ಮೃತ ನಾರಾಯಣಸ್ವಾಮಿ ಸಂಬಂಧಿಕ ಆಂಜಿನಪ್ಪ ನೀಡಿರುವ ದೂರಿನ ಮೇರೆಗೆ ಮೃತ ನಾರಾಯಣಸ್ವಾಮಿ ಹಾಗೂ ಅವರ ಪತ್ನಿ ಜಗದಾಂಬ ಕಳೆದ ಸುಮಾರು ೧೫ ವರ್ಷದಿಂದ ಹೊಂದಾಣಿಕೆಯಿಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಬೇರೆ ಬೇರೆ ವಾಸಿಸುತ್ತಿದ್ದ ಪತಿ, ತಾಯಿ ಮಗ, ಆಸ್ತಿ ತಮ್ಮ ಹೆಸರಿಗೆ ಬರೆಯುವಂತೆ ಮಗನಿಂದ ಆಗ್ಗಾಗೆ ಜಗಳ ಕೊಲೆಯಲ್ಲಿ ಅಂತ್ಯ
ಕನ್ನಡಪ್ರಭ ವಾರ್ತೆ ಕೋಲಾರತಾಲೂಕಿನ ಚನ್ನಸಂದ್ರದಲ್ಲಿ ಜಮೀನಿಗಾಗಿ ಮನೆಯ ಯಜಮಾನನ್ನೆ ಆತನ ಹೆಂಡತಿ ಹಾಗೂ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.
ಮೃತ ನಾರಾಯಣಸ್ವಾಮಿ ಸಂಬಂಧಿಕ ಆಂಜಿನಪ್ಪ ನೀಡಿರುವ ದೂರಿನ ಮೇರೆಗೆ ಮೃತ ನಾರಾಯಣಸ್ವಾಮಿ ಹಾಗೂ ಅವರ ಪತ್ನಿ ಜಗದಾಂಬ ಕಳೆದ ಸುಮಾರು ೧೫ ವರ್ಷದಿಂದ ಹೊಂದಾಣಿಕೆಯಿಲ್ಲದೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಜಗದಾಂಬ ಬೀಚಗೊಂಡನಹಳ್ಳಿ ಟೋಲ್ ಸಮೀಪ ತಮ್ಮ ಪುತ್ರ ಪ್ರಮೋದ್ರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರೆ, ನಾರಾಯಣಸ್ವಾಮಿ ಚನ್ನಸಂದ್ರದಲ್ಲಿ ವಾಸವಾಗಿದ್ದರು.ನಾರಾಯಣಸ್ವಾಮಿರ ಪತ್ನಿ ಜಗದಾಂಬ ಮತ್ತು ಪುತ್ರ ಪ್ರಮೋದ್ ಕಳೆದ ಸುಮಾರು ಎಂಟು ವರ್ಷದಿಂದ ಪಿತ್ರಾರ್ಜಿತ ಆಸ್ತಿ ಅನುಭವಿಸುತ್ತಿದ್ದು, ಆಗಾಗ್ಗೆ ಪ್ರಮೋದ್ ತನ್ನ ತಂದೆಯ ಬಳಿ ಆಸ್ತಿ ತನ್ನ ಹೆಸರಿಗೆ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದನು. ಇದು ನಾನು ಸ್ವಂತವಾಗಿ ತೆಗೆದುಕೊಂಡಿರುವ ಜಮೀನು ನನ್ನ ಇಷ್ಟ ನಾನು ಯಾರಿಗಾದರೂ ಮಾರಾಟ ಮಾಡುತ್ತೇನೆಂದು ನಾರಾಯಣಸ್ವಾಮಿ ಕೂಡ ಮಾತಿಗೆ ಮಾತು ಬೆರೆಸಿ ಗಲಾಟೆ ಮಾಡುತ್ತಿದ್ದರೆಂದು ಮೂಲಗಳಿಂದ ತಿಳಿದುಬಂದಿದೆ.
ಇದೇ ವೇಳೆ ನಾರಾಯಣಸ್ವಾಮಿ ಚನ್ನಸಂದ್ರ ಸರ್ವೇ ನಂ.೭ರಲ್ಲಿ ತಮ್ಮ ಸ್ವಯಾರ್ಜಿತವಾಗಿದ್ದ ಒಂದು ಎಕರೆ ಜಮೀನನ್ನು ಸುಮಾರು ಐದು ತಿಂಗಳ ಹಿಂದೆ ನಾಗನಾಳ ಗ್ರಾಮದವರಿಗೆ ಮಾರಾಟ ಮಾಡಲು ಒಪ್ಪಂದ ಮಾಡಿಕೊಂಡು, ಮುಂಗಡವಾಗಿ ೩೦ ಲಕ್ಷ ಪಡೆದಿದ್ದರು ಎನ್ನಲಾಗಿದೆ. ಈ ಹಣ ಪಡೆದ ಬಳಿಕ ಪ್ರಮೋದ್ ತನ್ನ ತಂದೆಯೊಂದಿಗೆ ಆಸ್ತಿ ವಿಚಾರವಾಗಿ ಪದೇ ಪದೇ ಗಲಾಟೆ ಮಾಡುತ್ತಿದ್ದಾರೆಂದು ದೂರಿನಲ್ಲಿ ತಿಳಿಸಿದೆ.ಕಳೆದ ವಾರವೂ ನಾರಾಯಣಸ್ವಾಮಿರೊಂದಿಗೆ ಪತ್ನಿ ಹಾಗೂ ಪುತ್ರ ಗಲಾಟೆ ನಡೆಸಿದ್ದರೆ ಎನ್ನಲಾಗಿದ್ದು, ವಿಚಾರ ತಿಳಿದ ಗ್ರಾಮದ ಕೆಲ ಹಿರಿಯ ಮುಖಂಡರು ರಾಜೀ ಪಂಚಾಯಿತಿ ನಡೆಸಿ, ಕುಟುಂಬದ ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವಂತೆ ಬುದ್ಧಿವಾದ ಹೇಳಿದ್ದರು.
ನ್ಯಾಯ ಪಂಚಾಯಿತಿಗೆ ಬೆಲೆ ಕೊಡದ ತಾಯಿ ಮಗ ಮಂಗಳವಾರ ಸಂಜೆ ಸುಮಾರು ೫.೩೦ರ ಊಟದಲ್ಲಿ ಸುಮಾರು ೧೦ ನಿದ್ರೆ ಮಾತ್ರ ಹಾಕಿ, ತದನಂತರ ಆತ ಸುಸ್ತಾಗುತ್ತಿದೆ ಅಂತ ಹೇಳಿದಾಗ ಮಂಚದ ಮೇಲೆ ಮಲಗಿಸಿ ಕೈಕಾಲು ಕಟ್ಟಿ ಹಾಕಿ ಬಟ್ಟೆ ಹಾಕಲು ಕಟ್ಟಿದ್ದ ಹಗ್ಗದಿಂದಲೇ ಇಬ್ಬರು ಸೇರಿ ಕುತ್ತಿಗೆಗೆ ಹಾಕಿ ಎಳೆದು ಕೊಲೆ ಮಾಡಿದ್ದಾರೆ, ಕೊಲೆ ಮಾಡಿದ ನಂತರ ಮಗ ಪ್ರಮೋದ್ ತನಗೆ ಏನು ಗೊತ್ತಿಲ್ಲದಂತೆ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ.ಅಷ್ಟರಲ್ಲಿ ಮೃತ ವ್ಯಕ್ತಿಯ ಹೆಂಡತಿ ವೇಮಗಲ್ ಪೋಲಿಸ್ ಠಾಣೆಗೆ ಆಗಮಿಸಿ ಮಗನನ್ನು ಈ ಕೃತ್ಯದಲ್ಲಿ ಬಚಾವ್ ಮಾಡಲು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ದೂರಿನ ಮೂಲಕ ತನಿಖೆ ಮುಂದುವರೆಸಿದ ವೇಮಗಲ್ ಪೋಲಿಸರು, ಆದರೆ ಇದು ಒಬ್ಬರ ಕೈಯಲ್ಲಿ ಆಗುವುದಿಲ್ಲ ಎಂದು ಅನುಮಾನಗೊಂಡು ತಮ್ಮ ಹಾದಿಯಲ್ಲಿ ಪೋಲೀಸರು ತನಿಖೆ ಮುಂದುವರೆಸಿದಾಗ ಪುತ್ರನ ಪಾತ್ರ ಹಾಗೂ ಸಹಕಾರದ ಬಗ್ಗೆಯೂ ಬಡ ಬಡನೇ ಬಾಯಿ ಬಿಚ್ಚಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ತಾಯಿ ಜಗದಾಂಬ ಹಾಗೂ ಪುತ್ರ ಪ್ರಮೋದ್ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.