ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಮದಲಾಪುರ ಗ್ರಾಮಕ್ಕೆ ಬುಧವಾರ ಬೆಳ್ಳಂಬೆಳಗ್ಗೆ ನುಗ್ಗಿದ ಒಂಟಿ ಸಲಗ ಗ್ರಾಮಸ್ಥರನ್ನು ಭಯಭೀತಿಗೊಳಿಸಿತು.ಮಂಗಳವಾರ ರಾತ್ರಿ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಡಾನೆ ರಾತ್ರಿಯಿಡೀ ಬೀಡು ಬಿಟ್ಟಿದೆ. ಬೆಳಗ್ಗೆ ಊರೊಳಗೆ ಲಗ್ಗೆಯಿಟ್ಟು ಲೋಕೇಶ್ ಅವರ ಕಾಫಿ ತೊಟಕ್ಕೆ ಹೋಗಿ ನಿಂತಿದೆ. ಗ್ರಾಮಸ್ಥರ ಕಿರುಚಾಟದಿಂದ ಗೀಳಿಟ್ಟು ಗಾಬರಿಗೊಂಡು ಮನೆ ಮುಂದೆ ನಿಂತಿದ್ದ ಬೈಕ್ ತುಳಿದು ದಾಂಧಲೆ ನಡೆಸಿತು. ಜನವಸತಿ ಇರುವ ಊರೊಳಗೆ ಕೆಲಕಾಲ ಅಡ್ಡಾಡಿದ ಕಾಡಾನೆ ಕಂಡು ನಿವಾಸಿಗಳು ಮನೆಯೊಳಗೆ ಓಡಿದರು. ಜನರ ಕಿರುಚಾಟ ಹೆಚ್ಚುತ್ತಿದ್ದಂತೆ ಗ್ರಾಮದಿಂದ ಕಾಲ್ಕಿತ್ತು ಕಾಫಿ ತೋಟದತ್ತ ಸಾಗಿತು. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕಾಗಮಿಸಿ ಆನೆಯನ್ನು ಕಾಡಿಗಟ್ಟಲು ಯತ್ನಿಸುತ್ತಿದ್ದಾರೆ.ಕಳೆದ ಕೆಲ ತಿಂಗಳಿಂದ ಆಹಾರಕ್ಕಾಗಿ ಅಲೆದಾಟ ನಡೆಸುತ್ತಿರುವ ಕಾಡಾನೆಗಳು ಈ ಭಾಗದಲ್ಲಿ ಕಾಫಿ ತೋಟಗಳಿಗೆ ನುಗ್ಗಿ ಬೆಳೆಗಳನ್ನು ತುಳಿದು ತಿಂದು ನಾಶಪಡಿಸುತ್ತಿವೆ. ಬೆಳಂ ಬೆಳಗ್ಗೆ ಊರಿಗೆ ನುಗ್ಗಿ ಜನರು ಜಮೀನು ತೋಟಗಳತ್ತ ತೆರಳಲು ಭಯ ಪಡುವಂತಾಗಿದೆ. ಕಾಡಾನೆಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಆಗಬೇಕು ಎಂದು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಆಗ್ರಹಿಸಿದ್ದಾರೆ.