ವರಮಹಾಲಕ್ಷ್ಮೀ ಹಬ್ಬದಂದು ಪಕ್ಕದ ಮನೆಯ ಪೂಜೆಗೆ ತೆರಳಿದ್ದ ಮಹಿಳೆಯೊಬ್ಬರಿಗೆ ಚಿನ್ನಾಭರಣ ಕಳ್ಳತನದ ಆರೋಪ ಹೊರಿಸಿ ಬಂಕಾಪುರ ಪೊಲೀಸರು ವಿಚಾರಣೆ ನೆಪದಲ್ಲಿ ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಚಿನ್ನಾಭರಣ ಕಳ್ಳತನದ ವಿಚಾರಣೆ ವೇಳೆ ವಿದ್ಯುತ್ ಶಾಕ್ ನೀಡಿದ ಆರೋಪಕನ್ನಡಪ್ರಭ ವಾರ್ತೆ ಬಂಕಾಪುರ

ವರಮಹಾಲಕ್ಷ್ಮೀ ಹಬ್ಬದಂದು ಪಕ್ಕದ ಮನೆಯ ಪೂಜೆಗೆ ತೆರಳಿದ್ದ ಮಹಿಳೆಯೊಬ್ಬರಿಗೆ ಚಿನ್ನಾಭರಣ ಕಳ್ಳತನದ ಆರೋಪ ಹೊರಿಸಿ ಬಂಕಾಪುರ ಪೊಲೀಸರು ವಿಚಾರಣೆ ನೆಪದಲ್ಲಿ ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಿದ್ದಾರೆಂಬ ಗಂಭೀರ ಆರೋಪ ಕೇಳಿಬಂದಿದೆ.

ಶಿಗ್ಗಾಂವಿ ತಾಲೂಕಿನ ಶಿಡ್ಲಾಪುರ ಗ್ರಾಮದ ನೀಲಮ್ಮ (ನೀಲವ್ವ) ಎಂಬುವರು ಪೊಲೀಸರ ಟಾರ್ಚರ್‌ಗೆ ಒಳಗಾಗಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಸ್ವಸ್ಥಗೊಂಡಿರುವ ನೀಲಮ್ಮ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ವರಮಹಾಲಕ್ಷ್ಮೀ ಹಬ್ಬದಂದು ಶಿಡ್ಲಾಪುರ ಗ್ರಾಮದ ನಾಗರಾಜ ಸುಂಕದ ಅವರ ಮನೆಯಲ್ಲಿ ಪೂಜೆ ಏರ್ಪಡಿಸಲಾಗಿತ್ತು. ಪಕ್ಕದ ಮನೆಯ ಮಹಿಳೆಯರು ಸೇರಿದಂತೆ ಸುಮಾರು 11 ಮಂದಿ ಉಡಿ ತುಂಬಿಸಿಕೊಳ್ಳಲು ಪೂಜೆಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ದೇವರ ಮೇಲಿದ್ದ ಚಿನ್ನದ ಆಭರಣ ಕಳುವಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಈ ಕುರಿತು ಕುಟುಂಬದವರು ಬಂಕಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ವಿಚಾರಣೆಗಾಗಿ ನೀಲಮ್ಮ ಅವರನ್ನು ಠಾಣೆಗೆ ಕರೆಸಿಕೊಂಡು, ಚಿನ್ನಾಭರಣ ಕಳ್ಳತನದ ಬಗ್ಗೆ ಒಪ್ಪಿಕೊಳ್ಳುವಂತೆ ಒತ್ತಡ ಹೇರಲಾಗಿದೆ. ಈ ವೇಳೆ ವಿದ್ಯುತ್ ಶಾಕ್ ನೀಡಿ ಹಿಂಸೆ ನೀಡಲಾಗಿದೆ ಎಂದು ನೀಲಮ್ಮ ಹಾಗೂ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ನಾವು ಬಡವರು, ಕಳ್ಳತನ ಮಾಡಿಲ್ಲ. ಚಿನ್ನದ ಹಣವನ್ನು ಎಲ್ಲಿಂದ ತರಬೇಕು? ಪೊಲೀಸರು ವಿದ್ಯುತ್ ಶಾಕ್ ನೀಡಿ ಕಳ್ಳತನ ಒಪ್ಪಿಕೊಳ್ಳುವಂತೆ ಒತ್ತಡ ಹಾಕಿದ್ದಾರೆ ಎಂದು ನೀಲಮ್ಮ ನೋವಿನಿಂದ ಕಣ್ಣೀರಿಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಘಟನೆಯಿಂದ ಅಸ್ವಸ್ಥಗೊಂಡಿರುವ ನೀಲಮ್ಮ ಸದ್ಯ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಸೂಕ್ತ ತನಿಖೆ ನಡೆಸಿ, ಆರೋಪ ಸತ್ಯವಾಗಿದ್ದರೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.