ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನ ದಿನದಂದು ನಾದಬ್ರಹ್ಮನ ನೆಪದಲ್ಲಿ ನಾಲ್ವಡಿಯವರನ್ನು ಸ್ಮರಿಸುತ್ತಿದ್ದೇವೆ. ನಾಲ್ವಡಿಯವರು ಮಹಾರಾಜರು. ಹಂಸಲೇಖ ಒಂದು ಕಾಲದ ರಾಜರೇ. ಅವರ ಹಂಸಲೇಖ ಆಗುವ ಮುನ್ನ ಗಂಗರಾಜ. ಇದು ಚರಿತ್ರೆಯೂ ಹೊಸ ಕಾಲದಲ್ಲಿ ಮರಕಳುಹಿಸುತ್ತದೆ ಎಂಬುದಕ್ಕೆ ಉದಾಹರಣೆಯಂತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಾದಬ್ರಹ್ಮ ಹಂಸಲೇಖ ಅವರ ಗೀತ-ಸಂಗೀತಗಳು ಜನರ ಮನದಲ್ಲಿ ಮನೆಮಾಡಿದೆ. 76ನೇ ಹೊಸ್ತಿಲಲ್ಲಿರುವ ಹಂಸಲೇಖ ಅವರು ಹಾಡುಗಳನ್ನು ಕೇಳುವವರು ತಮ್ಮ ವಯಸ್ಸನ್ನು ಮರೆಯುತ್ತಾರೆ. ಹಂಸಲೇಖರ ಕ್ಲಾಸಿಕ್ ಹಾಡುಗಳನ್ನು ಆಲಿಸುವಾಗ ಭಾವದಲ್ಲಿ ತಲ್ಲೀನರಾಗುತ್ತೇವೆ ಎಂದು ಹಿರಿಯ ಪತ್ರಕರ್ತ ಕೆ.ನರಸಿಂಹಮೂರ್ತಿ ಹೇಳಿದರು.ದಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ನಾಲ್ವಡಿ ನಾಡಿನಲ್ಲಿ ನಾದಬ್ರಹ್ಮ ಹಂಸಲೇಖ ಅವರ ಸಿನಿಮಾ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆದು, ನಾಲ್ವಡಿ ಕೃಷ್ಣರಾಜ ಒಡೆಯರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನ ದಿನದಂದು ನಾದಬ್ರಹ್ಮನ ನೆಪದಲ್ಲಿ ನಾಲ್ವಡಿಯವರನ್ನು ಸ್ಮರಿಸುತ್ತಿದ್ದೇವೆ. ನಾಲ್ವಡಿಯವರು ಮಹಾರಾಜರು. ಹಂಸಲೇಖ ಒಂದು ಕಾಲದ ರಾಜರೇ. ಅವರ ಹಂಸಲೇಖ ಆಗುವ ಮುನ್ನ ಗಂಗರಾಜ. ಇದು ಚರಿತ್ರೆಯೂ ಹೊಸ ಕಾಲದಲ್ಲಿ ಮರಕಳುಹಿಸುತ್ತದೆ ಎಂಬುದಕ್ಕೆ ಉದಾಹರಣೆಯಂತಿದೆ ಎಂದರು.1980ರ ದಶಕದಲ್ಲಿ ಪ್ರೇಮದ ಅಭಿವ್ಯಕ್ತಿಗೆ ಹೊಸ ಆಯಾಮ ತೊರಕಿಸಿಕೊಟ್ಟ ಸಿನಿಮಾ ಪ್ರೇಮಲೋಕ. ರವಿಚಂದ್ರನ್ ಮತ್ತು ಹಂಸಲೇಖ ಅವರು ಭಾರತೀಯ ಸಿನಿಮಾಕ್ಕೆ ಕನ್ನಡ ಚಿತ್ರರಂಗದ ಹಿರಿಮೆಯನ್ನು ಪರಿಚಯಿಸಿದ ಸಿನಿಮಾ ಪ್ರೇಮಲೋಕ. ಹಂಸಲೇಖ ಅವರ ಪ್ರೇಮಲೋಕದಿಂದ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡಿನವರೆಗೆ ಕ್ಲಾಸಿಕ್ ಹಾಡುಗಳು ಕನ್ನಡಿಗರ ಮನಗೆದ್ದಿವೆ. ಹಾಗೆಯೇ ಹಂಸಲೇಖ ಅವರು ಕೆಲವು ಗೀತೆಗಳಿಗೆ ವಿಮರ್ಶೆ ಎದುರಿಸಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರ್. ರವಿ ಕುಮಾರನಪುರ, ಸಮಾಜಮುಖಿ ಚಿಂತನೆಯ ಸಾಹಿತಿಗೆ ಯಾವುದೇ ಜಾತಿ ಧರ್ಮಗಳಿಲ್ಲ. ಅವರು ಕಾಲ ದೇಶವನ್ನು ಮೀರಿದವರು. ಬಾಬಾ ಸಾಹೇಬರು ಹಿಡಿದ ಪೆನ್ನು ದೇಶಕ್ಕೆ ಊರುಗೋಲಾಯಿತು. ಸಾಹಿತಿಗಳ ಪೆನ್ನು ಮನಸ್ಸು ಕಟ್ಟಬೇಕಿತ್ತು. ಹೊಡೆಯುತ್ತಿದೆ. ಕಟ್ಟುವ ಪ್ರಕ್ರಿಯೆಯಲ್ಲಿ ಹಂಸಲೇಖರ ಸಾಹಿತ್ಯ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ ಅಧ್ಯಕ್ಷತೆ ವಹಿಸಿದ್ದರು. ಹಂಸಲೇಖ ಸಾಹಿತ್ಯದಲ್ಲಿ ಪ್ರಕೃತಿ-ಪರಿಸರ ಪ್ರೇಮ ವಿಷಯವನ್ನು ಹಾಸನ ಆಕಾಶವಾಣಿ ನಿವೃತ್ತ ಮುಖ್ಯಸ್ಥ ಎಂ. ಶಿವಕುಮಾರ್, ಹಂಸಲೇಖ ಸಾಹಿತ್ಯದಲ್ಲಿ ದೇಸಿಯತೆ ಕುರಿತು ಡಾ. ಕೃಷ್ಣಮೂರ್ತಿ ಚಮರಂ, ಹಂಸಲೇಖರ ಸಂಗೀತ ಮತ್ತು ಒಡನಾಟ ಕುರಿತು ಆರ್. ಮಹೇಂದರ್, ಹಂಸಲೇಖರು ಬೆಳೆದುಬಂದ ಹಾದಿ ಕುರಿತು ಗಾನಾಸುಮಾ ಪಟ್ಟಸೋಮನಹಳ್ಳಿ ಮಾತಾಡಿದರು.
ಸಂವಾದದಲ್ಲಿ ಸಾಹಿತಿ ಸ್ವಾಮಿ ಪೊನ್ನಾಚಿ, ಬರಹಗಾರ ರಾಘವೇಂದ್ರ ಅಪುರಾ, ಕವಿ ಮಹೇಶ್ ಇರಸವಾಡಿ, ಲಯನ್ಸ್ ಕ್ಲಬ್ ಆಫ್ ಮೈಸೂರು ಪರಿವರ್ತನ ಖಜಾಂಚಿ ಸವಿತಾ ಎಸ್. ಗೌಡ, ಕರವೇ ರಾಜ್ಯ ಯುವ ಘಟಕದ ಅಧ್ಯಕ್ಷ ಸಂಜಯ್ ಲೋಹಿತಾಶ್ವ ಭಾಗವಹಿಸಿದ್ದರು. ಸತೀಶ್ ಹೆಗ್ಗೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಯತ್ರಿ ನಂದಾದೀಪ ನಿರೂಪಿಸಿದರು.