ದಾವಣಗೆರೆಯಲ್ಲಿ ಶನಿವಾರ ಪೊಲೀಸರ ಮೇಲೆ ಹಲ್ಲೆ ಮಾಡಿದವರು ಯಾರೇ ಆಗಿದ್ದರೂ ಒದ್ದು ಒಳಗೆ ಹಾಕಿ. ವೈಯಕ್ತಿಕ ವಿಚಾರದ ಗಲಾಟೆಯಲ್ಲಿ ಹಲ್ಲೆಯಾಗಿದೆ. ಅದಕ್ಕೂ ನನಗೆ ಸಂಬಂಧವಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಖಡಕ್ ಸೂಚನೆ ನೀಡಿದ್ದಾರೆ.

- ಮಹಾತ್ಮ ಗಾಂಧಿ ವೃತ್ತದಲ್ಲಿ ಜರ್ಮನ್ ಮಾದರಿ ವೃತ್ತ, ಪಾಲಿಕೆವರೆಗಿನ ಸಿಮೆಂಟ್ ರಸ್ತೆ ಉದ್ಘಾಟನೆ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆಯಲ್ಲಿ ಶನಿವಾರ ಪೊಲೀಸರ ಮೇಲೆ ಹಲ್ಲೆ ಮಾಡಿದವರು ಯಾರೇ ಆಗಿದ್ದರೂ ಒದ್ದು ಒಳಗೆ ಹಾಕಿ. ವೈಯಕ್ತಿಕ ವಿಚಾರದ ಗಲಾಟೆಯಲ್ಲಿ ಹಲ್ಲೆಯಾಗಿದೆ. ಅದಕ್ಕೂ ನನಗೆ ಸಂಬಂಧವಿಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಖಡಕ್ ಸೂಚನೆ ನೀಡಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಭಾನುವಾರ ನೂತನ ಜರ್ಮನ್ ಮಾದರಿ ವೃತ್ತ, ಪಾಲಿಕೆವರೆಗಿನ ಸಿಮೆಂಟ್ ರಸ್ತೆ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹಲ್ಲೆಗೆ ಒಳಗಾದ ಪೊಲೀಸರು ಗುಣಮುಖರಾಗಿದ್ದು, ಇವತ್ತೇ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಾರೆಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರಿಗಳನ್ನು ಸರಿಯಾದ ರೀತಿಯಲ್ಲಿ ಶಾಸಕ ನಡೆಸಿಕೊಳ್ಳಬೇಕು. ಯಾವುದೋ ಊರು, ಜಿಲ್ಲೆಯಿಂದ ಬಂದು ಅಧಿಕಾರಿಗಳು ಇಲ್ಲಿಗೆ ಬಂದು, ಪಕ್ಷಾತೀತವಾಗಿ ಕೆಲಸ ಮಾಡುತ್ತಿರುತ್ತಾರೆ. ಮಹಿಳಾ ಅಧಿಕಾರಿ ಎನ್ನದೇ ಮಾತನಾಡಿದರೆ ಅಂತಹ ವ್ಯಕ್ತಿಯನ್ನು ಶಾಸಕನೆಂದು ಕರೆಯುತ್ತಾರಾ ಎಂದು ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ ವಿರುದ್ಧ ಸಚಿವರು ಹರಿಹಾಯ್ದರು.

ಹರಿಹರ ಕ್ಷೇತ್ರ ಜನ ಅಂತಹ ವ್ಯಕ್ತಿಯನ್ನು ಹೇಗೆ ಚುನಾವಣೆಯಲ್ಲಿ ಗೆಲ್ಲಿಸಿದರೋ ಗೊತ್ತಿಲ್ಲ. ನಮ್ಮ ತಪ್ಪಿನಿಂದ ಹರಿಹರದಲ್ಲಿ ಬಿ.ಪಿ.ಹರೀಶ ಗೆದ್ದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಬಲಿಷ್ಠ ಸ್ಪರ್ಧಿಯನ್ನು ಹಾಕಿದ್ದರೆ ಅಂದೇ ಹರೀಶ ಸೋತಿರುತ್ತಿದ್ದರು. ಮೊದಲು ಹರಿಹರ ಕ್ಷೇತ್ರದಲ್ಲಿ ನಮ್ಮಂತೆ ರಸ್ತೆ, ವೃತ್ತಗಳನ್ನು ಅಭಿವೃದ್ಧಿಪಡಿಸಲಿ ಎಂದು ಸಲಹೆ ನೀಡಿದರು.

ಹಿರಿಯ ವರ್ತಕ ಕಿರುವಾಡಿ ಸೋಮಣ್ಣ, ಕಾಂಗ್ರೆಸ್ ಮುಖಂಡರಾದ ಕೆ.ಜಿ.ಶಿವಕುಮಾರ, ಪಾಲಿಕೆ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಖಾಸಗಿ ಬಸ್ಸು ಮಾಲೀಕರು, ಚಾಲಕರು ಇದ್ದರು.

- - -

(ಬಾಕ್ಸ್‌)* ಹಲ್ಕಾ ಕೆಲಸ ಯಾಕೆ ಮಾಡಬೇಕು?ರೈತರಿಗೆ ಮಣ್ಣು ಹೊಡೆಯಲು ಅಡ್ಡಿಪಡಿಸಿದ್ದು ತಾನಲ್ಲ ಎಂಬುದಾಗಿ ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದ್ದನ್ನು ನೋಡಿದೆ. ಯಾಕೆ ಹಲ್ಕಾ ಕೆಲಸ ಮಾಡಬೇಕು? ಪ್ರಾಕ್ಟಿಕಲ್ ಆಗಿ ಮಾತನಾಡಲಿ. ಇಲ್ಲಿ ಫುಟ್ ಪಾತ್ ವ್ಯಾಪಾರ ಮಾಡುವವರನ್ನು ತೆಗೆಸುವುದು ಮಾನವೀಯತೆಯೇ? ಅಡಕೆ ತೋಟಕ್ಕೆ ರೈತರು ಮಣ್ಣು ಒಯ್ತಾರೆ. ಹರಿಹರದ ಇಟ್ಟಿಗೆ ಭಟ್ಟಿದು ಎಷ್ಟು ತಿಂತಾನೋ ಗೊತ್ತಿಲ್ಲ. ನನ್ನ ವಿರುದ್ಧ ಮಾಧ್ಯಮಗಳ ಮುಂದೆ, ಸದನದ ಒಳಗೆ ಇಲ್ಲಸಲ್ಲದ ಆರೋಪ ಮಾಡಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಅಂತಹವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುತ್ತೇನೆ. ಏನು ಬರೆಯಬೇಕು, ಏನು ಬೇಡ ಎಂಬ ಬಗ್ಗೆಯೂ ಮಾಧ್ಯಮದವರಿಗೆ ತಿಳಿದಿರಲಿ ಎಂದು ಸಚಿವರು ಎಚ್ಚರಿಸಿದರು.

- - -

(ಟಾಪ್‌ ಕೋಟ್‌) ನಾನೂ ಡ್ರಗ್ಸ್ ಸಪ್ಲೈ ಮಾಡಲಾ? ಡ್ರಗ್ಸ್ ಸಪ್ಲೈ ಮಾಡುವಷ್ಟು ಲುಚ್ಚಾನಾ ನಾನು. ಕಾಲೇಜುಗಳನ್ನು ನಡೆಸುವವರು ನಾವು. ಯಾರೋ ಏನೋ ಮಾಡಿದರೆಂದರೆ ನಮ್ಮ ಹೆಸರಿಗೆ ತಳಕು ಹಾಕುವುದು ಸರಿಯಲ್ಲ. ದಂಧೆಯಲ್ಲಿ ಸಿಕ್ಕಿಬಿದ್ದಿರುವವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತಿದೆ. ಎಸ್ಪಿ, ಡಿಸಿ ಬಗ್ಗೆ ಹಗುರ ಮಾತನಾಡುವುದು ಸಂಸ್ಕಾರವಾ?

- ಎಸ್.ಎಸ್.ಮಲ್ಲಿಕಾರ್ಜುನ, ಸಚಿವ.

- - -

-1ಕೆಡಿವಿಜಿ7: ದಾವಣಗೆರೆ ಮಹಾತ್ಮ ಗಾಂಧಿ ವೃತ್ತವನ್ನು ಜರ್ಮನ್ ಮಾದರಿಯಾಗಿ ಅಭಿವೃದ್ಧಿಪಡಿಸಿದ್ದು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಉದ್ಘಾಟಿಸಿದರು.