ಜನ, ಜಾತಿ ಗಣತಿ ನಿರ್ಧಾರಕ್ಕೆ ಸ್ವಾಗತ

| Published : May 06 2025, 12:16 AM IST

ಸಾರಾಂಶ

ಶಿವಮೊಗ್ಗ: ಜನಗಣತಿ ಜೊತೆಗೆ ಜಾತಿ ಗಣತಿಗೂ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಹಾಗೂ ನಮ್ಮ ಸರ್ಕಾರದ ಯೋಜನೆಯನ್ನು ಕೇಂದ್ರ ಸರ್ಕಾರ ಕಾಪಿ ಮಾಡಿದ್ದಕ್ಕೆ ಧನ್ಯವಾದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಶಿವಮೊಗ್ಗ: ಜನಗಣತಿ ಜೊತೆಗೆ ಜಾತಿ ಗಣತಿಗೂ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಹಾಗೂ ನಮ್ಮ ಸರ್ಕಾರದ ಯೋಜನೆಯನ್ನು ಕೇಂದ್ರ ಸರ್ಕಾರ ಕಾಪಿ ಮಾಡಿದ್ದಕ್ಕೆ ಧನ್ಯವಾದ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದೇಶದಲ್ಲಿ ಜನಗಣತಿ ನಡೆಯಬೇಕಿದೆ. ಹಾಗೆಯೇ ಜಾತಿ ಗಣತಿಯೂ ಆಗಬೇಕಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ ಎಂದರು. ನಾವು ಒಳ್ಳೆಯ ನಿರ್ಧಾರವನ್ನು ಯಾವಾಗಲೂ ಸ್ವಾಗತಿಸುತ್ತೇವೆ. ಆ ಸರ್ಕಾರ, ಈ ಸರ್ಕಾರ ಅಂತ ನೋಡುವುದಿಲ್ಲ, ಆದರೆ ಬಿಜೆಪಿಯವರಿಗೆ ಇಂತಹ ಗುಣವೇ ಇಲ್ಲ, ಅವರಿಗೆ ತಮ್ಮದ್ದಲ್ಲದೂ ಯಾವತ್ತಿಗೂ ಕೆಟ್ಟದ್ದಾಗಿಯೇ ಕಾಣುತ್ತದೆ. ಅದರೆ ವಾಸ್ತವ ಹಾಗಿರುತ್ತಾ ? ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಾಗ ಹಾಗಾಯ್ತು, ಹೀಗಾಯ್ತು, ರಾಜ್ಯ ದಿವಾಳಿ ಆಯ್ತು ಅಂದ್ರು, ಕೊನೆಗೆ ದೇಶದ ವಿವಿಧ ರಾಜ್ಯಗಳಲ್ಲಿ ಚುನಾವಣೆ ಬಂದಾಗ ರಾಜ್ಯದ ಗ್ಯಾರಂಟಿ ಯೋಜನೆಗಳನ್ನೇ ಕಾಪಿ ಮಾಡಿದರು. ಜಾತಿ ಗಣತಿ ವಿಚಾರದಲ್ಲೂ ಹಾಗೆಯೇ ಆಗಿದೆ ಎಂದು ಕುಟುಕಿದರು.ಮೊದಲು ಬಿಜೆಪಿ ಜಾತಿ ಗಣತಿಗೆ ವಿರುದ್ಧವಾಗಿದ್ದರು. ದೇಶದಲ್ಲಿ ಜಾತಿ ಗಣತಿ ಆಗಬೇಕೆಂದು ರಾಹುಲ್ ಗಾಂಧಿ ಅವರು ಹೇಳಿದ್ದಾಗ ಲೇವಡಿ ಮಾಡಿದ್ದರು. ಈಗ ದೇಶದಲ್ಲಿ ಜನಗಣತಿ ಜೊತೆಗೆ ಜಾತಿ ಗಣತಿಯೂ ಮಾಡುವುದಾಗಿ ಹೇಳಿದ್ದಾರೆ. ಅವರ ವಿಲಕ್ಷಣ ಮನಸ್ಥಿತಿಗೆ ಇದು ಸಾಕ್ಷಿ ಎಂದು ಕಿಡಿಕಾರಿದರು.ಅಂಬೇಡ್ಕರ್ ಮತ್ತು ಸಂವಿಧಾನದ ಆಶಯದಂತೆ ದೇಶದ ದಲಿತ, ಹಿಂದುಳಿದ, ಶೋಷಿತ ಸೇರಿದಂತೆ ಎಲ್ಲಾ ವರ್ಗಕ್ಕೂ ಸಾಮಾಜಿಕ ನ್ಯಾಯ ಸಿಗಬೇಕಾದರೆ ಜಾತಿ ಸಮೀಕ್ಷೆ ತುಂಬಾ ಅಗತ್ಯ. ಯಾರು ಯಾವ ಸ್ಥಿತಿಯಲ್ಲಿದ್ದಾರೆಂಬುದು ಗೊತ್ತಾಗಬೇಕು. ಆ ನಿಟ್ಟಿನಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ, ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಗೆ ಆಯೋಗ ರಚಿಸಿದ್ದರು. ಅದೇ ಆಯೋಗವು ಸುಮಾರು 54 ಅಂಶಗಳನ್ನು ಮುಂದಿಟ್ಟುಕೊಂಡು ತಯಾರಿಸಿದ ವರದಿ ಈಗ ಸರ್ಕಾರದ ಮುಂದಿದೆ. ಅದರ ಜಾರಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಅದೇ ಮಾದರಿಯಲ್ಲಿ ಕೇಂದ್ರ ಸರ್ಕಾರವು ದೇಶದಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಅಂಶಗಳನ್ನು ಮುಂದಿಟ್ಟುಕೊಂಡು ಜಾತಿ ಸಮೀಕ್ಷೆ ನಡೆಸಲಿ ಎನ್ನುವುದು ನಮ್ಮ ಮನವಿ ಎಂದರು.

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೂ ಮನವಿ ಮಾಡಿದ್ದಾರೆ. ಅದನ್ನು ಅವರು ಹೇಗೆ ತೆಗೆದುಕೊಳ್ಳುತಾರೋ ಅವರಿಗೆ ಬಿಟ್ಟಿದ್ದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್.ಪ್ರಸನ್ನ ಕುಮಾರ್, ಕಾಂಗ್ರೆಸ್ ಮುಖಂಡರಾದ ಕಲ್ಲುಗೋಡು ರತ್ನಾಕರ್, ಚಂದ್ರ ಭೂಪಾಲ್, ಕಲಿಂ ಪಾಶಾ, ಮಧು, ರಮೇಶ್ ಇಕ್ಕೇರಿ, ದೇವಿ ಕುಮಾರ್ ಸೇರಿದಂತೆ ಮತ್ತಿತರರು ಇದ್ದರು.

ಪುನಾರಾವರ್ತಿ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ

ಯಾವುದೇ ಶುಲ್ಕವಿಲ್ಲ: ಸಚಿವ

ಶಿವಮೊಗ್ಗ: ಗ್ರಾಮೀಣ, ಹಿಂದುಳಿದ, ರೈತರು ಮತ್ತು ಬಡ ಮಕ್ಕಳಿಗೆ ಅನುಕೂಲವಾಗಲೆಂದು ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಲು ಯಾವುದೇ ಶುಲ್ಕವನ್ನು ವಿಧಿಸಿಲ್ಲ ಎಂದು ಶಿಕ್ಷಣ ಸಚಿವ ಮಧುಬಂಗಾರಪ್ಪ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉತ್ತಮ ಫಲಿತಾಂಶ ಬರಲು ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಯನ್ನು ಈ ಬಾರಿ ತರಲಾಗಿತ್ತು. 2024-25 ರ ಪರೀಕ್ಷೆ- 1ರ ಫಲಿತಾಂಶವು ಕಳೆದ ಸಾಲಿಗಿಂತ ಶೇ.8.5 ರಷ್ಟು ಅಧಿಕವಾಗಿದೆ. ಈ ವರ್ಷ ಶೇ.75 ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆ(ಶೇ.60) ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಶೇ.54 ರಷ್ಟು ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದಿದ್ದರು. ಈ ಬಾರಿ ಶೇ.75 ರಷ್ಟು ಆರ್‌ಟಿಇ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.

ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳು ಪರೀಕ್ಷೆ ಕಟ್ಟಲು ಯಾವುದೇ ಶುಲ್ಕವನ್ನು ವಿಧಿಸಿಲ್ಲ, ಜೊತೆಗೆ ಆನ್‌ಲೈನ್‌ನಲ್ಲೇ ತಕ್ಷಣ ಪರೀಕ್ಷೆ ತೆಗೆದುಕೊಳ್ಳುವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದು, ಇದು ಅತ್ಯಂತ ಯಶಸ್ಸು ಕಂಡಿದೆ.64.600 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ದಾಖಲಾಗಿದ್ದು, ಮೂರು ಪರೀಕ್ಷೆಗಳ ಸೂತ್ರ ಯಶಸ್ಸು ಕಂಡಿದೆ ಎಂದರು.

ಮೇ 26 ರಿಂದ ಜೂ.2 ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-2 ಹಾಗೂ ಜೂ.23 ರಿಂದ ಜೂ.30ರವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ-3 ನಡೆಯಲಿದೆ ಎಂದ ಅವರು, ಸರ್ಕಾರಿ ಶಾಲೆಗಳಿಗೆ ಸುಮಾರು 11 ಸಾವಿರ ಹಾಗೂ ಅನುದಾನಿತ ಶಾಲೆಗಳಿಗೆ 6500 ಸೇರಿದಂತೆ ಸುಮಾರು 12 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.