ಬೇಡಿಕೆ ಈಡೇರಿಸದಿದ್ದರೆ ನೀರು ಸರಬರಾಜು, ಬೀದಿದೀಪ ನಿರ್ವಹಣೆ ಸ್ಥಗಿತ: ಎಚ್ಚರಿಕೆ

| Published : May 29 2025, 01:45 AM IST

ಬೇಡಿಕೆ ಈಡೇರಿಸದಿದ್ದರೆ ನೀರು ಸರಬರಾಜು, ಬೀದಿದೀಪ ನಿರ್ವಹಣೆ ಸ್ಥಗಿತ: ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ನರಗುಂದ ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ 2ನೇ ದಿನದ ಮುಷ್ಕರದಲ್ಲಿ ಬುಧವಾರ ಹಲವು ಪದಾಧಿಕಾರಿಗಳು ಭಾಗವಹಿಸಿದ್ದರು. ಶಾಸಕ ಸಿ.ಸಿ. ಪಾಟೀಲ್ ಬೆಂಬಲ ಸೂಚಿಸಿದರು.

ನರಗುಂದ: ಪೌರ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಸರ್ಕಾರ ಈಡೇರಿಸುತ್ತಿಲ್ಲ. ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ನೀರು ಸರಬರಾಜು ಮತ್ತು ಬೀದಿದೀಪ ನಿರ್ವಹಣೆ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಪೌರ ನೌಕರರ ಸಂಘದ ತಾಲೂಕ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಪಟ್ಟಣದ ಪುರಸಭೆ ಆವರಣದಲ್ಲಿ ಪೌರ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ 2ನೇ ದಿನದ ಮುಷ್ಕರದಲ್ಲಿ ಬುಧವಾರ ಪದಾಧಿಕಾರಿಗಳು ಮಾತನಾಡಿದರು. ರಾಜ್ಯದಲ್ಲಿರುವ ಎಲ್ಲ ಮಹಾನಗರ ಪಾಲಿಕೆ, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಪೌರ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸುವುದು, ಕೆಜಿಐಡಿ, ಜಿಪಿಎಫ್, ಜ್ಯೋತಿ ಸಂಜೀವಿನಿ ಸೇರಿದಂತೆ ಸರ್ಕಾರಿ ನೌಕರರಿಗೆ ಸಿಗುವ ಎಲ್ಲ ಸೌಲಭ್ಯವನ್ನು ಸರ್ಕಾರ ಪೌರ ನೌಕರರಿಗೂ ಜಾರಿ ಮಾಡಬೇಕು. 25-30 ವರ್ಷಗಳಿಂದ ಗುತ್ತಿಗೆ, ಹೊರಗುತ್ತಿಗೆ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನದಡಿ ಕಾರ್ಯನಿರ್ವಹಿಸುತ್ತಿರುವ ನೀರು ಸರಬರಾಜು ಸಿಬ್ಬಂದಿ, ಲೋಡರ್ಸ್, ಡ್ರೈವರ್ಸ್, ಕ್ಲೀನರ್ಸ್, ಪೌರಕಾರ್ಮಿಕರು, ಸೂಪರ್‌ವೈಸರ್, ಕಂಪ್ಯೂಟರ್‌ ಆಪರೇಟರ್, ಜ್ಯೂನಿಯರ್ ಪ್ರೋಗ್ರಾಮರ್, ಇತರ ಸಿಬ್ಬಂದಿಗೆ ನೇರಪಾವತಿ ವೇತನ ಮಾಡಬೇಕು ಹಾಗೂ ಕಾಯಂ ಮಾಡಬೇಕು. 2022-23ನೇ ಸಾಲಿನಲ್ಲಿ ವಿಶೇಷ ನೇಮಕಾತಿಯಡಿ ನೇಮಕವಾದ ಪೌರಕಾರ್ಮಿಕರಿಗೆ ಎಸ್‌ಎಫ್‌ಸಿ ವೇತನ ಅನುದಾನದಡಿ ವೇತನ ಪಾವತಿಸುವುದು ಹೀಗೆ ಒಟ್ಟು 20 ಬೇಡಿಕೆಗಳನ್ನು ಈಡೇರಿಸುವ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈಗಾಗಲೇ 45 ದಿನಗಳಿಂದ ವಿವಿಧ ರೀತಿಯಲ್ಲಿ ಮುಷ್ಕರ ಕೈಗೊಳ್ಳಲಾಗಿದೆ.

ಆದರೆ ಇದುವರೆಗೂ ಪೌರ ನೌಕರರ ಬೇಡಿಕೆಗಳು ಈಡೇರದೇ ಇರುವುದರಿಂದ ರಾಜ್ಯಾಧ್ಯಕ್ಷರ ನಿರ್ದೇಶನದ ಮೇರೆಗೆ ಮೇ 27ರಿಂದ ಪೌರ ನೌಕರರು ಗೈರುಹಾಜರಾಗಿ ಕಸ ಸಂಗ್ರಹ, ವಿಲೇವಾರಿ, ಸ್ವಚ್ಛತೆ, ಒಳಚರಂಡಿ ನಿರ್ವಹಣೆ ಮತ್ತು ಕಚೇರಿ ಕೆಲಸಗಳನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮುಷ್ಕರಕ್ಕೆ ಬೆಂಬಲ: ಪೌರ ಕಾರ್ಮಿಕರ ಮುಷ್ಕರಕ್ಕೆ ಶಾಸಕ ಸಿ.ಸಿ. ಪಾಟೀಲ, ಪುರಸಭೆ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿಯವರು ಪೌರ ಕಾರ್ಮಿಕರ ವಿವಿಧ ಬೇಡಿಕೆಯ ಮನವಿ ಸ್ವೀಕರಿಸಿದರು.

ತಾಲೂಕು ಪೌರ ಕಾರ್ಮಿಕರ ಪದಾಧಿಕಾರಿಗಳಾದ ಬಿ.ಎನ್. ಚಲವಾದಿ, ವಿ.ಎನ್. ಚವಣ್ಣವರ, ಆರ್.ಎಸ್. ಕೆರೂರ, ಎಸ್.ಬಿ. ದುರವಣ್ಣವರ, ವಿ.ಎಸ್. ನಾಯ್ಕರ, ಆರ್.ಎಸ್. ಈಟಿ, ಎಂ.ಬಿ. ಹಡಗಲಿ, ಎಂ.ಪಿ. ನೀಲಗುಂದ, ಎಸ್.ಪಿ. ಆಯಿಟ್ಟಿ, ಆರ್.ಎನ್. ಚಲವಣ್ಣವರ ಉಪಸ್ಥಿತರಿದ್ದರು.