದರು.ಆಹಾರ ಸುರಕ್ಷತೆ, ಪರಿಸರದ ಪ್ರಭಾವ ಮತ್ತು ಮಾನವನ ಆರೋಗ್ಯದ ಬಗ್ಗೆ ಕಾಳಜಿಯು ಬೆಳೆದಂತೆ, ಸಾವಯವ ಕೃಷಿಯು ಸಾಂಪ್ರದಾಯಿಕ ವಿಧಾನಗಳಿಗೆ ಬಲವಾದ ಪರ್ಯಾಯವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಮತ್ತು ಜಾಗತಿಕವಾಗಿ ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯು ಲಾಭದಾಯಕ ಮಾರುಕಟ್ಟೆ ಅವಕಾಶವನ್ನು ಒದಗಿಸುತ್ತಿದೆ. ಸಾವಯವ ಕೃಷಿಗೆ ಪರಿವರ್ತನೆ ಮಾಡುವ ಮೂಲಕ, ಜೊತೆಗೆ ಸಿರಿಧಾನ್ಯಗಳ ಬಳಕೆ ಮಾಡಬೇಕು. ಕೃಷಿಗೆ ಪೂರಕವಾಗಿ ಜೀವಾಮೃತ ತಯಾರಿ, ಘನ ಜೀವಾಮೃತ ತಯಾರಿ, ಅಡಿಕೆ ಅಂತರ್ ಬೆಳೆಯಾಗಿ ಕಾಳುಮೆಣಸು, ಅವರೇ, ನುಗ್ಗೆ, ಏಲಕ್ಕಿ ಕೃಷಿ ಬಗ್ಗೆ ಮಾಹಿತಿ ನೀಡಿದರು.ಸಾವಯವ ಭತ್ತ ಬೆಳೆಗಾರರಾದ ಚಂದ್ರನಾಯ್ಕ್ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ತಮ್ಮ ಸಾವಯವ ಭತ್ತ ಕೃಷಿ, ನೀರಿನ ಸಮರ್ಪಕ ಬಳಕೆ ಬಗ್ಗೆ ಮಾಹಿತಿ ನೀಡಿದರು.ತಾಲೂಕಿನ ಕೃಷಿ ಮೇಲ್ವಿಚಾರಕ ಸಂತೋಷ್ ಪ್ರಾಸ್ತಾವಿಕವಾಗಿ ಮಾತನಾಡಿ, ಯೋಜನೆ ಕಾರ್ಯಕ್ರಮ ಮತ್ತು ಕೃಷಿ ಅನುದಾನ ಕಾರ್ಯಕ್ರಮ ಬಗ್ಗೆ ಮಾಹಿತಿ ನೀಡಿದರು. ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗಪ್ಪ, ಒಕ್ಕೂಟ ಅಧ್ಯಕ್ಷ ರವಿಕುಮಾರ್, ಸಿ.ವಿ. ಕುಮಾರ್, ಒಕ್ಕೂಟ ಉಪಾಧ್ಯಕ್ಷೆ ಸುಮಿತ್ರ, ಕೃಷಿ ಸಖಿ ಶಶಿಕಲಾ, ರೈತ ಲಕ್ಷ್ಮಣ್ ಉಪಸ್ಥಿತರಿದ್ದರು. ಸೇವಾಪ್ರತಿನಿಧಿ ರಂಗನಾಥ್, ಗೀತಾ ವಂದಿಸಿದರು.