ಸಾರಾಂಶ
ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಸಜ್ಜಿತ ದೇಶಿಯ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲು ಎಲ್ಲ ಅರ್ಹತೆ ಹೊಂದಿದೆ. ಈ ನಿಲ್ದಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೇಳಲಾಗಿತ್ತು.
ಧಾರವಾಡ:
ಬೆಂಗಳೂರು ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಚಿಂತಿಸುತ್ತಿದೆ. ಆದರೆ, ಹುಬ್ಬಳ್ಳಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಿ ಉತ್ತರ ಕರ್ನಾಟಕವನ್ನು ಯಾವಾಗ ಉದ್ಧಾರ ಮಾಡುವುದು ಎಂದು ಬಿಜೆಪಿ ಮುಖಂಡ ಪಿ.ಎಚ್. ನೀರಲಕೇರಿ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಹುಬ್ಬಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಸಜ್ಜಿತ ದೇಶಿಯ ವಿಮಾನ ನಿಲ್ದಾಣ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಲು ಎಲ್ಲ ಅರ್ಹತೆ ಹೊಂದಿದೆ. ಈ ನಿಲ್ದಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳುವ ಸಂದರ್ಭದಲ್ಲಿಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದೇ ಹೇಳಲಾಗಿತ್ತು. ಆದರೆ, ಆ ಭರವಸೆ ಈಡೇರದಿರುವುದು ಈ ಭಾಗದ ಜನತೆಯ ದುರ್ದೈವವೇ ಸರಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ನಾಗರಿಕರ ಒತ್ತಾಯದ ಮೇಲೆ ಹು–ಧಾ ಬೈಪಾಸ್ ಅಗಲೀಕರಣ ಆಗುತ್ತಿದೆ. ಹುಬ್ಬಳ್ಳಿ ಕೇಂದ್ರವಾಗಿ ಬೆಳಗಾವಿ, ಗೋವಾ, ಧಾರವಾಡ, ಬಾಗಲಕೋಟೆ, ವಿಜಯಪುರ, ಹಾವೇರಿ ವೇಗವಾಗಿ ಬೆಳೆಯುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರು ಸಮೀಪ ಬದಲು ಹುಬ್ಬಳ್ಳಿಯಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೊದಲು ಮಾಡುವುದು ಸೂಕ್ತ. ಇದರಿಂದ ಅಭಿವೃದ್ಧಿ ವೇಗವಾಗುವುದಲ್ಲದೇ ಉತ್ತರ ಕರ್ನಾಟಕ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಡುತ್ತದೆ. ಕೂಡಲೇ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉತ್ತರ ಕರ್ನಾಟಕದವರೇ ಆದ ಎಂ.ಬಿ. ಪಾಟೀಲ ಅವರು ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ನಿಲ್ದಾಣವನ್ನಾಗಿ ಮೇಲ್ದರ್ಜೆಗೇರಿಸಲು ಕೆಲಸ ಮಾಡಬೇಕು. ಇಲ್ಲದಿದ್ದರೇ ಈ ಭಾಗದ ನಾಗರಿಕರ ಜನಾಂದೋಲನ ರೂಪಿಸಬೇಕಾಗುವುದು ಎಂದು ಎಚ್ಚರಿಸಿದ್ದಾರೆ.