ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಬಳ್ಳಾರಿ ಜಿಲ್ಲೆಯು ವೈಜ್ಞಾನಿಕವಾಗಿ ವಿಭಜನೆ ಆಗಿದ್ದರೆ ಇಷ್ಟೋತ್ತಿಗೆ ಸಾಕಷ್ಟು ಅಭಿವೃದ್ಧಿ ಕಾಣುತ್ತಿತ್ತು ಎಂದು ಹಿರಿಯ ಲೇಖಕ ಮೃತ್ಯುಂಜಯ ರುಮಾಲೆ ಹೇಳಿದರು.ಇಲ್ಲಿಯ ರಾಘವ ಕಲಾಮಂದಿರದಲ್ಲಿ ಗುರುವಾರ ನಡೆದ ಅಖಂಡ ಬಳ್ಳಾರಿ ವಿಶೇಷ ಸಂಚಿಕೆ ಲೋಕಾರ್ಪಣೆ ಸಮಾರಂಭದಲ್ಲಿ ಬಳ್ಳಾರಿ ಕುರಿತು ಮಾತನಾಡಿದರು.
ಬಳ್ಳಾರಿ ಜಿಲ್ಲೆಯನ್ನು ಒಟ್ಟಾರೆ ಅವೈಜ್ಞಾನಿಕವಾಗಿ ರಚನೆ ಮಾಡಿದ್ದು, ಆರಂಭದಲ್ಲಿ 20 ತಾಲೂಕುಗಳಾಗಿದ್ದವು. ಈ ಪೈಕಿ ಬಹುತೇಕ ಆಂಧ್ರಪ್ರದೇಶದಲ್ಲಿದ್ದವು. ಸ್ವಾತಂತ್ರ್ಯ ನಂತರ ಆಧುನಿಕ ಬಳ್ಳಾರಿ ರಚನೆಗೆ ಇಲ್ಲಿಯ ಸಾಕಷ್ಟು ಮಹನೀಯರು ಶ್ರಮಿಸಿದ್ದಾರೆ. ಬಳ್ಳಾರಿ ಜಿಲ್ಲೆಯು ವಿಭಜನೆ ವೇಳೆ ಹೈದರಾಬಾದ್ ನಿಜಾಮರ, ಮುಂಬೈ ಕರ್ನಾಟಕ, ಮೈಸೂರು ಕರ್ನಾಟಕಕ್ಕೆ ಸಿಕ್ಕಿ ನಲುಗಿದೆ. ಇಲ್ಲಿ ಮನೆಯಲ್ಲಿ ಕನ್ನಡ, ಕಚೇರಿಯಲ್ಲಿ ತಮಿಳು ಹಾಗೂ ಶಾಲೆಯಲ್ಲಿ ತೆಲಗು ಮಾತನಾಡುವ ಸ್ಥಿತಿ ಇತ್ತು. ಇಲ್ಲಿಯ ಮಣ್ಣಿನ ಭಾಷೆ, ನೆಲದ ಭಾಷೆ ಕನ್ನಡ ಆಗಲು ಸ್ವಾತಂತ್ರ್ಯ ಪೂರ್ವದಿಂದ ಸಾಕಷ್ಟು ಮಹನೀಯರು ಶ್ರಮಿಸಿದ್ದು, ಇಂದು ಬಳ್ಳಾರಿ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳಲು ಅವರೇ ಕಾರಣ ಎಂದರು.ಕರ್ನಾಟಕದ ಇತಿಹಾಸದಲ್ಲೇ ಚುನಾವಣೆ ಮೂಲಕ ಕನ್ನಡನಾಡು ಸೇರಿಕೊಂಡ ಏಕೈಕ ಪ್ರದೇಶ ಬಳ್ಳಾರಿ. ಭಾಷಾವಾರು ಪ್ರಾಂತ್ಯಗಳ ವಿಂಗಡಣೆ ನಂತರ ಬಳ್ಳಾರಿ ಕರ್ನಾಟಕ ಸೇರಬೇಕೆ? ಆಂಧ್ರದ ಪಾಲಾಗಬೇಕೆ? ಎಂಬ ವಿಷಯ ದೊಡ್ಡಮಟ್ಟದ ಸಮಸ್ಯೆಗೆ ಎಡೆಮಾಡಿಕೊಟ್ಟಿತ್ತು. ಇಂತಹ ಕಾಲಘಟ್ಟದಲ್ಲಿ ಇಲ್ಲಿನ ಜನ ಭಾಷೆಯ ಗೋಜಲು ಬಿಟ್ಟು ನಾವು ಕನ್ನಡಿಗರು ಕರ್ನಾಟಕದಲ್ಲೇ ಇರುತ್ತೇವೆ ಎಂದು ತೀರ್ಮಾನಿಸಿದ್ದು ಐತಿಹಾಸಿಕ ಘಟನೆ.
ಸಂಸತ್ ನಡೆದ ಚುನಾವಣೆಯ ವೇಳೆ ಇಲ್ಲಿನ ಹೋರಾಟಗಾರರ ಒಕ್ಕೂಟ ಬಳ್ಳಾರಿ ಆಂಧ್ರ ಸೇರಬೇಕೆ, ಕರ್ನಾಟಕದಲ್ಲೇ ಇರಬೇಕೆ ಎಂಬ ವಿಷಯವನ್ನೂ 1953ರ ಚುನಾವಣೆಯ ವಿಷಯವಾಗಿರಿಸಿದ್ದರು. ಕರ್ನಾಟಕದ ಪರ ನಿಂತ ಅಭ್ಯರ್ಥಿ ಹರಗಿನಡೋಣಿ ಸಣ್ಣ ಬಸವನಗೌಡರು ದೇಶದ ಮೊದಲ ಭಾಷಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಬಳ್ಳಾರಿ ಕರ್ನಾಟಕದ ಭಾಗವಾಯಿತು ಎಂದರು.ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸ್ವಾತಂತ್ರ್ಯ ಸಂದರ್ಭದಲ್ಲಿ ಸ್ವತಂತ್ರ್ಯ ಅಭ್ಯರ್ಥಿಯಾಗಿ ಬಳ್ಳಾರಿ ಅಭ್ಯರ್ಥಿ ಗೆದ್ದಿದ್ದು ಸಹ ಇತಿಹಾಸ. ಬಸವಣ್ಣನವರ ವಚನಗಳು ಮೊದಲು ಪ್ರಕಟಣೆ ಆಗಿರುವುದು ಬಳ್ಳಾರಿಯಲ್ಲಿ. ಇಲ್ಲಿಯ ಪ್ರಕಟಣೆ ಪ್ರೇರಣೆಯಿಂದ ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಸವ ಜಯಂತಿ ಆಚರಣೆ ಮಾಡಲಾಯಿತು. ಸಕ್ಕರೆ ಕರಡೀಶ 1860ರಲ್ಲಿ ದಕ್ಷಿಣ ಭಾರತದ ಮೊದಲ ಶ್ರೀ ಗುರು ನಿವಾಸ ಸಂಸ್ಕೃತ ಶಾಲೆ ಆರಂಭಿಸಿದರು. 1945ರಲ್ಲಿ ದೇಶದಲ್ಲಿಯೇ ಸ್ವಾತಂತ್ರ್ಯ ಪೂರ್ವದ ಖಾಸಗಿ ಶಾಲೆಯಾಗಿ ವೀರಶೈವ ಕಾಲೇಜು ಹಾಗೂ ಅದಕ್ಕೂ ಮುಂಚೆ 1916ರಲ್ಲಿ ವೀರಶೈವ ವಿದ್ಯಾವರ್ಧಕ ಉಚಿತ ವಿಶ್ರಾಂತಿ ನಿಲಯ ಸ್ಥಾಪಿಸಲಾಯಿತು. ಇನ್ನೂ ಬಳ್ಳಾರಿ ರಾಘವ ರಾಷ್ಟ್ರಮಟ್ಟದ ಕಲಾವಿದರು. ಹೀಗೆ ಬಳ್ಳಾರಿ ಹಾಗೂ ಇಲ್ಲಿಯ ಮಹನೀಯರು ಬಳ್ಳಾರಿ ದೇಶದ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಹಿರಿಯರು ಕಟ್ಟಿರುವ ಬಳ್ಳಾರಿ ಈಗ ತುಂಬ ಬೆಳೆದಿದೆ. ಆದರೆ, ನಾವು ಇತಿಹಾಸವನ್ನು ನೋಡಿ ಬೆಳೆಯಬೇಕಿದೆ ಎಂದರು.