ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಮಲ್ಲಿಪಟ್ಟಣ ಹೋಬಳಿಯ ಪಾರಸನಹಳ್ಳಿ ಗ್ರಾಮದಲ್ಲಿ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಮರಗಳನ್ನು ಮುರಿದು ನಾಶಪಡಿಸಿವೆ.ಕೊಡಗಿನ ಕಟ್ಟೇಪುರ ಅರಣ್ಯ ಪ್ರದೇಶದ ಕಡೆಯಿಂದ ಶುಕ್ರವಾರ ರಾತ್ರಿ ಪಾರಸನಹಳ್ಳಿಯತ್ತ ಲಗ್ಗೆ ಇಟ್ಟಿರುವ ಮೂರು ಕಾಡಾನೆಗಳು ಶಾರದಮ್ಮ ಎಂಬುವರಿಗೆ ಸೇರಿದ 50 ಅಡಿಕೆ ಮರಗಳನ್ನು ಮನಬಂದಂತೆ ಮುರಿದು ನೆಲಕ್ಕುರುಳಿಸಿವೆ.ಕೆಲ ದಿನಗಳಿಂದ ಕಟ್ಟೇಪುರ ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಸಂಜೆಯಾದೊಡನೆ ಪಾರಸನಹಳ್ಳಿ, ದಾಸನಪುರ ಸೇರಿದಂತೆ ಮಲ್ಲಿಪಟ್ಟಣ ಹೋಬಳಿಯ ಕಾಡಂಚಿನ ಬೆಳೆ ಪ್ರದೇಶದತ್ತ ನುಗ್ಗಿ ದಾಳಿ ನಡೆಸುತ್ತಿವೆ. ಕಷ್ಟಪಟ್ಟು ಬೆಳೆದ ಬೆಳೆಗಳನ್ನು ತುಳಿದು ತಿಂದು ಹಾನಿಪಡಿಸುತ್ತಿದ್ದು ದಿಕ್ಕು ತೋಚದ ಪರಿಸ್ಥಿತಿಗೆ ಸಿಲುಕಿದ್ದೇವೆ ಎಂದು ಗ್ರಾಮಸ್ಥರು ಅವಲತ್ತುಕೊಂಡಿದ್ದಾರೆ.ಕಳೆದ ವರ್ಷ ಕಾಡಾನೆಗಳು ದಾಳಿ ನಡೆಸಿ 150 ಅಡಿಕೆ ಮರಗಳು ಮುರಿದು ನಾಶಪಡಿಸಿದ್ದವು. ಪರಿಹಾರಕ್ಕಾಗಿ ಮನವಿ ಸಲ್ಲಿಸಿ ಅಲೆದಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಅರಣ್ಯ ಇಲಾಖೆ ಮೇಲಾಧಿಕಾರಿಗಳು ಹಾಗೂ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿ ಮನವಿ ಮಾಡಿದರೂ ಬೆಳೆ ನಷ್ಟದ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಇದೀಗ ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೀಡಾಗಿದ್ದೇವೆ. ಇದರ ಜತೆಗೆ ಗಾಯದ ಮೇಲೆ ಬರೆ ಎಳೆದಂತೆ ಮತ್ತೆ ಕಾಡಾನೆಗಳು ದಾಳಿ ನಡೆಸಿ ಅಡಿಕೆ ಮರಗಳನ್ನು ಸಿಗಿದು ನಾಶಪಡಿಸಿವೆ. ಕಾಡಾನೆಗಳ ದಾಳಿಯಿಂದ ಇತ್ತ ಪರಿಹಾರವೂ ದೊರೆಯುತ್ತಿಲ್ಲ, ಕಾಡನೆಗಳ ಹಾವಳಿಯನ್ನು ನಿಯಂತ್ರಿಸುತ್ತಿಲ್ಲ ಎಂದು ರೈತ ಮನು ಅಳಲು ತೋಡಿಕೊಂಡಿದ್ದಾರೆ.