ಹೊಸ ಬಡಾವಣೆ ನಿರ್ಮಿಸಲು ನಿಮಗೇನು ರೋಗ?

| Published : Jan 21 2025, 12:34 AM IST

ಸಾರಾಂಶ

ಇಷ್ಟು ವರ್ಷಗಳದರೂ ಟಮಕಾದ ಬಡಾವಣೆ ಯಾಕೆ ಅಭಿವೃದ್ಧಿ ಮಾಡಿಲ್ಲ. ಇಷ್ಟು ನಿರ್ಲಕ್ಷ್ಯ ಮಾಡಿದರೆ ಹೇಗೆ ಕೂಡಲೇ ಯೋಜನೆ ರೂಪಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಿ ಹಣಕ್ಕೆ ಕೊರತೆಯಿಲ್ಲ ಅನುದಾನ ಕೊಡಕ್ಕೆ ಸರ್ಕಾರ ಸಿದ್ದವಿದೆ. ಕೇಂದ್ರ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ ಕೊಟ್ಟ ಅನುದಾನ ವಾಪಸ್‌ ತೆಗೆದುಕೊಂಡಿದ್ದರೂ ರಾಜ್ಯ ಹಣ ನೀಡಿದೆ.

ಕನ್ನಡಪ್ರಭ ವಾರ್ತೆ ಕೋಲಾರನಗರದ ಸುತ್ತಲೂ ಬೇಕಾಬಿಟ್ಟಿ ಖಾಸಗಿ ಬಡಾವಣೆಗಳು ನಿರ್ಮಾಣವಾಗಿವೆ, ಕುಡಾ ಮುಂದಾಳತ್ವದಲ್ಲಿ ಮತ್ತೊಂದು ಸರ್ಕಾರಿ ಲೇಔಟ್ ನಿರ್ಮಾಣ ಮಾಡಲು ನಿಮಗೆಲ್ಲ ಏನು ರೋಗ ಎಂದು ಉಸ್ತುವಾರಿ ಸಚಿವ ಬೈರತಿ ಸುರೇಶ್ ಕುಡಾ ಆಯುಕ್ತ ಶ್ರೀನಾಥ್ ಅವರನ್ನು ತರಾಟೆಗೆ ತೆಗೆದುಕೊಂಡರು.ನಗರದ ಹೊರವಲಯದ ಟಮಕಾದ ಕುಡಾ ಬಡಾವಣೆಯಲ್ಲಿ ೯.೮೦ ಕೋಟಿ ವೆಚ್ಚದ ರಸ್ತೆ ಕಾಮಗಾರಿ ಹಾಗೂ ಬಡಾವಣೆಗೆ ಕುಡಿಯುವ ನೀರಿನ ಬೋರ್‌ವೆಲ್ ಚಾಲನೆ ನೀಡಿದ ನಂತರ, ಇಷ್ಟು ವರ್ಷಗಳದರೂ ಈ ಬಡಾವಣೆ ಯಾಕೆ ಅಭಿವೃದ್ಧಿ ಮಾಡಿಲ್ಲ. ಇಷ್ಟು ನಿರ್ಲಕ್ಷ್ಯ ಮಾಡಿದರೆ ಹೇಗೆ ಕೂಡಲೇ ಯೋಜನೆ ರೂಪಿಸಿಕೊಂಡು ಅಭಿವೃದ್ಧಿಗೆ ಒತ್ತು ನೀಡಿ ಹಣಕ್ಕೆ ಕೊರತೆಯಿಲ್ಲ ಅನುದಾನ ಕೊಡಕ್ಕೆ ಸರ್ಕಾರ ಸಿದ್ದವಿದೆ ಎಂದರು.ಕೇಂದ್ರದ ಅನುದಾನ ವಾಪಸ್‌

ಮಧ್ಯಪ್ರವೇಶಿಸಿದ ಸಂಸದ ಮಲ್ಲೇಶ್ ಬಾಬು ಹಾಗೂ ಎಂಎಲ್ಸಿ ಇಂಚರ ಗೋವಿಂದರಾಜು, ಹಿಂದೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಹಣದಿಂದ ಇವತ್ತು ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಗುದ್ದಲಿ ಪೂಜೆಗೆ ಶುಕ್ರದೆಸೆ ಬಂದಿದೆ ಎಂದಾಗ, ಸಚಿವ ಬೈರತಿ ಸುರೇಶ್‌, ನೋಡಿ ಹಿಂದೆ ಕೇಂದ್ರ ಸರ್ಕಾರ ನಗರಾಭಿವೃದ್ಧಿ ಇಲಾಖೆಗೆ ಕೊಟ್ಟ ಅನುದಾನ ವಾಪಸ್‌ ತೆಗೆದುಕೊಂಡಿದೆ. ಈಗ ನಮ್ಮ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ಹಣದಲ್ಲಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನಿಮಗೂ ಜಿಲ್ಲೆಯ ಬಗ್ಗೆ ಕಾಳಜಿ ಇದ್ದರೆ ವಾಪಸ್‌ ಹೋದ ಅನುದಾನ ಕೊಡಿಸಿ ಎಂದರು.ಈ ಸಂದರ್ಭದಲ್ಲಿ ಶಾಸಕ ಕೊತ್ತೂರು ಜಿ ಮಂಜುನಾಥ್, ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ, ಜಿಪಂ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ಉಪಾಧ್ಯಕ್ಷೆ ಸಂಗೀತಾ, ಸದಸ್ಯೆ ಶ್ವೇತಾ ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಮುಖಂಡರಾದ ಚಂಜಿಮಲೆ ರಮೇಶ್, ಮೈಲಾಂಡಹಳ್ಳಿ ಮುರಳಿ, ವಿ.ಗೀತಾ, ಕುರಿಗಳ ರಮೇಶ್, ಕೋಮುಲ್ ಷಂಷೀರ್, ಇರಗಸಂಸ್ರ ವಿಶ್ವನಾಥ್, ಎಂ.ಸಿ ಫಲ್ಗುಣ ಇದ್ದರು.