ಕಸಾಪ ಸದಸ್ಯರ ಹಕ್ಕು ಕಸಿವ ಬೈಲಾ ಹಿಂಪಡೆಯಿರಿ

| Published : Jun 10 2025, 02:13 AM IST

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಇದರ ಗೌರವಾನ್ವಿತ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಬೈಲಾ ಅಂಗೀಕರಿಸಿದ್ದು, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಆಗ್ರಹ । ಕ್ರಮಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ । ಕನ್ನಡಿಗರ ಜಾಗೃತಿ ಸಮಾವೇಶ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಇದರ ಗೌರವಾನ್ವಿತ ಸದಸ್ಯರ ಹಕ್ಕುಗಳನ್ನು ಮೊಟಕುಗೊಳಿಸುವ ಬೈಲಾ ಅಂಗೀಕರಿಸಿದ್ದು, ಅದನ್ನು ತಕ್ಷಣ ಹಿಂಪಡೆಯುವಂತೆ ಆಗ್ರಹಿಸಿ ಸೋಮವಾರ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ಪ್ರಮುಖರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಕನ್ನಡ-ಕನ್ನಡಿಗ, ಕರ್ನಾಟಕದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ನಿರಂತರವಾಗಿ ಕಳೆದ 110 ವರ್ಷಗಳಿಂದ ಕೆಲಸ ಮಾಡುತ್ತಿದೆ. ಆದರೆ ಈಚಿನ ದಿನಗಳಲ್ಲಿ ಪರಿಷತ್ತು ತನ್ನ ಘನ ಉದ್ದೇಶವನ್ನು ಮರೆತಂತೆ ಕಾಣುತ್ತಿದೆ. ಅದರಲ್ಲೂ ಈಗಿನ ಅಧ್ಯಕ್ಷರು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಪರಿಷತ್ತಿನ ಘನತೆಗೆ ಧಕ್ಕೆ ಬರುವಂತೆ ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯ ಹಾಗೂ ತಾತ್ವಿಕತೆಗೆ ಧಕ್ಕೆ ತರುವ ರೀತಿಯಲ್ಲಿ ಕಳೆದ 10 ವರ್ಷದಿಂದ ಬೈಲಾ ತಿದ್ದುಪಡಿ ಆಗಿವೆ. ಪರಿಷತ್ತಿನ ಅವಧಿ ವಿಸ್ತರಣೆ, ಜನತಂತ್ರ ಮಾದರಿಯಲ್ಲಿ ಆಯ್ಕೆಯಾದ 35 ಘಟಕಗಳ ಚುನಾಯಿತ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ದುರುದ್ದೇಶದಿಂದ 21 ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿರುವುದು ಸೇರಿದಂತೆ ಹಲವು ತಿದ್ದುಪಡಿ ಆಗಿವೆ. ಇಂತಹ ಅಸಂವಿಧಾನಿಕ, ಸರ್ವಾಧಿಕಾರತ್ವದ ದುರುದ್ದೇಶಪೂರಿತ ಬೈಲಾ ತಿದ್ದುಪಡಿಗೆ ಯಾವುದೇ ಅವಕಾಶವನ್ನು ನೀಡಬಾರದು. ಇಂತಹ ತಿದ್ದುಪಡಿಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಅವ್ಯವಹಾರ, ಆರ್ಥಿಕ ಅಶಿಸ್ತು ಎದ್ದುಕಾಣುತ್ತಿದೆ. ಹಾಲಿ ಅಧ್ಯಕ್ಷರು ಸಿದ್ಧಪಡಿಸಿರುವ ಹಿಂದಿನ ವರ್ಷದ ಜಮಾ ಖರ್ಚಿನ ವಿವರದಂತೆ ಅಧ್ಯಕ್ಷರು ವೇತನ 4.2 ಲಕ್ಷ ರು., ದಿನಭತ್ಯೆ ಬಾಬು 7.6 ಲಕ್ಷ ರು., ಪ್ರಯಾಣ ವೆಚ್ಚ 6.7 ಲಕ್ಷ ರು., ವಾಹನ ನಿರ್ವಹಣೆ ವೆಚ್ಚ 93 ಸಾವಿರ ರು., ದಿನಪತ್ರಿಕೆ ವೆಚ್ಚ 33 ಸಾವಿರ ರು., ಫೋನ್‌ ವೆಚ್ಚ 43 ಸಾವಿರ ರು., ಇಂಧನ ವೆಚ್ಚ 18 ಸಾವಿರ ರು. ಸೇರಿ ವರ್ಷಕ್ಕೆ ಸುಮಾರು 22.6 ಲಕ್ಷ ರು. ಪಡೆದಿರುತ್ತಾರೆ. ಹಿಂದಿನ ಯಾವ ಅಧ್ಯಕ್ಷರೂ ಪಡೆಯದ ಈ ಸವಲತ್ತನ್ನು ಈ ಅಧ್ಯಕ್ಷರು ಸಾಹಿತ್ಯ ಪರಿಷತ್ತಿನ ನಿಧಿಯಿಂದ ಬಳಸಿರುತ್ತಾರೆ ಎಂದು ಆರೋಪಿಸಿದರು.

ಪದಾಧಿಕಾರಿಗಳು ಹಾಗೂ ಅನಗತ್ಯ ಘಟಕಗಳ ಮುಖ್ಯಸ್ಥರಿಗಾಗಿ ಪ್ರತಿವರ್ಷ 19 ಲಕ್ಷ ರು. ವೆಚ್ಚ ಮಾಡಲಾಗಿದೆ. ಜತೆಗೆ 2023-24ನೇ ಸಾಲಿನ ವಾರ್ಷಿಕ ವರದಿ, ಲೆಕ್ಕ ಪರಿಶೋಧಕರ ತನಿಖಾ ವರದಿಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ, ಕಾಮಗಾರಿ ವೆಚ್ಚದ ಬಗ್ಗೆ, ನವೀಕರಣದ ಬಗ್ಗೆ ಲೋಪಗಳನ್ನು ಎತ್ತಿಹಿಡಿದಿದ್ದು, ಈ ಎಲ್ಲದರ ಕುರಿತು ಉನ್ನತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಹಾಲಿ ಅಧ್ಯಕ್ಷರ ದೋರಣೆಯನ್ನು ಪ್ರಶ್ನಿಸುವ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾಯಿತ ಜಿಲ್ಲಾ ಘಟಕದ ಅಧ್ಯಕ್ಷರು, ಕಾರ್ಯಕಾರಿ ಸಮಿತಿ ಸದಸ್ಯರು, ಅಜೀವ ಸದಸ್ಯರಿಗೆ ನೊಟೀಸ್ ನೀಡುವುದು, ಅವರನ್ನು ಅಮಾನತು ಮಾಡುವುದನ್ನುಕೂಡಲೇ ನಿಲ್ಲಿಸಬೇಕು. ಈಗಾಗಲೇ ನೀಡಿರುವ ನೊಟೀಸ್‍ಗಳನ್ನು ಪ್ರಾಥಮಿಕ ಸದಸ್ಯತ್ವ ಅಮಾನತು ಆದೇಶಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಮಂಡ್ಯ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚ ಮಾಹಿತಿ ನೀಡದ ರಾಜ್ಯಾಧ್ಯಕ್ಷರು ಮುಂಬರುವ ಬಳ್ಳಾರಿ ಸಮ್ಮೇಳನಕ್ಕೆ 40 ಕೋಟಿ ರು. ಅನುದಾನ ಕೇಳುತ್ತಿದ್ದಾರೆ. ಇದು ದೊಡ್ಡ ಭ್ರಷ್ಟಾಚಾರದ ಹುನ್ನಾರವಾಗಿದೆ. ಸಮ್ಮೇಳನಕ್ಕೆ ಇಷ್ಟೊಂದು ಅನುದಾನದ ಅಗತ್ಯ ಇರುವುದಿಲ್ಲ. ಸಮ್ಮೇಳನದ ವಿವಿಧ ಕಾರ್ಯ ನಿರ್ವಹಿಸಲು ಖಾಸಗಿ ವ್ಯಕ್ತಿಗಳು, ಸಂಸ್ಥೆಗಳಿಂದ ಟೆಂಡರ್ ಕರೆದು ನಿರ್ಧಾರ ಕೈಗೊಳ್ಳುವುದಕ್ಕೆ ಒತ್ತು ನೀಡಬೇಕು ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯು ಶಿವಮೊಗ್ಗದಲ್ಲಿ ಕನ್ನಡಿಗರ ಜಾಗೃತಿ ಸಮಾವೇಶವನ್ನು ಆಯೋಜಿಸಿತ್ತು. ನಾಡಿನ ಹಲವು ಗಣ್ಯರು ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪ್ರತಿನಿಧಿಗಳ ಸಮ್ಮುಖದಲ್ಲಿ ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಲಾಗಿದೆ ಎಂದು ತಿಳಿಸಿದರು.

ವಕೀಲರಾದ ಶ್ರೀಪಾಲ್, ಪತ್ರಕರ್ತ ಚಂದ್ರಶೇಖರ್ ಹೊನ್ನಾಳಿ, ಎಸ್.ಬಿ. ಅಶೋಕ್ ಕುಮಾರ್ ಗಾಂಧಿ ಬಸಪ್ಪ, ದೇವಾನಂದ, ಪುಟ್ಟಯ್ಯ, ಅಕ್ಷತಾ ಮೊದಲಾದವರು ಇದ್ದರು.