ವಿಜಯಪುರ : ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಮಾಡಲು 2012ರಲ್ಲಿ ಮತದಾನ ಮಾಡಿರುವ ಕುರಿತು ದೇಶದ ಜನರಲ್ಲಿ ದಾಖಲೆ ಕೇಳುವ ಕೇಂದ್ರ ಸರ್ಕಾರ ನೂರಾರು ವರ್ಷಗಳಿಂದ ತನ್ನ ಸಂಘಟನೆ ಸ್ಥಾಪಿಸಿರುವ ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಎಸ್‌ಐಆರ್‌ (ವಿಶೇಷ ತೀವ್ರ ಪರಿಷ್ಕರಣೆ) ಮಾಡಲು 2012ರಲ್ಲಿ ಮತದಾನ ಮಾಡಿರುವ ಕುರಿತು ದೇಶದ ಜನರಲ್ಲಿ ದಾಖಲೆ ಕೇಳುವ ಕೇಂದ್ರ ಸರ್ಕಾರ ನೂರಾರು ವರ್ಷಗಳಿಂದ ತನ್ನ ಸಂಘಟನೆ ಸ್ಥಾಪಿಸಿರುವ ಆರ್‌ಎಸ್‌ಎಸ್‌ ನೋಂದಣಿ ಬಗ್ಗೆ ಯಾಕೆ ಪ್ರಶ್ನಿಸುತ್ತಿಲ್ಲ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ. ಪಾಟೀಲ ಗಣಿಹಾರ ಪ್ರಶ್ನಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೋಂದಣಿ ಮಾಡಿಸುವಂತೆ ಗೃಹ ಸಚಿವ ಪ್ರಿಯಾಂಕ ಖರ್ಗೆಯವರು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತರಿಗೆ ಹೇಳಿದರೆ ನಾವು ನೋಂದಣಿ ಮಾಡಿಸುವ ಅಗತ್ಯವಿಲ್ಲ ಎಂದು ಸಬೂಬು ಹೇಳಿದ್ದಾರೆ. ಆದರೆ ಆರ್‌ಎಸ್‌ಎಸ್‌ನಿಜವಾದ ಚಟುವಟಿಕೆ ಏನಿದೆ?. ಕೈಯಲ್ಲಿ ಲಾಠಿ ಹಿಡಿದು, ಲಾಠಿ ಬೀಸುವುದರಿಂದ ರಾಷ್ಟ್ರದ ಅಭಿವೃದ್ಧಿ ಆಗುತ್ತದೆಯೇ?. ಈ ಹಿಂದೆ ಜಮಖಂಡಿಯಲ್ಲಿ ಮಿಲಿಟರಿಯವರನ್ನು ಕರೆಯಿಸಿ ಬಂದೂಕು ತರಬೇತಿ ಕೊಡಿಸಿದರು. ಚಾರ್‌ಮಿನಾರ್ ಹತ್ತಿರ ಬಾಂಬ್‌ ಬ್ಲಾಸ್ಟ್, ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಬ್ಲಾಸ್ಟ್‌, ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿ ಬಾಂಬ್‌ ಬ್ಲಾಸ್ಟ್, ಮಾಲೆಗಾಂವ ಬಾಂಬ್‌ ಸ್ಫೋಟ, ಗುಜರಾತ ನರಮೇಧಕ್ಕೆಲ್ಲ ಯಾರು ಕಾರಣರು? ಎಂದು ಪ್ರಶ್ನಿಸಿದರು.

1860ರಲ್ಲಿ ನೋಂದಣಿ ಕಾಯ್ದೆ ಜಾರಿಗೆ ಬಂದಿದ್ದು, ಆಗಲೇ ಇವರು ಯಾಕೆ ನೋಂದಣಿ ಮಾಡಿಸಿಲ್ಲ?. ಶಿಕ್ಷಣ ಸಂಸ್ಥೆಗಳ ಹೆಸರಿನಲ್ಲಿ ಬೆಂಗಳೂರು ಸುತ್ತಮುತ್ತ ಯಾರು ಎಷ್ಟು ಆಸ್ತಿ ಹೊಡೆದಿದ್ದಾರೆ ಎಂಬುದು ತನಿಖೆಯಾಗಬೇಕು. 68 ಸಾವಿರ ಶಾಖೆ, ಲಕ್ಷಾಂತರ ಕಾರ್ಯಕರ್ತರು ಹೊಂದಿರುವ ಆರ್‌ಎಸ್‌ಎಸ್‌ ಯಾಕೆ ನೋಂದಾಯಿಸಿಲ್ಲ ಎಂಬುದನ್ನು ಮೋಹನ ಭಾಗವತರು ಉತ್ತರಿಸಬೇಕು. ನರಕದ ಗರ್ಭಗುಡಿಯೊಳಗೆ, ಆರ್‌ಎಸ್‌ಎಸ್‌ ಅಂತರಂಗ, ಆರ್‌ಎಸ್‌ಎಸ್‌ ಆಳ‌ ಮತ್ತು ಅಗಲ ಎಂಬ ಪುಸ್ತಕದಲ್ಲಿ ಆರ್‌ಎಸ್‌ಎಸ್‌ ಹೂರಣವನ್ನೇ ಬಿಚ್ಚಿಡಲಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ನಾಗರಾಜ ಲಂಬು ಮಾತನಾಡಿ, ಪ್ರಿಯಾಂಕ ಖರ್ಗೆ ಗೃಹ ಸಚಿವರಾದ ಮೇಲೆ ಆರ್‌ಎಸ್‌ಎಸ್ ನವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ. ಯಾಕೆಂದರೆ ಯಾವುದೇ ಒಂದು ಸಂಘಟನೆಯಾದರೂ ನೋಂದಣಿ ಮಾಡಿಸಲೇಬೇಕಿದೆ. ಆರ್‌ಎಸ್‌ಎಸ್ ಎಂದರೆ ಭಯದ ವಾತಾವರಣ ಹುಟ್ಟಿಸಿದ ಸಂಘಟನೆಯಾಗಿದೆ. ನೋಂದಣಿ ಮಾಡಿಸದಿದ್ದರೆ ಮುಂದೆ ಅದು ಸಮಸ್ಯೆ ಅನುಭವಿಸಲಿದೆ ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ವಸಂತ ಹೊನಮೊಡೆ ಇದ್ದರು.

ಸಂಸದ ರಮೇಶ ಜಿಗಜಿಣಗಿಯವರು ಪ್ರಿಯಾಂಕ ಖರ್ಗೆ ಆವರನ್ನು ಉದ್ದೇಶಿಸಿ ದಲಿತನಾಗಿ ಆರ್‌ಎಸ್‌ಎಸ್‌ ವಿಚಾರ ಯಾಕೆ ಎಂದು ಪ್ರಶ್ನಿಸಿದ್ದಾರೆ. ಹಾಗಾದರೆ ದಲಿತರು ಆರ್‌ಎಸ್‌ಎಸ್‌ ಬಗ್ಗೆ ಪ್ರಶ್ನಿಸಬಾರದಾ?, ದಲಿತರು ಆರ್‌ಎಸ್‌ಎಸ್‌ ಮುಟ್ಟಿದರೆ ಉಳಿಯಲ್ಲ. ಅದನ್ನು ನಾವು ಒಪ್ಪಿಕೊಳ್ಳಬೇಕು. ಯಾಕೆಂದರೆ ಆರ್‌ಎಸ್‌ಎಸ್‌ ಕೆಣಕಿದ್ದ ಸಾಹಿತಿಗಳಾದ ದಾವಲಕರ, ಪನ್ಸಾರೆ, ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ ಕೊಲೆಗಳಾಗಿವೆ. ಅವುಗಳನ್ನು ಯಾರು ಮಾಡಿದ್ದಾರೆ.

- ಎಸ್.ಎಂ. ಪಾಟೀಲ ಗಣಿಹಾರ ಕೆಪಿಸಿಸಿ ವಕ್ತಾರ