ಸಾರಾಂಶ
- ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ । ಹೈಟೆಕ್ ಶೌಚಾಲಯ ಕಳಪೆ ವಿರುದ್ಧ ಕ್ರಮಕ್ಕೆ ಸೂಚನೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳೆ, ಗಾಳಿಯಿಂದ ಬೆಳೆ ಹಾನಿಯಾದ ತೋಟಗಳಿಗೆ ಶಾಸಕ ಕೆ.ಎಸ್. ಬಸವಂತಪ್ಪ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸೋಮವಾರ ರಾತ್ರಿ ಮಳೆ, ಗಾಳಿಗೆ ಅಣಬೇರು ಗ್ರಾಮದ ರೈತರ ತೋಟಗಳಲ್ಲಿ ಫಲಕ್ಕೆ ಬಂದ ಸುಮಾರು 150ರಿಂದ 200 ಅಡಕೆ ಮರಗಳು ಧರೆಗುರುಳಿವೆ. ತೋಟಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಬಸವಂತಪ್ಪ ಸಂತ್ರಸ್ತ ರೈತರಿಂದ ಸಮಸ್ಯೆ ಆಲಿಸಿದರು.ಮಳೆ, ಗಾಳಿಗೆ ಅಡಕೆ ಮರಗಳು ನೆಲಕ್ಕುರುಳಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಸರ್ಕಾರದಿಂದ ಪರಿಹಾರ ಕೊಡಿಸುವಂತೆ ರೈತರು ಶಾಸಕರಿಗೆ ಮನವಿ ಮಾಡಿದರು. ಸ್ಪಂದಿಸಿದ ಶಾಸಕರು, ಹಾನಿಗೀಡಾದ ತೋಟಗಳಿಗೆ ಭೇಟಿ ನೀಡಿ ಬೆಳೆನಷ್ಟ ವರದಿ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸುವ ಮೂಲಕ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಸಂಪರ್ಕಿಸಿ ಸೂಚನೆ ನೀಡಿದರು.
ಕ್ಷೇತ್ರದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಆದರೆ ಈ ಬಾರಿ ಬರಗಾಲ ಎದುರಾಗಿ ರೈತರು ಕಂಗಾಲಾಗಿದ್ದಾರೆ. ಆದರೂ, ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ ವಿಮೆ ಪಾವತಿಸಿದರೆ, ಇನ್ನು ಕೆಲವು ಗ್ರಾಪಂಗಳಲ್ಲಿ ವಿಮೆ ಪಾವತಿಸಿಲ್ಲ. ಈಗ ಗಾಳಿ, ಮಳೆಗೆ ಬೆಳೆ ಹಾನಿಗೀಡಾದ ರೈತರು ಬೆಳೆ ವಿಮೆ ಕಟ್ಟಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಂದ ಬೆಳೆ ಹಾನಿ ವರದಿ ತರಿಸಿಕೊಂಡು ಬೆಳೆ ವಿಮೆ ಪಾವತಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.ಬಳಿಕ ಗ್ರಾಮದ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕರು, ಪರಿಶೀಲನೆ ನಡೆಸಿದರು. ಶಾಲೆ ಕೊಠಡಿಗಳಲ್ಲಿ ಶಿಥಿಲಗೊಂಡು ಆರ್ಸಿಸಿ ಕಟ್ಟಡದಲ್ಲಿ ಚಕ್ಕಳ ಕಿತ್ತುಬಂದಿವೆ. ಇದರಿಂದ ಮಳೆ ಬಂದಾಗ ಕಟ್ಟಡ ಸೋರುತ್ತಿವೆ ಎಂದು ಗ್ರಾಮಸ್ಥರು ಶಾಸಕರಿಗೆ ಶಾಲೆ ಸಮಸ್ಯೆ ಬಿಚ್ಚಿಟ್ಟರು.
ಹೈಟೆಕ್ ಶೌಚಾಲಯ ಕಳಪೆ:ಇದೇ ಸಂದರ್ಭ ಶಾಲೆ ಆವರಣದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಹೈಟೆಕ್ ಶೌಚಾಲಯ ಕಾಮಗಾರಿಯನ್ನೂ ಶಾಸಕ ಬಸವಂತಪ್ಪ ಪರಿಶೀಲಿಸಿದರು. ಈ ವೇಳೆ ಹೈಟೆಕ್ ಶೌಚಾಲಯ ನಿರ್ಮಾಣ ಕಾಮಗಾರಿ ಕಳಪೆ ಆಗಿರುವುದನ್ನು ಕಂಡು ಗುತ್ತಿಗೆದಾರನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಕಳಪೆ ಕಾಮಗಾರಿ ಕುರಿತು ಮಾಹಿತಿ ನೀಡಿ, ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರನಿಗೆ ಸೂಚನೆ ನೀಡಬೇಕು. ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡುವುದಾಗಿ ತಿಳಿಸಿದರು.
ಈ ಸಂದರ್ಭ ಅಣಬೇರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬುಡೆನ್ ಸಾಬ್, ಸದಸ್ಯ ಮಹಾರುದ್ರಪ್ಪ, ಜಾಫರ್ ಶರೀಫ್, ರೈತರು, ಗ್ರಾಮಸ್ಥರು ಹಾಜರಿದ್ದರು.- - -
ಬಾಕ್ಸ್ ರೈತನಿಗೆ ಧೈರ್ಯ ಹೇಳಿದ ಶಾಸಕ ಮಳೆ ಕೊರತೆ, ಬೋರ್ವೆಲ್ನಲ್ಲಿ ನೀರು ಕುಸಿತದಿಂದ ಅಡಕೆ ಮರಗಳು ಒಣಗುವುದನ್ನು ಕಂಡು ಬೇಸತ್ತ ಹೊನ್ನಾಯಕನಹಳ್ಳಿ ಗ್ರಾಮದ ರೈತ ಶಾಸ್ತ್ರಿಹಳ್ಳಿ ಬಸವರಾಜಪ್ಪ 2 ಎಕರೆಯಲ್ಲಿ ಬೆಳೆದಿದ್ದ ಅಡಕೆ ಮರಗಳನ್ನು ಕಡಿದು ಸುಟ್ಟುಹಾಕಿದ್ದರು. ಈ ವಿಷಯ ತಿಳಿದ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ, ರೈತ ಬಸವರಾಜಪ್ಪ ಹಾಗೂ ಕುಟುಂಬಕ್ಕೆ ಧೈರ್ಯ ತುಂಬಿದರು. ಗ್ರಾಮದ ಎಚ್.ಡಿ. ಕಿರಣಕುಮಾರ್, ದೇವೇಂದ್ರಪ್ಪ, ಸಿದ್ದೇಶ್, ಹನುಮಂತಪ್ಪ, ಸಿದ್ದಪ್ಪ ಇದ್ದರು.- - - -14ಕೆಡಿವಿಜಿ34ಃ:
ಬೋರ್ನಲ್ಲಿ ನೀರಿಲ್ಲದೇ ಅಡಕೆ ಮರಗಳನ್ನು ಕಡಿದು ಸುಟ್ಟು ಹಾಕಿದ ದಾವಣಗೆರೆ ತಾಲೂಕು ಹೊನ್ನಾಯಕನಹಳ್ಳಿ ಗ್ರಾಮದ ರೈತನ ಹೊಲಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. -14ಕೆಡಿವಿಜಿ35ಃ:ಮಾಯಕೊಂಡ ವ್ಯಾಪ್ತಿಯ ಹೊನ್ನಾಯಕನಹಳ್ಳಿಯಲ್ಲಿ ಶಿಥಿಲಗೊಂಡ ಸರ್ಕಾರಿ ಪ್ರೌಢಶಾಲೆಗೆ ಶಾಸಕ ಕೆ.ಎಸ್. ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.