ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ಹನಿಟ್ರ್ಯಾಪ್ ವಿಚಾರದಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ರಕ್ಷಣೆಗೆ ಮುಖ್ಯಮಂತ್ರಿ ಬರಲಿಲ್ಲ ಎಂಬ ಗಂಭೀರ ಆರೋಪವನ್ನು ತುಮಕೂರು ಗ್ರಾಮಾಂತರ ಶಾಸಕ ಸುರೇಶಗೌಡ ಮಾಡಿದ್ದಾರೆ.ವಿಧಾನಸೌಧದಲ್ಲಿ ಒಬ್ಬರು ಸಚಿವರು ಸ್ಪೀಕರ್ ಬಳಿ ಬರುತ್ತಾರೆ. ಮೂರನೇ ಬಾರಿ ಬಂದಾಗ ಕಿವಿಯಲ್ಲಿ ಏನೋ ಹೇಳುತ್ತಾರೆ. ಅದಾದ ಮೇಲೆ ಯತ್ನಾಳ್ ಅವರು ಬಜೆಟ್ ಮೇಲೆ ಮಾತನಾಡುತ್ತಿರುತ್ತಾರೆ. ಆಗ ಒಂದು ಚೀಟಿ ಬರುತ್ತದೆ. ಆಗ ಯತ್ನಾಳ್ ಇದನ್ನು ರೈಸ್ ಮಾಡುತ್ತಾರೆ. ಅಲ್ಲಿರುವ ಸಚಿವರೇ ಬಂದು ಸದಸ್ಯರಿಗೆ ಹೇಳಿ ಈ ವಿಷಯವನ್ನು ಪ್ರಸ್ತಾಪ ಮಾಡಿಸುತ್ತಾರೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯ ಗೃಹ ಸಚಿವ ಡಾ. ಪರಮೇಶ್ವರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಇದು ಕಾಂಗ್ರೆಸ್ ನ ಬಿಗ್ಗೆಸ್ಟ್ ಸೆಕ್ಸ್ ಕ್ಯಾಂಡಲ್ ಎಂದರು.ವಿಚಾರ ಪ್ರಸ್ತಾಪವನ್ನು ಸಿದ್ದರಾಮಯ್ಯನವರೇ ಮಾಡಿಸಿದ್ದಾರಾ ಅಥವಾ ಇಲ್ವಾ ಎಂದು ಅನುಮಾನ ವ್ಯಕ್ತಪಡಿಸಿದ ಸುರೇಶಗೌಡ ಅವರು, ರಾಜಣ್ಣ ಸಿದ್ದರಾಮಯ್ಯ ಬಳಿ ಹೋಗಿ ಮಾತನಾಡಬೇಕಿತ್ತು. ಆದರೆ ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದು ಯಾಕೆ ಎಂದರು. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಸಿದ್ದರಾಮಯ್ಯನವರೇ ಮಾಡಿಸಿದ್ದಾರಾ ಎಂದರು.
ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ, ಭ್ರಷ್ಟಾಚಾರ ಜೊತೆಗೆ ಸೀಟ್ ಉಳಿಸಿಕೊಳ್ಳುವ ಪ್ರಯತ್ನ ಆಗುತ್ತಿದೆ ಎಂದು ಆರೋಪಿಸಿದ ಅವರು, ಒಂದು ಕಡೆ ಮೊಯ್ಲಿಯವರು ಡಿ.ಕೆ. ಶಿವಕುಮಾರ್ ಸಿಎಂ ಆಗುವುದನ್ನು ಯಾರೂ ತಪ್ಪಿಸಲು ಆಗುವುದಿಲ್ಲ ಅಂತಾರೆ. ಕೂಡಲೇ ಮುಖ್ಯಮಂತ್ರಿ ಸುಮೋಟೊ ದಾಖಲಿಸಿಕೊಂಡು ಸಿಬಿಐಗೆ ನೀಡಬೇಕು. ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು.ರಾಜಣ್ಣರವರು ಹಿರಿಯರು, ನಮ್ಮ ಜಿಲ್ಲೆಯ ನಾಯಕರು. ಹೀಗಾಗಿ ಇದು ತನಿಖೆ ಆಗಲೇಬೇಕು ಎಂದ ಸುರೇಶಗೌಡ ಅವರು, ಸ್ಪೀಕರ್ ಅವರು 18 ಶಾಸಕರನ್ನು ಅಮಾನತು ಮಾಡಿದ್ದಾರೆ. ಇದು ಖಂಡನೀಯ. ಈ ಹಿಂದೆ ಉಪಸಭಾಪತಿ ಧರ್ಮೇಗೌಡರನ್ನು ಎಳೆದು ತಂದಿದ್ದರು. ಅಂದು ಯಾರನ್ನು ಅಮಾನತು ಮಾಡಿರಲಿಲ್ಲ ಎಂದರು.
48 ಜನರ ಬಗ್ಗೆ ಸೆಕ್ಸ್ ಸ್ಯ್ಯಾಂಡಲ್ ಇದೆ ಅಂತ ಸಚಿವರೇ ಹೇಳುತ್ತಾರೆ. ಇದನ್ನು ತನಿಖೆ ಮಾಡಲು ಆಗಿಲ್ಲ. ನಿಮಗೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು.ಸ್ಪೀಕರ್ ಅವರು ಕಾಂಗ್ರೆಸ್ ನ ಏಜೆಂಟರಂತೆ ವರ್ತಿಸಬಾರದು. ಪ್ರಜಾಪ್ರಭುತ್ವಕ್ಕೆ ನಾವು ಗೌರವ ಕೊಡುತ್ತೇವೆ. ಜನರಿಂದ ಆರಿಸಿದ್ದವರನ್ನು ಹೀಗೆ ಮಾಡಬಾರದು ಎಂದರು.
ಡಿಕೆ ಶಿವಕುಮಾರ್ ಅವರು ಮೂಲ ಕಾಂಗ್ರೆಸ್ ನವರು. ನೀವು ವಿಧಾನಸಭೆಯಲ್ಲಿ ಸಿಸಿಟಿವಿ ನೋಡಿ, ಯಾರು ಚೀಟಿ ತೆಗೆದುಕೊಂಡು ಬಂದು ಹೀಗೆ ಮಾಡಿದರು ಅಂತಾ ನೋಡಿ ಎಂದ ಸುರೇಶಗೌಡ, ನೀವು ಕುರ್ಚಿ ಉಳಿಸಿಕೊಳ್ಳಲು ಇದನ್ನು ಮುಚ್ಚಿಕೊಳ್ಳಬೇಡಿ. ನಿಮ್ಮ ಹಣೆ ಬರಹದಲ್ಲಿದ್ದರೆ ನೀವು ಐದು ವರ್ಷದಲ್ಲಿ ಮುಖ್ಯಮಂತ್ರಿ ಆಗುತ್ತೀರ ಎಂದರು.ಸಿದ್ದರಾಮಯ್ಯ ಅವರು ತೊಡೆತಟ್ಟಿ ಸವಾಲ್ ಹಾಕಿ ಡೋರ್ ಒದ್ದಿದ್ದರು. ಆಗ ಅಮಾನತು ಮಾಡಿಲ್ಲ ಎಂದ ಅವರು, ಇವೆಲ್ಲಾ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.
ಸ್ಪೀಕರ್ ಇದನ್ನು ವಾಪಸ್ ತೆಗೆದುಕೊಂಡಿಲ್ಲವೆಂದರೆ ರಾಜ್ಯಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.