ಕಾಡಾನೆ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಕೆ ।

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಚಿಕ್ಕಮಗಳೂರು ತಾಲ್ಲೂಕಿನ ಹುಣಸೇಹಳ್ಳಿ ಬಳಿಯ ಹ್ಯಾರಂಬಿ ಪುರ ಗ್ರಾಮದಲ್ಲಿರುವ ಎರಡು ಕಾಡಾನೆಗಳ ಪೈಕಿ ಒಂದು ಕಾಡಾನೆ ಸೆರೆ ಕಾರ್ಯಾಚರಣೆ ಗುರುವಾರದಿಂದ ಪುನಾರಂಭಗೊಳ್ಳಲಿದೆ.ಹ್ಯಾರಂಬಿ ಪುರ ಗ್ರಾಮದಲ್ಲಿ ಓರ್ವ ಕಾರ್ಮಿಕನನ್ನು ಬಲಿ ಪಡೆದ ಬಳಿಕ ಹಂತಕ ಒಂದು ಕಾಡಾನೆ ಸೆರೆ ಹಿಡಿಯಬೇಕು ಹಾಗೂ ಒಂದು ಕಾಡಾನೆ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಕೆಗೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳಿಂದ ಆದೇಶ ದೊರೆತಿದ್ದು, ಕಾರ್ಯಾಚರಣೆ ಹಂತದಲ್ಲೆ ಭಾನುವಾರ ಮತ್ತೊಬ್ಬ ಮಹಿಳೆಯನ್ನು ಕಾಡಾನೆ ತುಳಿದು ಸಾಯಿಸಿತ್ತು. ಮಹಿಳೆ ಮೃತಪಟ್ಟ ಅರ್ಧ ಗಂಟೆಯೊಳಗೆ ಅರಣ್ಯ ಇಲಾಖೆ ಸಿಬ್ಬಂದಿ, ವೈದ್ಯರು ಹಂತಕ ಕಾಡಾನೆ ಸೆರೆ ಹಿಡಿಯುವಲ್ಲಿ ಯಶಸ್ವಿ ಯಾಗಿದ್ದರು. ಸೆರೆಯಾದ ಕಾಡಾನೆಯನ್ನು ಭಾನುವಾರವೇ ಸಕ್ರೆಬೈಲು ಆನೆ ಬಿಡಾರದ ಕ್ರಾಲ್‌ಗೆ ಕಳುಹಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಇದೀಗ ಇನ್ನುಳಿದ 2 ಆನೆಗಳ ಪೈಕಿ ಒಂದು ಕಾಡಾನೆ ಸೆರೆ ಹಿಡಿದು ರೆಡಿಯೋ ಕಾಲರ್ ಅಳವಡಿಕೆ ಮಾಡುವ ಕೆಲಸ ಬಾಕಿಯಿದ್ದು, 3 ದಿನಗಳ ಕಾಲ ವಿವಿಧ ಬಿಡಾರಗಳಿಂದ ಆಗಮಿಸಿದ್ದ ಕುಮ್ಕಿ ಆನೆಗಳಿಗೆ ಬಿಡುವು ನೀಡಲಾಗಿತ್ತು. ಅರವಳಿಕೆ ತಜ್ಞರು ಬುಧವಾರ ಹುಣಸೇಹಳ್ಳಿ ಗ್ರಾಮಕ್ಕೆ ಆಗಮಿಸಿದ್ದು ಗುರುವಾರದಿಂದ ಕಾರ್ಯಾಚರಣೆ ಪುನಾರಂಭಗೊಳ್ಳಲಿದೆ.

ಸೆರೆ ಹಿಡಿದ ಒಂದು ಆನೆಗೆ ರೆಡಿಯೋ ಕಾಲರ್ ಅಳವಡಿಸಲಾಗುವುದು. ಸೆರೆ ಹಿಡಿದ ಆನೆಯನ್ನು ಬೇರೆಡೆಗೆ ಸ್ಥಳಾಂತರ ಅನುಮತಿ ದೊರೆಯಬಹುದು ಎಂಬ ನಿರೀಕ್ಷೆಯಿದೆ. ಮತ್ತೊಂದು ಆನೆ ಚಲನವಲನಗಳನ್ನು ಗಮನಿಸಲಾಗುವುದು ಎಂದು ಬಾಳೆಹೊನ್ನೂರು ಎಸಿಎಫ್ ಮೋಹನ್‌ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.


ಕುಮ್ಕಿ ಆನೆಗಳ ವೀಕ್ಷಣೆಗೆ ಜನ: ಹುಣಸೇಹಳ್ಳಿ-ಜೇನುಗದ್ದೆ ಸಮೀಪ ವಿಶ್ರಾಂತಿ ಪಡೆಯುತ್ತಿರುವ ವಿವಿಧ ಬಿಡಾರಗಳ ಕುಮ್ಕಿ ಆನೆಗಳ ವೀಕ್ಷಣೆಗೆ ಸ್ಥಳೀಯರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಕಾರ್ಯಾಚರಣೆಗೆ ಬಂದಿರುವ ಮೈಸೂರು ದಸರಾ ಆನೆಗಳನ್ನು ಕಣ್ತುಂಬಿಕೊಂಡು ಹಲವರು ಸಂತಸಪಟ್ಟಿದ್ದಾರೆ. ವಿವಿಧೆಡೆ ಆನೆ ಪ್ರತ್ಯಕ್ಷ: ಒಂದೇ ವಾರದಲ್ಲಿ ಇಬ್ಬರನ್ನು ಹ್ಯಾರಂಬಿ ಪುರಗ್ರಾಮದಲ್ಲಿ ಆನೆ ಬಲಿ ಪಡೆದ ಬಳಿಕ, ಬಾಳೆ ಹೊನ್ನೂರು- ಚಿಕ್ಕಮಗಳೂರು ರಸ್ತೆ ಎಲೆಕಲ್ಲು ಅರಣ್ಯ ಪ್ರದೇಶದ ಬಳಿ ದೈತ್ಯ ಕಾಡಾನೆ ಪ್ರತ್ಯಕ್ಷವಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ.ಈ ಕಾಡಾನೆ ಹಲವು ವರ್ಷಗಳಿಂದ ಈ ಭಾಗದಲ್ಲಿ ಸಂಚರಿಸುತ್ತಿದ್ದು, ಮುಖ್ಯರಸ್ತೆ ಬದಿಯಲ್ಲಿ ಆಗಾಗ ವಾಹನ ಸವಾರರು, ಪ್ರಯಾಣಿಕರಿಗೆ ಕಂಡುಬರುತಿದೆ. ಎಲೆಕಲ್ಲು-ಅಂಡವಾನೆ ರಸ್ತೆ ಬಳಿಯೂ ಒಂದು ಕಾಡಾನೆ ರಸ್ತೆ ದಾಟುತ್ತಿ ರುವುದನ್ನು ಪ್ರಯಾಣಿಕರೊಬ್ಬರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.

೨೫ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ಎಲೆಕಲ್ಲು-ಅಂಡವಾನೆ ಬಳಿ ರಸ್ತೆ ದಾಟುತ್ತಿದ್ದ ಕಾಡಾನೆ.

೨೫ಬಿಹೆಚ್‌ಆರ್ ೫: ಬಾಳೆಹೊನ್ನೂರು ಸಮೀಪದ ಹುಣಸೇಹಳ್ಳಿ ಜೇನುಗದ್ದೆ ಬಳಿ ವಿಶ್ರಾಂತಿಯಲ್ಲಿರುವ ಕುಮ್ಕಿ ಆನೆಗಳು.