ಸಾರಾಂಶ
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಹಾಗೂ ಹೊಸ ಕೇಂದ್ರಗಳನ್ನು ತೆರೆಯುವುದನ್ನು ನಿಲ್ಲಿಸಿರುವ ರಾಜ್ಯ ಸರ್ಕಾರದ ಸರ್ಕಾರಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯದ ಮುಂದೆ ಸರ್ಕಾರ ಮಂಡಿಯೂರಿದೆಯೇ? ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಶ್ನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೈಂದೂರು
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಹಾಗೂ ಹೊಸ ಕೇಂದ್ರಗಳನ್ನು ತೆರೆಯುವುದನ್ನು ನಿಲ್ಲಿಸಿರುವ ರಾಜ್ಯ ಸರ್ಕಾರದ ಸರ್ಕಾರಿ ಆಸ್ಪತ್ರೆಗಳ ಮೆಡಿಕಲ್ ಮಾಫಿಯದ ಮುಂದೆ ಸರ್ಕಾರ ಮಂಡಿಯೂರಿದೆಯೇ? ಎಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಪ್ರಶ್ನಿಸಿದ್ದಾರೆ.ಪ್ರಸ್ತುತ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳಲ್ಲಿ ಉತ್ತಮ ಗುಣಮಟ್ಟದ ಜನರಿಕ್ ಔಷಧಿಗಳು ಅತ್ಯಂತ ಕಡಿಮೆ ದರದಲ್ಲಿ ಬಡರೋಗಿಗಳಿಗೆ ದೊರಕುತ್ತಿವೆ. ಆದರೆ ದಿನನಿತ್ಯ ಬಳಸುವ ಮಧುಮೇಹ, ರಕ್ತದೊತ್ತಡ ಮುಂತಾದ ತೊಂದರೆಗಳಿರುವವರಿಗೆ ಅತೀ ಅಗ್ಗದ ದರದಲ್ಲಿ ದೊರೆಯುವ ಔಷಧಿಗಳನ್ನು ಸಿಗದಂತೆ ರಾಜ್ಯ ಸರ್ಕಾರ ಮಾಡುವುದಕ್ಕೆ ಹೊರಟಿರುವುದು ಖಂಡನೀಯ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಔಷಧಿ ನೀಡಲಾಗುತ್ತದೆ ಹಾಗಾಗಿ ಜನೌಷಧಿ ಕೇಂದ್ರಗಳ ಅಗತ್ಯವಿಲ್ಲ ಎಂದು ಹೇಳುವ ಸರ್ಕಾರ, ಪ್ರಸ್ತುತ ಸರ್ಕಾರಿ ಆಸ್ಪತ್ರೆಗಳಲ್ಲಿ ಅನೇಕ ಔಷಧಿಗಳು ಲಭ್ಯವಿಲ್ಲದೇ ರೋಗಿಗಳು ಪರದಾಡುತಿದ್ದಾರೆ. ಮೊದಲು ಅವುಗಳ ಪೂರೈಕೆಗೆ ಸರ್ಕಾರ ಗಮನ ಹರಿಸಲಿ. ಮುಂದೆ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಔಷಧಗಳು ಸಮರ್ಪಕವಾಗಿ ನೀಡಲಿ ಎಂದವರು ಹೇಳಿದ್ದಾರೆ.
ಸರ್ಕಾರಕ್ಕೆ ನಿಜವಾಗಿಯೂ ಜನಸಾಮಾನ್ಯರ ಆರೋಗ್ಯದ ವಿಚಾರದಲ್ಲಿ ಬದ್ಧತೆ ಇದ್ದರೆ ನಕಲಿ ಮಾತ್ರೆ, ಔಷಧಿ ಜಾಲಗಳನ್ನು, ನಕಲಿ ಕ್ಲಿನಿಕ್ಗಳನ್ನು ಮೊದಲು ಮಟ್ಟ ಹಾಕಲಿ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳು ವೈದ್ಯರು ಹಾಗೂ ಅಗತ್ಯ ಸಿಬ್ಬಂದಿ ಕೊರತೆ, ಸಿಬ್ಬಂದಿ ಕಡಿತದಿಂದ ನಲುಗುತ್ತಿದ್ದು, ಜನಸಾಮಾನ್ಯರು ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗದೇ ನರಕ ಯಾತನೆ ಅನುಭವಿಸುತ್ತಿದ್ದಾರೆ. ಇಂತಹ ಆಪತ್ಕಾಲಕ್ಕೆ ಆಸ್ಪತ್ರೆಯ ಪರಿಸರದಲ್ಲಿಯೇ ಕಡಿಮೆ ದರದಲ್ಲಿ ಗುಣಮಟ್ಟದಲ್ಲಿ ಔಷಧಿಗಳು ಸಿಗದಂತೆ ಮಾಡಲು ಹೊರಟಿರುವ ಸರ್ಕಾರ ಬಡರೋಗಿಗಳ ಜೀವದೊಂದಿಗೆ ಚೆಲ್ಲಾಟವಾಡಲು ಹೊರಟಿದೆ. ಇದು ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯಾಗಿದೆ. ಹಾಗಾಗಿ ಸರ್ಕಾರ ಈ ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಶಾಸಕ ಗಂಟಿಹೊಳೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.