ಸ್ವಾತಂತ್ರ್ಯ ದಿನದ ಮಹತ್ವ ಅರಿತು ಬದುಕಬೇಕು: ಉಪನ್ಯಾಸಕ ಗಂಗಾಧರ್

| Published : Aug 16 2024, 12:51 AM IST

ಸ್ವಾತಂತ್ರ್ಯ ದಿನದ ಮಹತ್ವ ಅರಿತು ಬದುಕಬೇಕು: ಉಪನ್ಯಾಸಕ ಗಂಗಾಧರ್
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರವಾಗಿದೆ. ದೇಶಕ್ಕೆ ಅನ್ನನೀಡುವ ರೈತ ಮತ್ತು ದುಡಿಯುವ ಶ್ರಮಿಕನ ಬದುಕು ಹಸನಾಗಬೇಕು. ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಗಿಸುವ ಜೊತೆಗೆ ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಬೇಕು.

ಕನ್ನಡಪ್ರಭ ವಾರ್ತೆ ನಾಗಮಂಗಲ

ದೇಶದ ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಹೋರಾಟಗಾರರು ಪ್ರಾಣಾರ್ಪಣೆ ಮಾಡಿದವರನ್ನು ನೆನೆಯುವ ಈ ದಿನದ ಮಹತ್ವವನ್ನು ಪ್ರತಿಯೊಬ್ಬರೂ ಅರಿತು ಬದುಕಬೇಕು ಎಂದು ಉಪನ್ಯಾಸಕ ಗಂಗಾಧರ್ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 78ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದ ಅವರು, ಮಹಾತ್ಮ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ ಮತ್ತು ಅನೇಕ ಮಹನೀಯರ ತ್ಯಾಗಬಲಿದಾನಗಳಿಂದ ಸಿಕ್ಕಿರುವ ಸ್ವಾತಂತ್ರ್ಯದಿಂದ ನಮ್ಮ ದೇಶದ ಸಂಸ್ಕೃತಿ ಹಾಗೂ ಪರಂಪರೆ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಪ್ರಭಾರ ತಹಸೀಲ್ದಾರ್ ಜಿ.ಎಂ.ಸೋಮಶೇಖರ್ ಮಾತನಾಡಿ, ಭಾರತ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರವಾಗಿದೆ. ದೇಶಕ್ಕೆ ಅನ್ನನೀಡುವ ರೈತ ಮತ್ತು ದುಡಿಯುವ ಶ್ರಮಿಕನ ಬದುಕು ಹಸನಾಗಬೇಕು. ಪ್ರತಿಯೊಬ್ಬರೂ ನೆಮ್ಮದಿಯ ಬದುಕು ಸಾಗಿಸುವ ಜೊತೆಗೆ ದೇಶವನ್ನು ಪ್ರಗತಿಯ ಪಥದತ್ತ ಕೊಂಡೊಯ್ಯಬೇಕು ಎಂದು ಸಂದೇಶ ನೀಡಿದರು.

ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಆರ್.ಸಹನಾ, ಎಂ.ಜೆ.ವಿದ್ಯಾ, ನಂದಿತಾ, ಡಿ.ಎಸ್.ದಕ್ಷತಾ ಅವರಿಗೆ ಶಿಕ್ಷಣ ಇಲಾಖೆಯಿಂದ ಉಚಿತವಾಗಿ ಲ್ಯಾಪ್ ಟಾಪ್ ವಿತರಣೆ ಮಾಡಿ ಪ್ರಸಕ್ತ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕೃಷಿಕ ರಾಮಕೃಷ್ಣೇಗೌಡ, ಸಮಾಜ ಸೇವಕಿ ಶೀಲಾ, ಪತ್ರಕರ್ತ ಯು.ವಿ.ಉಲ್ಲಾಸ್, ನೈರ್ಮಲ್ಯ ಕ್ಷೇತ್ರದ ಮುರುಗನ್, ತೋಟಗಾರಿಕೆ ಕ್ಷೇತ್ರದ ರಾಮು, ಆರೋಗ್ಯ ಕ್ಷೇತ್ರದ ಸಾಧಕಿ ಜೀನತ್ ಉನ್ನೀಸಾ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಲವು ಶಾಲಾ ವಿದ್ಯಾರ್ಥಿಗಳ ತಂಡ ಶಿಸ್ತಿನ ಪಥಸಂಚಲನ ನಡೆಸಿ ಧ್ವಜವಂದನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಎ.ಆರ್.ಸುಮಿತ್, ಸಿಪಿಐ ನಿರಂಜನ್, ಬಿಇಒ ಕೆ.ಯೋಗೇಶ್, ತಾಪಂ ಇಒ ಬಿ.ಎಸ್.ಸತೀಶ್, ಪುರಸಭೆ ಮುಖ್ಯಾಧಿಕಾರಿ ಸಿ.ಶ್ರೀನಿವಾಸ್, ಅರಣ್ಯಾಧಿಕಾರಿ ಮಂಜುನಾಥ್, ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್, ಸಿಡಿಪಿಒ ಕೃಷ್ಣಮೂರ್ತಿ, ಟಿಎಚ್‌ಒ ರಮೇಶ್, ಪುರಸಭೆ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.