ಸಾರಾಂಶ
ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಕೃಷಿಕರು ಒತ್ತಾಯಿಸುತ್ತಿದ್ದಾರೆ.
ಬೆಳ್ತಂಗಡಿ; ಧರ್ಮಸ್ಥಳ ಗ್ರಾಮದ ನೇರ್ತನೆಯಲ್ಲಿ ಕಾಡಾನೆಗಳು ನಿರಂತರವಾಗಿ ಕೃಷಿಭೂಮಿಗೆ ನುಗ್ಗಿ ಕೃಷಿಗೆ ಹಾನಿ ಉಂಟು ಮಾಡುತ್ತಿವೆ. ಕಳೆದ ಎರಡು ಮೂರು ದಿನಗಳಿಂದ ಕಾಡಾನೆಗಳ ಉಪಟಳ ತೀವ್ರಗೊಂಡಿದೆ.
ನೇರ್ತನೆ ನಿವಾಸಿ ತಂಗಚ್ಚನ್ ಎನ್.ಪಿ. ಎಂಬವರ ತೋಟದಕ್ಕೆ ನುಗ್ಗಿದ ಕಾಡಾನೆಗಳ ಹಿಂಡು ಹತ್ತಕ್ಕೂ ಅಧಿಕ ತೆಂಗಿನ ಗಿಡಗಳನ್ನು ಸಂಪೂರ್ಣವಾಗಿ ನಾಶಗೊಳಿಸಿದೆ. ಇಲ್ಲಿನ ನಿವಾಸಿ ಜೀಸೆಫ್. ಪಿ.ಕೆ ಎಂಬವರ ತೋಟಕ್ಕೂ ಕಾಡಾನೆ ನುಗ್ಗಿ ಅಡಕೆ ಹಾಗೂ ತೆಂಗಿನ ಗಿಡಗಳಿಗೆ ಹಾನಿಯುಂಟುಮಾಡಿದೆ.
ಒಂದು ಮರಿಯಾನೆ ಸಹಿತ ಮೂರು ಆನೆಗಳು ಈ ಹಿಡಿನಲ್ಲಿದ್ದು ಸಂಜೆಯಾಗುವಾಗಲೇ ಕಾಡಾನೆಗಳು ತೋಟಗಳಿಗೆ ನುಗ್ಗುತ್ತಿದೆ.ಹಗಲು ಹೊತ್ತಿನಲ್ಲಿಯೂ ಕಾಡಾನೆಗಳು ತೋಟಗಳ ಪರಿಸರದಲ್ಲಿ ಕಾಣಿಸುತ್ತಿದೆ. ಇದು ಜನರಲ್ಲಿ ಭಯ ಮೂಡಿಸಲು ಕಾರಣವಾಗಿದೆ. ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಕೃಷಿಕರು ಒತ್ತಾಯಿಸುತ್ತಿದ್ದಾರೆ.