ಸಾರಾಂಶ
ಟೀ ಅಂಗಡಿ ಮೇಲೆ ಕಾಡಾನೆ ದಾಳಿ ಮಾಡಿದ್ದು, ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಟೀ ಅಂಗಡಿ ಮೇಲೆ ಕಾಡಾನೆ ದಾಳಿ ಮಾಡಿದ್ದು, ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ವಿರಾಜಪೇಟೆ ತಾಲೂಕಿನ ಸಿದ್ದಾಪುರ ಸಮೀಪದ ನೆಲ್ಯಹುದಿಕೇರಿಯಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲ ತೋಟದಿಂದ ಮರಿಯೊಂದಿಗೆ ರಸ್ತೆ ದಾಟಿದ ಕಾಡಾನೆ ಪಕ್ಕದಲ್ಲಿದ್ದ ಟೀ ಅಂಗಡಿ ಮೇಲೆ ದಾಳಿ ಮಾಡಿದೆ. ಅಂಗಡಿಯಲ್ಲಿದ್ದ ಜಬ್ಬಾರ್ ಹಾಗೂ ಪತ್ನಿ ಇದ್ದರು. ಕಾಡಾನೆ ಅಂಗಡಿಯಲ್ಲಿದ್ದ ತಿಂಡಿ ಪದಾರ್ಥಗಳನ್ನು ಹಾಗೂ ಸಾಮಾಗ್ರಿಗಳನ್ನು ಎಳೆದು ಬಿಸಾಡಿದೆ. ದಂಪತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಕಾಡಾನೆ ದಾಳಿಯಿಂದ ಪಾರಾಗಲು ಯತ್ನಿಸಿದ ಜಬ್ಬಾರ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಕ್ಕದಲ್ಲಿರುವ ಸಾರ್ವಜನಿಕ ಬಸ್ ನಿಲ್ದಾಣದಲ್ಲಿದ್ದವರು ಕಿರುಚಾಡಿದಾಗ ನಲ್ವತೇಕ್ರೆ ಮಾರ್ಗವಾಗಿ ಕಾಡಾನೆ ದಾಟಿದೆ. ಇದೇ ರಸ್ತೆ ಮಾರ್ಗವಾಗಿ ಬರುತ್ತಿದ್ದ ಕಾರಿನ ಮೇಲೆ ಸಹ ದಾಳಿ ಮಾಡಲಾಗಿದೆ ಎನ್ನಲಾಗಿದೆ.ವಿದ್ಯಾರ್ಥಿಗಳು ಶಾಲೆಗೆ ತೆರಳುವ ಸಮಯವಾಗಿದ್ದರಿಂದ ಸ್ಥಳೀಯರು ಭಯಬೀತರಾಗಿದ್ದಾರೆ. ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ವೇಮನ ತತ್ವ ಸಿದ್ಧಾಂತ ಇಂದಿಗೂ ಪ್ರಸ್ತುತ: ಲೋಕೇಶ್ ಸಾಗರ್ಮಡಿಕೇರಿ: ಮಹಾಯೋಗಿ ವೇಮನ ತ್ಯಾಗಿ ಜೀವಿ. ವಚನ ಸಾಹಿತ್ಯದ ಮೂಲಕ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಮಹಾನ್ ಚೇತನ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಹೇಳಿದ್ದಾರೆ.ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಗಾಂಧಿ ಭವನದಲ್ಲಿ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.ರಾಷ್ಟ್ರಕಂಡ ಖ್ಯಾತ ಸಂತರು, ದಾರ್ಶನಿಕರು, ತಾವು ಕಂಡ ಅನುಭವಿಸಿದ ಸತ್ಯವನ್ನು ಆಡು ಭಾಷೆಯಲ್ಲಿ ವಚನಗಳ ಮೂಲಕ ತಿಳಿಸಿದ್ದಾರೆ ಎಂದರು.ಅವುಗಳಲ್ಲಿ ಆಡಂಬರವಿಲ್ಲ, ವೈಭವೀಕರಣವಿಲ್ಲ, ಎಲ್ಲವೂ ನೇರ ಮತ್ತು ಸ್ಟಷ್ಟ ಸ್ಥಾಪಿತ ಧರ್ಮ. ಅವರ ಕಾವ್ಯದಲ್ಲಿ ಮಡಿಮೈಲಿಗೆ, ಪಾಪ ಪುಣ್ಯ, ಮೇಲು ಕೀಳು ಎಂಬ ಭಾವನೆ ಖಂಡಿಸಿದ್ದಾರೆ. ಸಕಲ ಧರ್ಮಗಳ ಸಹಭಾಗಿತ್ವದಲ್ಲಿ ಸಮಾಜ ಸಮಾನತೆ ಕಾಣಬೇಕಾಗಿದೆ ಎಂದರು.ಜನಸಾಮಾನ್ಯರಲ್ಲಿರುವ ಮೌಢ್ಯ ತೊಡೆದು, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸರಳವಾದ ಉಪದೇಶ ನೀಡಿದ್ದಾರೆ ಎಂದು ಮಹಾಯೋಗಿ ವೇಮನರ ಜೀವನ ಸಾಧನೆ ಕುರಿತಂತೆ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ವಿದ್ವಾನ್ ಬಿ.ಸಿ.ಶಂಕರಯ್ಯ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿದರು. ಮಣಜೂರು ಮಂಜುನಾಥ್ ವಂದಿಸಿದರು.