-ತನಿಖೆಗೆ ಆಂದೋಲ ಶ್ರೀ ಆಗ್ರಹ । ಸ್ಥಳೀಯ ಪೊಲೀಸರ ಬದಲಾಗಿ ಸಿಐಡಿ ತನಿಖೆ ಆಗಲಿ

-----

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಕೇಂದ್ರ ಕಾರಾಗೃಹದಿಂದ ಪರಾರಿಯಾಗಿದ್ದ ಮೂವರು ಅಪರಾಧಿಗಳಲ್ಲಿ ಸಂತೋಷ್ ಎಂಬಾತನನ್ನು ಬೀದರ್ ಜಿಲ್ಲೆಯ ಪೊಲೀಸರು ಬಂಧಿಸಿ ಕಲಬುರಗಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದು ಬಂದಿದೆ.

ಆದರೂ ಅದೇ ಸಜಾ ಕೈದಿಯನ್ನು ಕಲಬುರಗಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾಗಿ ಹೇಳಿದ್ದಾರೆ.


ಇಡೀ ಪ್ರಕರಣದಲ್ಲಿ ಬಲವಾದ ಶಂಕೆಗಳು ಉದ್ಭವ ಆಗಿವೆ, ನಕಲಿ ಎನ್ಕೌಂಟರ್ ಗೆ ಕುಮ್ಮಕ್ಕು ಕೊಟ್ಟವರು ಯಾರು? ಯಾಕೆ ಅನ್ನೋದು ಸಂಪೂಪರ್ಣ ತನಿಖೆ ಆಗಲಿ ಎಂದು ರಾಜ್ಯ ಶಿವಸೇನಾ ಘಟಕದ ಅಧ್ಯಕ್ಷ ಆಂದೋಲ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದ್ದಾರೆ.

ಒಬ್ಬ ಸಣ್ಣ ಕಳ್ಳನನ್ನು ಬಂಧಿಸಿದರೂ ಕೈಕೋಳ ಹಾಕುವ ಪೊಲೀಸರು, ಇಷ್ಟು ಗಂಭೀರ ಅಪರಾಧಿಗೆ ಕೈಕೋಳ ಹಾಕದೆ ಏಕೆ ನಿರ್ಲಕ್ಷ್ಯ ವಹಿಸಿದರು? ಬೀದರ್ ಪೊಲೀಸರು ಈತನನ್ನು ಬಂಧಿಸಿದ ಕ್ಷಣದಿಂದ ಹಿಡಿದು ಕಲಬುರಗಿ ಪೊಲೀಸರಿಗೆ ಹಸ್ತಾಂತರಿಸಿದವರೆಗಿನ ಎಲ್ಲಾ ವಿಡಿಯೋ ದೃಶ್ಯಾವಳಿಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಬೇಕು ಎಂದಿದ್ದಾರೆ.

ನಕಲಿ ಎನ್ಕೌಂಟರ್ ಎಂಬುದು ಕ್ರೂರ, ಕೊಲೆಗೆ ಸಮಾನವಾದ ಗಂಭೀರ ಅಪರಾಧವಾಗಿದೆ.

ಪೊಲೀಸ್ ಅಧಿಕಾರಿಯೊಬ್ಬರು ಕಾನೂನುಬಾಹಿರ ಹತ್ಯೆಯನ್ನು ಸಂಘಟಿಸಿದಾಗ, ಅದು ಭಾರತೀಯ ಸಂವಿಧಾನದ ವಿಧಿ 21 (ಜೀವಿಸುವ ಹಕ್ಕು) ನೇರ ಉಲ್ಲಂಘನೆಯಾಗುತ್ತದೆ ಮತ್ತು ಅದನ್ನು ಕ್ರೂರ ಕೊಲೆ ಎಂದೇ ಪರಿಗಣಿಸಬೇಕೆಂದು ಭಾರತದ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ದೇಶದ ಕಾನೂನಿನಡಿಯಲ್ಲಿ, ಪೊಲೀಸ್ ಅಧಿಕಾರಿಗಳಿಗೆ ನ್ಯಾಯಾಂಗದ ಅನುಮತಿಯಿಲ್ಲದೆ ಯಾರನ್ನೂ ಕೊಲ್ಲುವ ವಿನಾಯಿತಿ ಇಲ್ಲ ಕಾಲಿಗೆ ಗುಂಡು ಹಾಕಲು ಕಟ್ಟುನಿಟ್ಟಾಗಿ ವ್ಯಾಖ್ಯಾನಿಸಲಾದ ಸ್ವಯಂರಕ್ಷಣೆ ವೇಳೆ ಮಾತ್ರ ಜೀವಹಾನಿ ತಡೆಗೆ ಕಾನೂನು ಬದ್ಧ ಅವಕಾಶವಿದೆ.

​ಸಾವಿಗೆ ಕಾರಣವಾಗುವ ಪ್ರತಿಯೊಂದು ಪೊಲೀಸ್ ಎನ್ಕೌಂಟರ್‌ ಬಗ್ಗೆ ಕಡ್ಡಾಯ ಮ್ಯಾಜಿಸ್ಟೀರಿಯಲ್ ತನಿಖೆ ನಡೆಯಬೇಕು.

ಈ ತನಿಖೆಯನ್ನು ಸ್ಥಳೀಯ ಪೊಲೀಸರ ಬದಲಾಗಿ ರಾಜ್ಯ ಸಿಐಡಿ ಸಂಸ್ಥೆಗೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ 16 ಅಂಶಗಳ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ ಎಂದು ಸ್ವಾಮೀಜಿ ಕಾನೂನು ಅಂಶ ಉಲ್ಲೇಖಸಿ ಘಟನೆ ಖಂಡಿಸಿದ್ದಾರೆ.