ಸಾರಾಂಶ
ನಮ್ಮ ದಿನನಿತ್ಯದ ಕೆಲಸ ಕಾರ್ಯವನ್ನು ಮಾಡುತ್ತ ,ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಅರಿವಿರಬೇಕು. ದಿನನಿತ್ಯ ಮನೆಯಿಂದ ಹೊರಟರೆ ಮೋಟಾರ್ ಸೈಕಲ್ ಹತ್ತುವ ನಾವು ನಡಿಗೆಯನ್ನು ಮರಿತಿದ್ದೇವೆ, ಚಟುವಟಿಕೆ ಯಿಂದ ಇದ್ದರೆ ನಮ್ಮ ಹೃದಯ ಹಾಳಾಗುವದಿಲ್ಲ ಎಂದು ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ.ಪ್ರಕಾಶ್ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಾಳಕೊಪ್ಪ
ನಮ್ಮ ದಿನನಿತ್ಯದ ಕೆಲಸ ಕಾರ್ಯವನ್ನು ಮಾಡುತ್ತ ,ನಾವು ಸೇವಿಸುವ ಆಹಾರದ ಬಗ್ಗೆ ನಮಗೆ ಅರಿವಿರಬೇಕು. ದಿನನಿತ್ಯ ಮನೆಯಿಂದ ಹೊರಟರೆ ಮೋಟಾರ್ ಸೈಕಲ್ ಹತ್ತುವ ನಾವು ನಡಿಗೆಯನ್ನು ಮರಿತಿದ್ದೇವೆ, ಚಟುವಟಿಕೆ ಯಿಂದ ಇದ್ದರೆ ನಮ್ಮ ಹೃದಯ ಹಾಳಾಗುವದಿಲ್ಲ ಎಂದು ಬೆಂಗಳೂರಿನ ಖ್ಯಾತ ಹೃದಯ ತಜ್ಞ ಡಾ.ಪ್ರಕಾಶ್ ಹೇಳಿದರು.ಪಟ್ಟಣದ ಹಿಂದೂ ಮಹಾಗಣಪತಿ ಸಮಿತಿಯಿಂದ ಶನಿವಾರ ಗಣಪತಿ ದೇವಸ್ಥಾನದ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಯುವಕರು ತಮ್ಮ ಹೃದಯದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಎಂದರೆ ಸೈಕಲ್ ಹೊಡೆಯುವ ವಾಕಿಂಗ್ ಮಾಡುವ ಹವ್ಯಾಸ ಬೆಳಸಿಕೊಳ್ಳಿ ಎಂದರು.
ಇಂದಿನ ಯಾಂತ್ರಿಕ ಯುಗದಲ್ಲಿ ಯುವಕರಾದಿಯಾಗಿ ಎಲ್ಲರೂ ಯಾವುದೇ ಕೆಲಸಕ್ಕೆ ಹೊರಟರೆ ತಕ್ಷಣ ಬೈಕ್ ಹತ್ತುವುದು, ಕಾರು ಹತ್ತುವುದನ್ನು ನೋಡುತ್ತೇವೆ, ಅವಶ್ಯಕತೆ ಇದ್ದಾಗ ಮಾತ್ರ ವಾಹನ ಉಪಯೋಗ ಮಾಡಿಕೊಳ್ಳಬೇಕು, ಅದನ್ನು ಬಿಟ್ಟು ಸೌಕರ್ಯ ಹೆಚ್ಚಾದಂತೆ ಮನುಷ್ಯನ ಆರೋಗ್ಯ ಹಾಳಾಗುತ್ತಿದೆ. ವಿಶೇಷವಾಗಿ ಆರೋಗ್ಯದ ಕಡೆ ಗಮನ ಕೊಟ್ಟು, ೪೦ ವರ್ಷ ಮೇಲ್ಪಟ್ಟವರು ಪ್ರತಿ ಮೂರು ತಿಂಗಳಿಗೆ ಬಿಪಿ , ಶುಗರ್ ಪರೀಕ್ಷೆ ಮಾಡಿಸಿಕೊಳ್ಳಿ, ಸಕ್ಕರೆ ಕಾಯಿಲೆ ಅಪಾಯಕಾರಿ ಎಂದು ಎಚ್ಚರಿಸಿದರು.ಪ್ರಾರಂಭದಲ್ಲಿ ಮಾಜಿ ಪುರಸಭೆ ಆಧ್ಯಕ್ಷ ಐ.ಎಂ. ಶಿವಾನಂದ ಸ್ವಾಮಿ ಮಾತನಾಡಿ, ಡಾ. ಪ್ರಕಾಶ ಅವರು ಶಿರಾಳಕೊಪ್ಪದ ಮೊಮ್ಮಗನಾಗಿದ್ದು, ಅವರು ಇಂದು ತಮ್ಮ ಒತ್ತಡದ ಕಾರ್ಯದ ಮಧ್ಯದಲ್ಲಿ ಇಲ್ಲಿಗೆ ಬಂದು ಹೃದಯ ತಪಾಸಣೆ ಸೇರಿದಂತೆ ಆರೋಗ್ಯದ ಮಹತ್ವವನ್ನು ತಿಳಿಸಿದ್ದಾರೆ.
ಇಲ್ಲಿನ ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಕಳೆದ ೨-೩ ದಿನಗಳ ಹಿಂದೆ ರಕ್ತದಾನ ಶಿಬಿರ ಮಾಡಿ ಈಗ ಆರೋಗ್ಯ ಶಿಬಿರ ನಡೆಸುತ್ತಿದೆ. ಇಂತಹ ಉತ್ತಮ ಕೆಲಸ ಮಾಡುತ್ತಾ ಗಣೇಶನ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿರುವ ಸಮಿತಿಯ ಕಾರ್ಯ ಷ್ಲಾಘನೀಯ ಎಂದರು.ವೇದಿಕೆ ಮೇಲೆ ಸಮಿತಿಯ ಅಧ್ಯಕ್ಷ ಸುಶಿಲಕುಮಾರ್, ಮಂಚಿ ಶಿವಣ್ಣ, ಬಿಜೆಪಿ ಅಧ್ಯಕ್ಷ ಚೆನ್ನನ ವೀರಶೆಟ್ಟಿ, ಮಾಜಿ ಪುರಸಭೆ ಅಧ್ಯಕ್ಷ ಟಿ.ರಾಜು, ಪುರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಮಹಬಲೇಶ್, ಪ್ರವೀಣ, ನೂತನ್ ಸೇರಿದಂತೆ ಹಲವರು ಹಾಜರಿದ್ದರು.
ಪ್ರಾರಂಭದಲ್ಲಿ ನವೀನ್ ಕುಮಾರ್ ಸಮಿತಿಯ ಕಾರ್ಯದ ಬಗ್ಗೆ ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು.