ಕನ್ನಡಪ್ರಭ ವಾರ್ತೆ ಹೊನ್ನಾಳಿ

ಮನುಷ್ಯ ಹೆಚ್ಚು ರಾಸಾಯನಿಕ ವಸ್ತುಗಳನ್ನು ಭೂಮಿಗೆ ಹಾಕುತ್ತಿರುವುದರಿಂದ,ಮರಗಿಡಗಳನ್ನು ಕಡಿಯುತ್ತಿರುವುದರಿಂದ ಪರಿಸರ ನಾಶವಾಗುತ್ತಿದ್ದು, ಇದರಿಂದ ತಾಪಮಾನ ಹೆಚ್ಚಾಗಿ ಮನುಷ್ಯ ಮಳೆಗಾಲದಲ್ಲೂ ಮನೆಗಳಲ್ಲಿ ಫ್ಯಾನ್ ಹಾಕಿಕೊಳ್ಳುವ ಪರಸ್ಥಿತಿ ಬಂದಿದೆ ಎಂದು ಹೊನ್ನಾಳಿ ಜೆ.ಎಂ.ಎಫ್, ಸಿ ಪ್ರಧಾನ ಸಿವಿಲ್ ನ್ಯಾಯಧಿಶ ಮಂಜುನಾಥ ಬಣಕಾರ್ ಕಳವಳ ವ್ಯಕ್ತಪಡಿಸಿದರು.

ಇಲ್ಲಿಯ ನ್ಯಾಯಾಲಯ ಮತ್ತು ಅರಣ್ಯ ಇಲಾಖೆ ವತಿಯಿಂದ ನ್ಯಾಯಾಲಯದ ಅವರಣದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು, ಸಸಿಗಳಿಗೆ ನೀರುಣಿಸಿ ಮಾತನಾಡಿದರು.

ಕೇವಲ ಗಿಡಗಳನ್ನು ನೆಡುವುದರಿಂದ ಪರಿಸರ ದಿನಾಚರಣೆಯಾಗುವುದಿಲ್ಲ. ಸಸಿಗಳನ್ನು ನೆಟ್ಟು ಅವುಗಳು ಮರಗಳಾಗಿ ಬೆಳೆಯುವಂತೆ ಸಂರಕ್ಷಣೆ ಮಾಡಬೇಕು. ಗಿಡಮರಗಳನ್ನು ಉಳಿಸಿ ಬೆಳಸಲು ಪ್ರತಿಯೋಬ್ಬರು ಸಂಕಲ್ಪ ಮಾಡಬೇಕು ಎಂದ ಅವರು ಪ್ಲಾಸ್ಟಿಕ್ ಬಳಕೆಯನ್ನು ನಾವು ಕಡಿಮೆ ಮಾಡಬೇಕು ವ್ಯವಹಾರ ಮಾಡಲು ಪೇಟೆಗೆ ಬರುವಾಗ ಮನೆಯಿಂದ ಬಟ್ಟೆಯ ಕೈ ಚೀಲವನ್ನು ತೆಗೆದುಕೊಂಡು ಬರಬೇಕು. ಪ್ಲಾಸ್ಟಿಕ್ ಬಳಕೆ ಮಾಡುವುದರಿಂದ ಪರಿಸರಕ್ಕೆ ಹೆಚ್ಚು ಹಾನಿಯಾಗುತ್ತದೆ ಎಂದರು.

ಪ್ರಕೃತಿ ನಾಶದಿಂದ ಜೀವ ಸಂಕುಲಕ್ಕೆ ಅಪತ್ತು ಎದುರಾಗಿದೆ ಅದ್ದರಿಂದ ಜನ ಸಾಮನ್ಯರು ಪರಿಸರದ ಬಗ್ಗೆ ಜಾಗೃತರಾಗಬೇಕು. ಪರಿಸರ ನಾಶ ಪ್ರತಿಯೊಂದು ಮನೆಯಿಂದ ಒಂದಲ್ಲ ಒಂದು ರೀತಿಯಲ್ಲಿ ಅಗುತ್ತಿದೆ. ಈ ಬಗ್ಗೆ ಮನುಷ್ಯ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.


ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸೂಚನೆಯಂತೆ ಜಿಲ್ಲಾ ಮಟ್ಟದ ಪ್ರಾಧಿಕಾರಗಳು,ಮತ್ತು ತಾಲೂಕು ಮಟ್ಟದ ಕಾನೂನು ಸೇವಾ ಸಮಿತಿಗಳವತಿಯಿಂದ ವಿಶ್ವಪರಿಸರ ದಿನಚಾರಣೆಯ ಅಂಗವಾಗಿ ಜೂನ್ 5 ರಿಂದ ಎರಡು ತಿಂಗಳ ಅವಧಿಯೊಳಗೆ ಒಟ್ಟು 5 ಕೋಟಿ ಸಸಿಗಳನ್ನು ನಡೆುವ ಅಭಿಯಾನ ಹಮ್ಮಿಕೊಂಡಿದ್ದು, ಬೆಂಗಳೂರಿನಲ್ಲಿ 2 ಕೋಟಿ ಹಾಗೂ ರಾಜ್ಯದ ಇತರೆ ಜಿಲ್ಲೆಗಳಲ್ಲಿ 3 ಕೋಟಿ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ ಎಂದರು.

ಹೆಚ್ಚುವರಿ ನ್ಯಾಯಧಿಶರಾದ ಪುಣ್ಯಕೋಟಿ, ವಲಯ ಅರಣ್ಯಾಧಿಕಾರಿ ಕಿಶೋರ್ ಆರ್.ಎಪ್.ಓ. ಹನುಮಂತ ನಾಯ್ಕ, ಉಪ ಅರಣ್ಯ ವಲಯಾಧಿಕಾರಿ ಸತೀಶ್ ಕಣವಿ, ವಕೀಲರ ಸಂಘದ ಅಧ್ಯಕ್ಷ ಎಂ.ಗುಡ್ಡಪ್ಪ, ಉಪಾಧ್ಯಕ್ಷ ಶಾಂತಕುಮಾರ್, ಕಾರ್ಯದರ್ಶಿ ಜಗದೀಶ್, ಎ.ಪಿ.ಪಿ.ಗಳಾದ ಸ್ವಪ್ನ, ರೇಖಾ, ಆರಣ್ಯ ಇಲಾಖೆ ಸ್ವಪ್ನ, ವಕೀಲರಾದ ಉಮೇಶ್, ನ್ಯಾಯಾಂಗ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.