- ಬಾಯಿ ಚಪಲಕ್ಕೆ ಸಂಘ ಪರಿವಾರ-ಮೋದಿ ಟೀಕೆಗೆ ಗರಂ - - -

ದಾವಣಗೆರೆ: ನಾಲ್ಕೈದು ಸಲ ಶಾಸಕರಾದರೂ ಇಂದಿಗೂ ಸಚಿವರಾಗದ ಅದೆಷ್ಟೋ ಹಿರಿಯರು ಕಾಂಗ್ರೆಸ್ಸಿನಲ್ಲಿದ್ದರೂ, ಎಐಸಿಸಿ ಅಧ್ಯಕ್ಷರ ಮಗನೆಂಬ ಕಾರಣಕ್ಕೆ, ಅಪ್ಪನ ಬಾಲ ಹಿಡಿದು ಬಂದಿದ್ದಕ್ಕೆ ನಿನ್ನನ್ನು ಸಚಿವನಾಗಿ ಮಾಡಿದ್ದಾರೆ. ಮೊದಲು ನಿನ್ನ ಸ್ವಂತ ಶಕ್ತಿ ತೋರಿಸಪ್ಪ ಎಂದು ಬಿಜೆಪಿ ಹಿರಿಯ ಮುಖಂಡ, ದೂಡಾ ಮಾಜಿ ಅಧ್ಯಕ್ಷ ಯಶವಂತ ರಾವ್ ಜಾಧವ್ ಸಂಘ ಪರಿವಾರವನ್ನು ಟೀಕಿಸುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಮಂತ್ರಿಯಾಗಿ ನಿನ್ನ ಸ್ವಂತ ಶಕ್ತಿ ತೋರಿಸಪ್ಪ. ದೀನ ದಲಿತರಿಗೆ ಸ್ಥಾನಮಾನ, ಅವಕಾಶ ಸಿಗಲೆಂದು ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಮೀಸಲಾತಿ ಜಾರಿಗೆ ತಂದರು. ಖರ್ಗೆ ಕುಟುಂದವರಾದ ನಿಮಗೇ ಯಾಕೆ ಮೀಸಲಾತಿ? ಬೇರೆ ದಲಿತರಿಗೆ ನಿನ್ನ ವಿಧಾನಸಭಾ ಕ್ಷೇತ್ರದಲ್ಲಿ ಅವಕಾಶ ಮಾಡಿ ಕೊಡು. ನೀನು ಬೇರೆ ಯಾವುದಾದರೂ ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು, ಗೆದ್ದು ತೋರಿಸು ಎಂದು ಸವಾಲು ಹಾಕಿದರು.

ಸಂಘ ಪರಿವಾರದ ಬಗ್ಗೆ ಟೀಕಿಸುವುದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವುದನ್ನು ಇನ್ನಾದರೂ ನಿಲ್ಲಿಸಬೇಕು. ಮೋದಿ ಪ್ರೆಸ್ ಮೀಟ್ ಮಾಡುವುದಿಲ್ಲವೆಂದು ಟೀಕಿಸುತ್ತಿಯಾ? ಈ ಹಿಂದೆ ಐಟಿ ಬಿಟಿ ಸಚಿವನಾಗಿ, ಈಗ ಗೃಹ ಸಚಿವನಾಗಿ ನಿಮ್ಮ ಸಾಧನೆ ಏನಪ್ಪಾ? ನಿಮ್ಮ ಹಿಂದಿನ ಇಲಾಖೆಯ ಸಾಧನೆ ಬಗ್ಗೆ ಒಂದು ಸುದ್ದಿಗೋಷ್ಠಿ ಮಾಡಿ, ನಿಮ್ಮ ಸಾಧನೆ ಹೇಳಿ ನೋಡೋಣ. ಕಲುಬುರಗಿ ಜಿಲ್ಲೆ, ಚಿತ್ತಾಪುರ ಕ್ಷೇತ್ರದ ಅಭಿವೃದ್ಧಿ ಬಗ್ಗೆಯಾದರೂ ಸಾರ್ವಜನಿಕವಾಗಿ ಹೇಳಿ ನೋಡೋಣ ಎಂದು ಕುಟುಕಿದರು.

ಕೆಲ ದಿನಗಳ ಹಿಂದಷ್ಟೇ 10-12 ವಿದ್ಯಾರ್ಥಿನಿಯರು ಶಾಲೆ ಮೇಲ್ಚಾವಣಿ ಕುಸಿದು ಬಿದ್ದು, ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಮ್ಮದೇ ಕ್ಷೇತ್ರದ ಈ ಘಟನೆ ಬಗ್ಗೆ ಒಂದಿಷ್ಟು ಮಾತನಾಡಿ. ಆಸ್ಪತ್ರೆಗೆ ದಾಖಲಾಗಿರುವ ಆ ಗಾಯಾಳು ಮಕ್ಕಳ ಕುರಿತು ಮಾತನಾಡಿ. ಸಂಘ ಪರಿವಾರವನ್ನು ಟೀಕಿಸುವ ಪ್ರಿಯಾಂಕ್ ಖರ್ಗೆಯವರೇ ಸಂಘದಲ್ಲಿ ಅಧ್ಯಕ್ಷ, ಕಾರ್ಯದರ್ಶಿ ಅಂತೆಲ್ಲಾ ಇರುವುದಿಲ್ಲ. ಅದರಲ್ಲಿ ಇರುವುದೆಲ್ಲರೂ ಸ್ವಯಂ ಸೇವಕರು. ನೀವು, ನಿಮ್ಮ ತಂದೆ ಏನಾದರೂ ಸಂಘಕ್ಕೆ ದೇಣಿಗೆ ಕೊಟ್ಟಿದ್ದೀರಾ? ದೇಣಿಗೆ ನೀಡಿದ್ದಕ್ಕೆ ರಸೀದಿಯೇನಾದರೂ ಇದೆಯಾ? ಸಂಘದ ಬಗ್ಗೆ ಪೂರ್ಣ ಅರಿಯದೇ, ಹಗುರ ಮಾತನಾಡಬೇಡಿ ಎಂದು ತಾಕೀತು ಹೇಳಿದರು.


ಪ್ರಕೃತಿ ವಿಕೋಪ, ಅತಿವೃಷ್ಟಿ, ಅನಾವೃಷ್ಟಿ, ಕಟ್ಟಡ ಕುಸಿತ, ಅನಾಹುತಗಳ ಸಂಭವಿಸಿದರೆ ಎಲ್ಲರಿಗಿಂತ ಮೊದಲು ಅಲ್ಲಿ ಹಾಜರಾಗಿ ಸಂಕಷ್ಟಕ್ಕೀಡಾದವರನ್ನು ರಕ್ಷಿಸುವುದು, ಗಾಯಾಳುಗಳ ನೆರವಿಗೆ ನಿಲ್ಲುವುದೇ ಸಂಘ ಪರಿವಾರ ಮತ್ತು ಸಂಘದ ಸ್ವಯಂ ಸೇವಕರು. ಹೀಗೆ ಮುಂಚೂಣಿಯಲ್ಲಿ ನಿಂತು ಸೇವಾ ಕಾರ್ಯ ಮಾಡುವ ಸಂಘದ ಬಗ್ಗೆ ನಿಮ್ಮ ಬಾಯಿ ಚಟಕ್ಕೆ, ಬಾಯಿ ಚಪಲಕ್ಕೆ ಹಗುರವಾಗಿ ಮಾತನಾಡಬೇಡಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಯಶವಂತರಾವ್‌ ಜಾಧವ್ ತಿಳಿಸಿದರು.

- - -

-15ಕೆಡಿವಿಜಿ12: ಯಶವಂತ ರಾವ್ ಜಾಧವ್.