ಕಾಡಾನೆ ಹಿಂಡು ದಾಳಿ : ಭಾರಿ ನಷ್ಟ

| Published : Feb 23 2025, 12:31 AM IST

ಸಾರಾಂಶ

ಕಳೆದ ಎರಡು ದಿನಗಳಿಂದ ನಿರಂತರ ಕಾಡಾನೆ ಹಿಂಡು ದಾಳಿ ಮಾಡಿ ಭಾರಿ ನಷ್ಟ ಸಂಭವಿಸಿದೆ. ಸುಮಾರು 100 ಕಾಫಿ ಗಿಡ ಸೇರಿದಂತೆ ಏಲಕ್ಕಿ ಬಾಳೆ ಗಿಡಗಳಿಗೆ ಹಾನಿಯಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಕುಂಜಿಲ ಕಕ್ಕಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪನವರ ಕಾಫಿ ತೋಟಕ್ಕೆ ಕಳೆದೆರಡು ದಿನಗಳಿಂದ ನಿರಂತರ ಕಾಡಾನೆ ಹಿಂಡು ದಾಳಿ ಮಾಡಿ ಭಾರಿ ನಷ್ಟ ಸಂಭವಿಸಿದೆ.

ಕಳೆದ ಎರಡು ದಿನಗಳಿಂದ ರಾತ್ರಿ ದಾಳಿ ಮಾಡಿದ ಕಾಡಾನೆಗಳು ಸುಮಾರು 100 ಕಾಫಿ ಗಿಡ ಸೇರಿದಂತೆ ಏಲಕ್ಕಿ, ಬಾಳೆ ಗಿಡಗಳಿಗೆ ಹಾನಿ ಮಾಡಿ ಸುಮಾರು ಐವತ್ತು ಸಾವಿರ ನಷ್ಟವಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದು ಮೊದಲಲ್ಲ ಈ ಹಿಂದೆಯೂ ಕಾಡಾನೆಗಳ ಹಿಂಡು ಕಾಫಿ ತೋಟಗಳಿಗೆ ದಾಳಿ ಮಾಡಿ ಬಹಳಷ್ಟು ನಷ್ಟ ಸಂಭವಿಸಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಯಾವುದೇ ಪರಿಹಾರ ದೊರೆತಿಲ್ಲ. ಆದ ಕಾರಣ ಕೂಡಲೇ ರೈತರಿಗೆ ನಷ್ಟ ಪರಿಹಾರವನ್ನು ನೀಡಬೇಕು ತಪ್ಪಿದಲ್ಲಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕುಡಿಯರ ಮುತ್ತಪ್ಪ ಎಚ್ಚರಿಸಿದ್ದಾರೆ.

ಯಾವಕಪಾಡಿ ಗ್ರಾಮದಲ್ಲಿರುವ ನನ್ನ ಕಾಫಿ ತೋಟಕ್ಕೆ ಕಾಡಾನೆ ಗುಂಪು ದಾಂದಲೆ ಮಾಡಿ ಸುಮಾರು ಐವತ್ತು

ಸಾವಿರ ರು. ನಷ್ಟ ಸಂಭವಿಸಿದೆ. ನಿರಂತರ ಕಾಡಾನೆ ದಾಳಿ ಮಾಡುತ್ತಿರುವುದರಿಂದ 2 ವರ್ಷಗಳಿಂದ ಪರಿಹಾರಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತೇವೆ. ಈ ಬಗ್ಗೆ ಜಿಪಿಎಸ್ ಮಾಡಿ ಕಳಿಸಲಾಗಿದೆ. ನಾಲ್ಕು ನಾಡು ವ್ಯಾಪ್ತಿಯಲ್ಲಿ ಇದುವರೆಗೆ ಯಾವುದೇ ಪರಿಹಾರ ಬಂದಿಲ್ಲ. ಈ ಬಗ್ಗೆ ಮಾರ್ಚ್ 31ರ ಒಳಗೆ ಎಲ್ಲ ನೀಡುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ತಪ್ಪಿದ್ದಲ್ಲಿ ಮಡಿಕೇರಿ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ತೀವ್ರತರದ ಪ್ರತಿಭಟನೆ ನಡೆಸಲಾಗುವುದು.

ಕುಡಿಯರ ಮುತ್ತಪ್ಪ ಕಕ್ಕಬೆ, ಯಾವಕಪಾಡಿ ಗ್ರಾಮ